ಕೆರೆಗೆ ಹಾರಿ ಎಚ್ಐವಿ ಸೋಂಕಿತೆ ಆತ್ಮಹತ್ಯೆ: ಗ್ರಾಮಸ್ಥರು ಮಾಡಿದ್ದೇನು?
ಧಾರವಾಡ, ಡಿಸೆಂಬರ್ 5: ಎಚ್ಐವಿ ಸೋಂಕಿತೆಯೊಬ್ಬಳು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮಸ್ಥರು ಇಡೀ ಕೆರೆಯನ್ನೇ ಖಾಲಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಸಮಾಜದಲ್ಲಿ ಇನ್ನು ಎಚ್ಐವಿ ಎಂದರೇನು? ರೋಗ ಹೇಗೆ ಬರುತ್ತದೆ ಎನ್ನುವ ಜ್ಞಾನವಿಲ್ಲ, ಮೂಢನಂಬಿಕೆಯಿಂದ ಇನ್ನೂ ಹೊರಬಂದಿಲ್ಲ. ಇಂಥದ್ದೊಂದು ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.ನವೆಂಬರ್ 29ರಂದು ಶಾಂತವ್ವ ಆತ್ಮಹತ್ಯೆ ಮಾಡಿಕೊಂಡಿದ್ದರು, ಆಕೆ ಬಿದ್ದು ಸತ್ತ ನೀರನ್ನು ಕುಡಿದರೆ ತಮಗೂ ಕಾಯಿಲೆ ಬರುತ್ತದೆ ಎಂಬ ಮೂಢನಂಬಿಕೆಯಿಂದ 32 ಎಕರೆ ಕೆರೆಯನ್ನು ಸ್ವಚ್ಛಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕೆರೆಗೆ 20 ಪಂಪ್ ಸೆಟ್ ಅಳವಡಿಸಿ ನೀರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಕೆರೆಯ ನೀರು ಅಷ್ಟು ಸುಲಭವಾಗಿ ಖಾಲಿಯಾಗುವ ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ, ಕೆರೆಯ ವಾಲ್ನ್ನು ಸಹ ತೆರೆದು ನೀರು ಖಾಲಿ ಮಾಡಲಾಗುತ್ತಿದೆ.

50ಕ್ಕಿಂತ ಹೆಚ್ಚು ಜನರು ಈ ನೀರನ್ನು ಖಾಲಿ ಮಾಡಿಸುವ ಕೆಲಸದಲ್ಲಿ ವ್ಯಸ್ತರಾಗಿದ್ದು, ಕೆರೆ ಬರಿದಾಗಲು ಮತ್ತೆ 5-6 ದಿನಗಳಾದರೂ ತಗುಲಬಹುದೆಂದು ಅಂದಾಜಿಸಲಾಗಿದೆ. ಡಿಸೆಂಬರ್ 6ರೊಳಗೆ ನೀರು ಬರಿದಾಗಿಸಿ ಎಂದು ತಾಲೂಕಾಡಳಿತ ಹೇಳಿದೆ.
ಜಲ ತಜ್ಞ ಅಧಿಕಾರಿಗಳಿಂದ ಪರೀಕ್ಷೆ ಮಾಡಿಸಿದೆವು. ನೀರಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ. ಬಳಕೆ ಮಾಡಲು ಯಾವ ಸಮಸ್ಯೆಯೂ ಇಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರು ಆದರೂ ಜನರು ಒಪ್ಪುವ ಸ್ಥಿತಿಯಲ್ಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications