ಉತ್ತರ ಕರ್ನಾಟಕದ ಅಭಿವೃದ್ಧಿ ಕಡೆ ಚಿತ್ತ ಹರಿಸಿದ ನಿತಿನ್ ಗಡ್ಕರಿ
ಹುಬ್ಬಳ್ಳಿ,ಮಾರ್ಚ್,29: ವಿಜಯಪುರ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಮಂಗಳವಾರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೃಹತ್ ಸೇತುವೆ ನಿರ್ಮಾಣ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹುಬ್ಬಳ್ಳಿ ಭಾಗದ ಜನಪ್ರತಿನಿಧಿಗಳ ಬೇಡಿಕೆಯಂತೆ ಕಿತ್ತೂರ ಚೆನ್ನಮ್ಮ ಮತ್ತು ಧಾರವಾಡದ ಜುಬ್ಲಿ ವೃತ್ತದಲ್ಲಿ ರಸ್ತೆ ಸುರಂಗ ಮಾರ್ಗ ನಿರ್ಮಿಸುವಂತೆ ಮತ್ತು ಈ ಕುರಿತು ನೀಲಿ ನಕ್ಷೆಯನ್ನು ಸಿದ್ಧಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.[ಕರಾವಳಿ ಭಾಗಕ್ಕೆ ಹಲವು ಕೊಡುಗೆ ನೀಡಿದ ನಿತಿನ್ ಗಡ್ಕರಿ]

ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ವಿಜಯಪುರ-ಹುಬ್ಬಳ್ಳಿವರೆಗಿನ ರಸ್ತೆ ಬಲಗೊಳಿಸುವುದು ಮತ್ತು ಎರಡು ಪಥಗಳಲ್ಲಿ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ 4 ಪಥದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಲಾಗುವುದು. ಬೆಣ್ಣೆಹಳ್ಳಕ್ಕೆ ಅಡ್ಡಲಾಗಿ ಬೃಹತ್ ಸೇತುವೆ ನಿರ್ಮಾಣ ಕಾರ್ಯ ಕೈಗೊಳ್ಳಲು ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು
ದೇಶವು ಅಭಿವೃದ್ಧಿ ಪಥದತ್ತ ಸಾಗಲು ಕೃಷಿ ಮತ್ತು ಕೈಗಾರಿಕೆಗೆ ಒತ್ತು ನೀಡಬೇಕು. ಹಾಗಾಗಿ ನದಿ ನೀರು ಪೋಲಾಗಿ ಸಮುದ್ರಕ್ಕೆ ಸೇರುವುದನ್ನು ತಡೆಗಟ್ಟಲು ಬ್ರೀಜ್ ಕಂ ಬ್ಯಾರೇಜ್ ಪಕ್ಕದಲ್ಲಿ ಚಿಕ್ಕ ನಾಲೆಯನ್ನು ತೆಗೆಯುವುದರಿಂದ ಕೃಷಿ ಭೂಮಿಗೆ ನೀರು ಪೂರೈಸಲು ಅನುಕೂಲವಾಗುವಂತೆ ಅನುಸರಿಸಬೇಕು ಎಂದರು.[ಕರ್ನಾಟಕದ ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರು ತಗೊಳ್ಳಿ!]

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, 'ವಿಜಯಪುರ ಮತ್ತು ಹುಬ್ಬಳ್ಳಿಯ ನಡುವೆ ಎರಡು ಪಥಗಳ ರಸ್ತೆ ಅಗಲೀಕರಣವನ್ನು 4 ಪಥಗಳಾಗಿ ಅಭಿವೃದ್ಧಿ ಪಡಿಸಲು ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು' ಎಂದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ಬೈಪಾಸ್ ರಸ್ತೆ ನಿರ್ಮಾಣಗೊಳಿಸಬೇಕೆಂಬ ಬೇಡಿಕೆಯನ್ನು ಸಚಿವರ ಮುಂದೆ ಇರಿಸಿದರು.
ರಾಜ್ಯದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ ಮಾತನಾಡಿ, ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು, ಅಭಿವೃದ್ಧಿ ಸಂಕೇತಗಳು. ರಸ್ತೆ ಕೇವಲ ಓಡಾಟಕ್ಕೆ ಮಾತ್ರ ಮೀಸಲಾಗದೆ ವಾಣಿಜ್ಯ, ಆರ್ಥಿಕ, ಔದ್ಯೋಗಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದರು.[ಬೆಂಗಳೂರಿಗೆ 12 ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್ 'ಭಾಗ್ಯ']

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಹುಬ್ಬಳ್ಳಿಯ ಚೆನ್ನಮ್ಮ ಮತ್ತು ಧಾರವಾಡದ ಜುಬ್ಲಿ ಸರ್ಕಲಿನಲ್ಲಿ ಜನದಟ್ಟಣೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರು.
ಸಂಸದ ರಮೇಶ ಜಿಗಜಿಣಗಿ, ಪಿ.ಸಿ.ಗದ್ಧಿಗೌಡರ, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಸಿ.ಎಸ್. ಶಿವಳ್ಳಿ, ಶಾಸಕ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಬಿ ಅರ್. ಯಾವಗಲ್ಲ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಬಸವರಾಜ ಹೊರಟ್ಟಿ, ಎಸ್. ಬಿ. ಸಂಕನೂರ, ಹು- ಧಾ ಮಹಾನಗರ ಪಾಲಿಕೆಯ ಮಹಾಪೌರ ಮಂಜುಳಾ ಅಕ್ಕೂರ , ಉಪ ಮಹಾಪೌರ ಲಕ್ಷ್ಮೀ ಉಪ್ಪಾರ ಇನ್ನಿತರರು ಭಾಗವಹಿಸಿದ್ದರು.[ಬೆಂಗಳೂರು ನಗರಕ್ಕೊಂದು 10 ಪಥದ ರಸ್ತೆ]












Click it and Unblock the Notifications