ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಹ್ಲಾದ್ ಜೋಶಿ ಕಚೇರಿಗೆ ರೈತರ ಮುತ್ತಿಗೆ
ಧಾರವಾಡ, ಸೆಪ್ಟೆಂಬರ್ 04: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ಜಿಲ್ಲೆಯ ರೈತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯಿಂದ ಹುಬ್ಬಳ್ಳಿಯಲ್ಲಿರುವ ಪ್ರಹ್ಲಾದ್ ಜೋಶಿ ಕಚೇರಿಗೆ ಮುತ್ತಿಗೆ ಹಾಕಿದ್ದು, ಮೇಕೆದಾಟು ಯೋಜನೆ ಕೂಡಲೇ ಕೈಗೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಮಹಾದಾಯಿ ನದಿ ನೀರಿನ ವಿವಾದವನ್ನು ಬೇಗನೆ ಬಗೆ ಹರಿಸಬೇಕು, ಕಬ್ಬು ಬೆಳೆಗಾರರ ಹಿಂದಿನ ಬಾಕಿ ಕೊಡಿಸಬೇಕು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು, ಈ ವರ್ಷ ಕಬ್ಬು ಬೆಲೆ ಟನ್ಗೆ 4 ಸಾವಿರ ರೂಪಾಯಿ ಏರಿಸಬೇಕು ಎಂದು ರೈತರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಅಕ್ಕಿ, ಸಕ್ಕರೆ, ಈರುಳ್ಳಿ ರಪ್ತನ್ನು ನಿಷೇಧ ಮಾಡದಿರುವುದಕ್ಕೆ ರೈತರು ಕಿಡಿಕಾರಿದ್ದು, ರೈತರ ಸಮಸ್ಯೆಗಳ ಕುರಿತು ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರ ಆಗ್ರಹ
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿದ ರೈತರು ಹಲವು ಗ್ರಾಮಗಳಲ್ಲಿ ವಿದ್ಯುತ್ ಇಲ್ಲ. ಲೋಡ್ ಶೆಡ್ಡಿಂಗ್ ನೆಪದಲ್ಲಿ ಅನಿಯಮಿತ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಕನಿಷ್ಠ ಟೂ ಫೇಸ್ನಾದರೂ ನೀಡಬೇಕು. ಟೂ ಫೇಸ್ ಇಲ್ಲದ ಕಾರಣ ಕಳೆದ ಎಂಟು ದಿನಗಳಿಂದ ವಿದ್ಯುತ್ ಇಲ್ಲದೆ ನಾಗರಿಕರು ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದರು.
ಕೆಲವು ಕಡೆ ಕಾಲುವೆ ನೀರಿನ ಮೇಲೆ ನಂಬಿಕೆ ಇಡಲಾಗಿತ್ತು. ಆದರೆ ಮಳೆಯ ಆಭಾವದಿಂದ ಕಾಲುವೆಗೆ ನೀರು ಹರಿಸುವಲ್ಲಿ ಸಾಕಷ್ಟು ವಿಳಂಬವಾದ್ದರಿಂದ ರೈತರು ಪಂಪ್ಸೆಟ್ಗಳನ್ನೇ ನಂಬಿದ್ದಾರೆ. ಆದರೆ ವಿದ್ಯುತ್ ನಿಂತು ಹೋಗಿರುವುದರಿಂದ ಬೆಳೆಗಳು ನೀರಿಲ್ಲದೆ ಬಾಡಿ ಹೋಗುತ್ತಿವೆ ಎಂದು ದೂರಿದರು.
ಸಕಾಲಕ್ಕೆ ಮಳೆಯಾಗದೆ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ತೆರೆದ ಬಾವಿ ಮತ್ತು ಬೋರ್ಗಳನ್ನೇ ಆಶ್ರಯಿಸಿದ್ದೇವೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗಳಿಗೆ ನೀರುಣಿಸಲಾಗುತ್ತಿಲ್ಲ. ಕರೆಂಟ್ ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ಗೊತ್ತೇ ಆಗುವುದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಅಲ್ಲದೇ ಪ್ರತಿಭಟನೆ ಮಾಡುವುದಾಗಿ ಮೌಖಿಕವಾಗಿ ತಿಳಿಸಿದ್ದೇವೆ. ಆದರೆ ಇದಕ್ಕೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಬೆಳೆಯುವ ಹಂತದಲ್ಲಿರುವ ಬೆಳೆಗಳಿಗೆ ನೀರು ಹರಿಸಲು ತೊಂದರೆ ಉಂಟಾಗಿದೆ. ಮಳೆಯಾಗದ ಕಾರಣ ಬೆಳೆಗಳು ಒಣಗುತ್ತಿವೆ. ಹಾಗಾಗಿ ಕೊಳವೆ ಬಾವಿಗಳ ಸೌಲಭ್ಯ ಹೊಂದಿರುವ ರೈತರು ನೀರು ಹಾಯಿಸಲು ಮುಂದಾದರೆ ವಿದ್ಯುತ್ ಕಡಿತ ಹಾಗೂ ಕಡಿಮೆ ವೋಲ್ಟೇಜ್ ಪೂರೈಕೆಯಿಂದ ರೈತರು ರೋಸಿ ಹೋಗಿದ್ದಾರೆ ಎಂದರು. ಇನ್ನು ಯಾವುದೇ ಕಾರಣಕ್ಕೂ ಏಳು ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಇಲ್ಲಿಂದ ಹೋಗಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications