ಭೀಕರ ಬರಗಾಲ : ಧಾರವಾಡಕ್ಕೆ ಏ.26ರಂದು ಸಿದ್ದು ಭೇಟಿ
ಧಾರವಾಡ, ಏಪ್ರಿಲ್ 26 : ಉತ್ತರ ಕರ್ನಾಟಕದ ಇತರ ಜಿಲ್ಲೆಗಳಂತೆ ಧಾರವಾಡ ಜಿಲ್ಲೆ ಕೂಡ ಭೀಕರ ಬರಗಾಲಕ್ಕೆ ತುತ್ತಾಗಿದೆ. ರಣರಣ ಬಿಸಿಲಿನ ನಡುವೆ ಕುಡಿಯುವ ನೀರಿನ ಭಾರೀ ಕೊರತೆ ಎದುರಿಸುತ್ತಿರುವ ಸ್ಥಳಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ.
ಸಿದ್ಧರಾಮಯ್ಯ ಮಂಗಳವಾರ ಏಪ್ರಿಲ್ 26ರಂದು ಧಾರವಾಡ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನಂತರ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ನಲ್ಲಿರುವ ಕನ್ವೆನ್ಷನ್ ಸೆಂಟರ್ ನಲ್ಲಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಭೇಟಿಯ ವಿವರಗಳು ಕೆಳಗಿನಂತಿವೆ.
ಬೆಳಿಗ್ಗೆ 9 ಗಂಟೆಗೆ ಧಾರವಾಡದಿಂದ ಹೊರಡುವ ಮುಖ್ಯಮಂತ್ರಿಗಳು 9.10ಕ್ಕೆ ಧಾರವಾಡ ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ಕುಡಿಯುವ ನೀರು ಸರಬರಾಜು ಜಾಕ್ವೆಲ್ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. 9.50ಕ್ಕೆ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, 10.05ಕ್ಕೆ ನಾಗರಳ್ಳಿಯ ಕುಡಿಯುವ ನೀರಿನ ಟ್ಯಾಂಕ್ ವೀಕ್ಷಣೆ. [ಬರ : ಗುಳೇ ಹೋಗೋವ್ರಿಗೆ ಸಾರಿಗೆ ಸಂಸ್ಥೆ ಆಫರ್!]

10.25ಕ್ಕೆ ಕುಂದಗೋಳ ತಾಲೂಕಿನ ಗುಡೇನಕಟ್ಟಿಯಲ್ಲಿ ಮಹಾತ್ಮ ಗಾಂಧೀ ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ, 10.45ಕ್ಕೆ ಯರಿನಾರಾಯಣಪುರದಲ್ಲಿ ಚೆಕ್ ಡ್ಯಾಮ್ ಕಾಮಗಾರಿ ಹಾಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಯ ಪರಿಶೀಲನೆ.
11 ಗಂಟೆಗೆ ಯರಗುಪ್ಪಿ ಗ್ರಾಮದಲ್ಲಿನ ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ಕೆರೆಯ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ. 11.20ಕ್ಕೆ ಚಿಕ್ಕನರ್ತಿ, 11.35ಕ್ಕೆ ಬೆನಕನಹಳ್ಳಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗಳ ಪರಿಶೀಲನೆ ನಡೆಸಿ, 11.50ಕ್ಕೆ ಕುಂದಗೋಳದ ಎ.ಪಿ.ಎಂ.ಸಿ. ಆವರಣದಲ್ಲಿ ಸ್ಥಾಪಿಸಲಾಗಿರುವ ಮೇವು ಬ್ಯಾಂಕ್ ಸ್ಥಳಕ್ಕೆ ಭೇಟಿ.
ನಂತರ 12.20ಕ್ಕೆ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ನಲ್ಲಿರುವ ಕನ್ವೆನ್ಷನ್ ಸೆಂಟರ್ ನಲ್ಲಿ ಬರ ನಿರ್ವಹನೆಯ ಪರಿಶೀಲನಾ ಸಭೆ ನಡೆಸುವರು. ಬಳಿಕ 2 ಗಂಟೆಗೆ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಿಂದ ಹಾವೇರಿ ಜಿಲ್ಲೆಗೆ ಪ್ರಯಾಣ ಬೆಳೆಸುವರು.












Click it and Unblock the Notifications