ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ
ಧಾರವಾಡ, ಡಿಸೆಂಬರ್ 09 : ಧಾರವಾಡದಲ್ಲಿ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ ಸಿಕ್ಕಿದೆ. 2019ರ ಜನವರಿ 4 ರಿಂದ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಾಹಿತ್ಯ ಸಮ್ಮೇಳನದ ಆಯೋಜನೆಗೆ 2 ಕೋಟಿ ಅನುದಾನ ಮೀಸಲಾಗಿತ್ತು. ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 6 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಒಟ್ಟು 8 ಕೋಟಿ ಅನುದಾನ ಸಿಕ್ಕಿದೆ.
ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳನ್ನು ಪರಿಶೀಲಿಸಿ ಕನ್ನಡ ಸಾಹಿತ್ಯ ಪರಿಷತ್ತು 12 ಕೋಟಿ ಅನುದಾನದ ಪ್ರಸ್ತಾವನೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಸಲ್ಲಿಸಿತ್ತು.

ಈಗ ಒಟ್ಟಾರೆಯಾಗಿ 8 ಕೋಟಿ ಹಣ ಮಂಜೂರಾಗಿದೆ. ಮೈಸೂರು ಸಾಹಿತ್ಯ ಸಮ್ಮೇಳನಕ್ಕೂ 8 ಕೋಟಿ ಅನುದಾನ ನೀಡಲಾಗಿತ್ತು. ಈಗ ಧಾರವಾಡ ಉಳಿದ ಮೊತ್ತವನ್ನು ಕ್ರೋಡೀಕರಣ ಮಾಡುವತ್ತ ಗಮನ ಹರಿಸಿದೆ.
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ. 'ಸರ್ಕಾರಿ ನೌಕರರನ್ನು ಸಂಪರ್ಕಿಸಲಾಗಿದ್ದು, ಸಮ್ಮೇಳನಕ್ಕೆ ಒಂದು ದಿನದ ವೇತನವನ್ನು ದೇಣಿಗೆಯಾಗಿ ನೀಡಲು ಮೌಖಿಕ ಒಪ್ಪಿಗೆ ಸೂಚಿಸಿದ್ದಾರೆ' ಎಂದು ಹೇಳಿದ್ದಾರೆ.
'ಕಾರ್ಪೊರೇಟ್ ಕಂಪನಿಗಳಿಗೆ ಈಗಾಗಲೇ ಪತ್ರ ಬರೆದು ಪ್ರಾಯೋಜಕತ್ವ ಕೇಳಲಾಗಿದೆ. ಟಾಟಾ ಮತ್ತು ಇನ್ನಿತರ ಕಂಪನಿಗಳಿಂದ ನೆರವು ನಿರೀಕ್ಷಿಸಲಾಗಿದೆ. ಸಾರ್ವಜನಿಕರು, ಉದ್ಯಮಿಗಳು ಸಮ್ಮೇಳನಕ್ಕೆ ನೆರವು ನೀಡಲು ನಿರೀಕ್ಷಿಸಲಾಗಿದೆ. ಸಮ್ಮೇಳನಕ್ಕೆ ನೆರವು ನೀಡಲು ಅನುಕೂಲವಾಗುವಂತೆ ಸಿಎಸ್ಆರ್ ಖಾತೆ ತೆರೆಯಲಾಗಿದೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ರಾಯಚೂರಿನಲ್ಲಿ ನಡೆದ ಸಮ್ಮೇಳನಕ್ಕೆ 6 ಕೋಟಿ, ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕೆ 8 ಕೋಟಿ ರೂ. ಅನುದಾನ ನೀಡಲಾಗಿತ್ತು. ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ ನೀಡಲಾಗಿದೆ.












Click it and Unblock the Notifications