ಪೈಗಂಬರ್ ಸಲಿಂಗಕಾಮಿ ಹೇಳಿಕೆ : ಹಳೇಹುಬ್ಬಳ್ಳಿ ಉದ್ವಿಗ್ನ
ಹುಬ್ಬಳ್ಳಿ, ಡಿಸೆಂಬರ್, 14 : ಪೈಗಂಬರ್ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಪ್ರತಿಯಾಗಿ ಸೋಮವಾರ ಮಧ್ಯಾಹ್ನ ಹಳೇಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಮುಸ್ಲಿಂರ ಪ್ರತಿಭಟನೆ ವಿಕೋಪಕ್ಕೆ ತಿರುಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅನೇಕರಿಗೆ ಗಾಯಗಳಾಗಿವೆ, ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ಕಾರ್ಯಕಾರಿ ಅಧ್ಯಕ್ಷ ಕಮಲೇಶ್ ತಿವಾರಿ ತಮ್ಮ ಧರ್ಮಗುರು ಪ್ರವಾದಿ ಮಹಮ್ಮದ್ 'ಸಲಿಂಗಕಾಮಿ' ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಳೇಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. [ಪೈಗಂಬರ್ ಸಲಿಂಗಕಾಮಿ : ಸಿಡಿದೆದ್ದ ಹುಬ್ಬಳ್ಳಿ ಮುಸ್ಲಿಮರು]

ರಸ್ತೆ ತಡೆ ಮಾಡಿ ಟೈರ್ ಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ನಂತರ ರಸ್ತೆಯಲ್ಲಿನ ಕಾರು ಹಾಗೂ ಬಸ್ ಗಳಿಗೂ ಕಲ್ಲು ತೂರಿದ್ದಾರೆ. ಅಲ್ಲಿಯೇ ಇದ್ದ ಔಷಧ ಅಂಗಡಿಗೂ ಕಲ್ಲು ತೂರಿದ ಪ್ರತಿಭಟನಾಕಾರರು ಅಂಗಡಿಯನ್ನು ಧ್ವಂಸಗೊಳಿಸಿ ಮಾಲೀಕನನ್ನು ಹಿಗ್ಗಾಮುಗ್ಗಾ ಥಳಿಸಿದರು. ಅಂಗಡಿಯಲ್ಲಿನ ಔಷಧಗಳನ್ನು ರಸ್ತೆಗೆ ಚೆಲ್ಲಿ ದಾಂಧಲೆ ಮಾಡಿದರು. ಅಲ್ಲದೇ ಇತರ ಸಾರ್ವಜನಿಕರ ಸ್ವತ್ತುಗಳಿಗೆ ಸಾಕಷ್ಟು ಹಾನಿ ಮಾಡಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಉದ್ರಿಕ್ತರನ್ನು ಚೆದರಿಸಲು ಲಾಠಿ ಚಾರ್ಜ್ ಮಾಡಲಾರಂಭಿಸಿದರು. ಇದರಿಂದ ಇನ್ನಷ್ಟು ಉಗ್ರಗೊಂಡ ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಲಾರಂಭಿಸಿದರು. ಈ ಕಲ್ಲುತೂರಾಟದಿಂದ ಕೆಲ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಅಲ್ಲದೆ, ರಸ್ತೆ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತ್ತು.

ಪೊಲೀಸರ ವಾಹನಗಳಿಗೆ ಪ್ರತಿಭಟನಾಕಾರರು ಕಲ್ಲು ತೂರಿ ಸಾಕಷ್ಟು ಹಾನಿ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications