ಕಾವೇರಿ ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು
ಉಡುಪಿ, ಸೆಪ್ಟೆಂಬರ್ 15 : 'ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕನ್ನಡ ನಾಡಿಗೆ ಆಗಿರುವ ಸಂಕಷ್ಟದ ಬಗ್ಗೆ ಬಹಳ ಕಳವಳವಾಗಿದೆ. ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ. ಆದರೆ, ಸರಿಯಾಗಿ ಸ್ಥಳ ಪರಿಶೀಲನೆ ಮಾಡಿ, ನೀರಿನ ಪ್ರಮಾಣವನ್ನು ಪರೀಕ್ಷಿಸದೆ ಇಂತಹ ತೀರ್ಪು ಏಕೆ ನೀಡಿದೆಯೆಂದು? ಅರ್ಥವಾಗುತ್ತಿಲ್ಲ' ಎಂದು ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಕಳವಳ ವ್ಯಕ್ತಪಡಿಸಿದ್ದಾರೆ.
ಬುಧವಾರ ಈ ಕುರಿತು ಶ್ರೀಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 'ನಿರ್ಣಯವನ್ನು ಸರ್ಕಾರವು ಪಾಲಿಸಬೇಕಿಲ್ಲವೆಂದು ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು ಹೇಳಿಕೆ ನೀಡಿದ್ದಾರೆ. ಈ ಹೇಳೀಕೆಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಬೇಕು' ಎಂದು ಸರ್ಕಾರಕ್ಕೆ ಸಲಗೆ ನೀಡಿದರು.[ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?]

'ಎಲ್ಲಾ ರಾಜಕೀಯ ಪಕ್ಷಗಳು ಭೇದ ತೊರೆದು ಸರ್ವೋಚ್ಚ ನ್ಯಾಯಾಲಯದ ನಿರ್ಣಯವನ್ನು ಪಾಲಿಸದಿದ್ದರೆ ಆಗಬಹುದಾದ ಪರಿಣಾಮವನ್ನು ಪರಿಶೀಲಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸರ್ವ ಸಮ್ಮತ ಸಂಯುಕ್ತ ನಿರ್ಣಯ ತೆಗೆದುಕೊಳ್ಳಬೇಕು' ಎಂದು ಹೇಳಿದ್ದಾರೆ.[ಬೆಂಗಳೂರಿಗೆ ಕುಡಿಯುವ ನೀರಿನ ಕೊರತೆ ಇಲ್ಲ : ಸಿದ್ದರಾಮಯ್ಯ]
'ಅನಿವಾರ್ಯವಾದರೆ ಅಧಿಕಾರದ ತ್ಯಾಗ, ಜೈಲಿಗೆ ಹೋಗಲು ರಾಜಕಾರಣಿಗಳು ಸಿದ್ಧರಾಗಬೇಕು. ಕನ್ನಡ ನಾಡಿನ ಹಿತವೇ ಮುಖ್ಯವೆಂದು ಭಾವಿಸಿ ಎಲ್ಲಾ ರಾಜಕೀಯ ಪಕ್ಷಗಳು ಏಕಭಿಪ್ರಾಯದಿಂದ ಒಗ್ಗಟ್ಟಿನಿಂದ ಕಾರ್ಯಕ್ರಮವನ್ನು ಕೈಗೊಂಡರೆ ಖಂಡಿತವಾಗಿಯೂ ಯಶಸ್ಸು ದೊರಕುತ್ತದೆ' ಎಂದು ಶ್ರೀಗಳು ತಿಳಿಸಿದ್ದಾರೆ.[ಕಾವೇರಿ ಕಿಚ್ಚು : ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ವಿವರ]
'ಕನ್ನಡಿಗರೂ ತಮಿಳಿಗರೂ ಭಾವೋದ್ರೇಕದಿಂದ ಪರಸ್ಪರ ಹಿಂಸಾಚಾರಕ್ಕೆ ತೊಡಗಬಾರದು. ಕನ್ನಡ ನಾಡಿಗೆ ಅನ್ಯಾಯವಾಗದಂತೆ ಶಾಂತಿ ಸೌಹಾರ್ದದಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕು' ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications