ಪ್ರತಿಭಟನೆಗೆ ಮಣಿದ ಶೆಟ್ಟರ್, ಜೋಶಿ ರಾಜೀನಾಮೆ
ಹುಬ್ಬಳ್ಳಿ, ನ. 27 : ಹುಬ್ಬಳ್ಳಿಯ ಜಿಮಖಾನಾ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತನೆ ಮಾಡುವ ವಿರುದ್ಧ ನಡೆಯುತ್ತಿದ್ದ ಹೋರಾಟಕ್ಕೆ ಮಣಿದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಕೆಜಿಎ ಗೌರವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪಾಟೀಲ್ ಪುಟ್ಟಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ಗ್ರೌಂಡ್ ಬಚಾವೋ ಸಮಿತಿ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ.
ಹುಬ್ಬಳ್ಳಿಯ ಜಿಮಖಾನಾ ಮೈದಾನವನ್ನು (Karnataka Gymkhana Association ) ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತಿಸುವ ವಿರುದ್ಧ ಪಾಟೀಲ್ ಪುಟ್ಟಪ್ಪ ಅವರು ಗ್ರೌಂಡ್ ಬಚಾವೋ ಸಮಿತಿ ರಚಿಸಿಕೊಂಡು ಕೆಲವು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದರು. ಮೈದಾನವನ್ನು ಕ್ಲಬ್ ಆಗಿ ಪರಿವರ್ತಿಸಬಾರದು ಮತ್ತು ಕೆಜಿಎ ಆಡಳಿತ ಮಂಡಳಿಯಲ್ಲಿ ಗೌರವ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹೊಂದಿರುವ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. (ಶೆಟ್ಟರ್ ಗೆ ಒಂದು ದಿನದ ಗಡುವು ಕೊಟ್ಟ ಪಾಪು)

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಂಸದ ಅನಂತ ಕುಮಾರ್ ಅವರು ಮೈದಾನವನ್ನು ಕ್ಲಬ್ ಆಗಿ ಪರಿವರ್ತನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಆರೋಪಿಸಿದ್ದರು. (ಮೈದಾನ ಅಕ್ರಮದಲ್ಲಿ ಬಿಜೆಪಿ ನಾಯಕರು ಶಾಮೀಲು)
ರಿಕ್ರಿಯೇಶನ್ ಕ್ಲಬ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ನಿಲುವು ಪ್ರಕಟಿಸಬೇಕೆಂದು ಪಾಟೀಲ್ ಪುಟ್ಟಪ್ಪ ಅವರು ಜಗದೀಶ್ ಶೆಟ್ಟರ್ ನಿವಾಸದ ಮುಂದೆಯೂ ಧರಣಿ ನಡೆಸಿದ್ದರು. ಸಾರ್ವಜನಿಕರಿಗೆ ಮುಕ್ತವಾದ ಮೈದಾನವನ್ನು ರಿಕ್ರಿಯೇಶನ್ ಕ್ಲಬ್ ಆಗಿ ಪರಿವರ್ತಿಸುವಲ್ಲಿ ನನ್ನ ಪಾತ್ರವಿಲ್ಲ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದರು.
ಆದರೆ, ಸದ್ಯ ಹೆಚ್ಚಿನ ಒತ್ತಡಗಳಿಗೆ ಮಣಿದಿರುವ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ತಮ್ಮ ಗೌರವ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಜಿಎಯ ಗೌರವ ಅಧ್ಯಕ್ಷ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಮತ್ತು ಗೌರವ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಹ್ಲಾದ್ ಜೋಶಿ ರಾಜೀನಾಮೆ ಸಲ್ಲಿಸಿದ್ದಾರೆ. ಕೆಜಿಎ ವಿಶೇಷ ಸಾಮಾನ್ಯ ಸಭೆಯಲ್ಲಿ ಇಬ್ಬರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.












Click it and Unblock the Notifications