ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬಣ್ಣದರ್ಪಣೆ: ಜೋಶಿ, ಜಗ್ಗೇಶ್ ಚಾಲನೆ
ಧಾರವಾಡ, ಅಕ್ಟೋಬರ್, 28: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ 'ಬಣ್ಣದರ್ಪಣೆ'ಕಾರ್ಯಕ್ರಮಕ್ಕೆ ಅಕ್ಟೋಬರ್ 29ರ ಶನಿವಾರದಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಂಸದ, ನಟ ಜಗ್ಗೇಶ್ ಚಾಲನೆ ನೀಡಲಿದ್ದಾರೆ.
ಈ ಕುರಿತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ಕಳೆಗುಂದಿರುವ ಸರ್ಕಾರಿ ಶಾಲಾ - ಕಾಲೇಜುಗಳ ಗೋಡೆಗಳಿಗೆ ಹೊಸ ಕಳೆ ತರುವ ಉದ್ದೇಶದಿಂದ ಈ 'ಬಣ್ಣದರ್ಪಣೆ' ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಕುಂದಗೋಳ ತಾಲೂಕಿನ ಹರಭಟ್ಟ ಹೈಸ್ಕೂಲ್ನಲ್ಲಿ ಶನಿವಾರ ಸಂಜೆ 6 ಗಂಟೆಗೆ ಅಭಿಯಾನಕ್ಕೆ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದು, ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಉದ್ಘಾಟನೆ ಮಾಡಲಿದ್ದಾರೆ.
ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿಯವರ ಪರಿಕಲ್ಪನೆಯಲ್ಲಿ ಸರ್ಕಾರಿ ಶಾಲೆ ಕಾಲೇಜುಗಳಿಗೆ ಬಣ್ಣ ಹಚ್ಚು 'ಬಣ್ಣದರ್ಪಣೆ' ಕಾರ್ಯಕ್ರಮ ಇದಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳು ವಿವಿಧ ಬಣ್ಣಗಳಿಂದ ಕಂಗೊಳಿಸಲಿವೆ. ಅದಕ್ಕಾಗಿ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸುವಂತೆ ಅವರು ಟ್ವಿಟ್ಟರ್ನಲ್ಲಿ ಮನವಿ ಮಾಡಿದ್ದಾರೆ.
"ಬಣ್ಣ ನಮ್ಮದು - ಸಮಯ ಮತ್ತು ಸೇವೆ ನಿಮ್ಮದು"
— Pralhad Joshi (@JoshiPralhad) October 27, 2022
"ಬಣ್ಣದರ್ಪಣೆ" ಎಂಬ ವಿಶೇಷ ಅಭಿಯಾನದಡಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲಾ ಕಾಲೇಜುಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ, ಬಣ್ಣ ಹಚ್ಚುವ ಸೇವಾ ಕಾರ್ಯ ನಡೆಯಲಿದೆ.#ಬಣ್ಣದರ್ಪಣೆ #ಬಣ್ಣನಮ್ಮದು_ಸೇವೆನಿಮ್ಮದು pic.twitter.com/cWYbDbC5ut
"ಬಣ್ಣ ನಮ್ಮದು - ಸಮಯ ಮತ್ತು ಸೇವೆ ನಿಮ್ಮದು"
— Pralhad Joshi (@JoshiPralhad) October 27, 2022
"ಬಣ್ಣದರ್ಪಣೆ" ಎಂಬ ವಿಶೇಷ ಅಭಿಯಾನದಡಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲಾ ಕಾಲೇಜುಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ, ಬಣ್ಣ ಹಚ್ಚುವ ಸೇವಾ ಕಾರ್ಯ ನಡೆಯಲಿದೆ.#ಬಣ್ಣದರ್ಪಣೆ #ಬಣ್ಣನಮ್ಮದು_ಸೇವೆನಿಮ್ಮದು pic.twitter.com/cWYbDbC5ut
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭಿಯಾನ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಉದ್ದೇಶವನ್ನು ಬಣ್ಣದರ್ಪಣೆ ಅಭಿಯಾನ ಹೊಂದಿದೆ. 'ಬಣ್ಣ ನಮ್ಮದು ಸೇವೆ ನಿಮ್ಮದು' ಧ್ಯೇಯ ವಾಕ್ಯದಡಿ ಈ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರಿ ಶಾಲೆ, ಕಾಲೇಜುಗಳ ಒಳಿತಿಗಾಗೆ ನಡೆಯುತ್ತಿರುವ ಸಾಮಾಜಿಕ ಸೇವೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
'ಬಣ್ಣ ನಮ್ಮದು ಸೇವೆ ನಿಮ್ಮದು' : ಜೋಶಿ ಕರೆ
ಸಚಿವರು ಕ್ಷಮತಾ ಸೇವಾ ಸಂಸ್ಥೆ ಅಡಿಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚಲು ಉಚಿತವಾಗಿ ಬಣ್ಣ ವಿತರಿಸಲಾಗುತ್ತಿದೆ. ಸರ್ಕಾರಿ ವಿದ್ಯಾಮಂದಿರಗಳು ಕಳೆಗುಂದಬಾರದು ಎಂಬ ದೃಷ್ಠಿಯಿಂದ ಸಚಿವರು ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸಂಘ ಸಂಸ್ಥೆಗಳು, ಸೇವಾ ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಯಾರೇ ಮುಂದೆ ಬಂದರು ಅವು ಉಚಿತವಾಗಿ ಬಣ್ಣ ಪಡೆದು, ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಬಣ್ಣ ಹಚ್ಚಬಹುದು. ಹೀಗೆಂದು ಜೋಶಿ ಅವರು 'ಬಣ್ಣ ನಮ್ಮದು ಸೇವೆ ನಿಮ್ಮದು' ಎಂಬ ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ನಲ್ಲಿ ಕರೆ ನೀಡಿದ್ದಾರೆ.
1,130 ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣದ ಗುರಿ
ಸುಮಾರು ಒಂದು ವರ್ಷದ ವರೆಗೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಮುಂದುವರಿಯಲಿದೆ. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1,130 ಸರ್ಕಾರಿ ಶಾಲಾ ಕಾಲೇಜುಗಳನ್ನು ಅಭಿಯಾನಕ್ಕೆ ಒಳಪಡಿಸಲು ಗುರುತಿಸಲಾಗಿದೆ. ವರ್ಷದೊಳಗೆ ಎಲ್ಲಾ ಶಾಲಾ-ಕಾಲೇಜುಗಳು ಹೊಸ ಬಣ್ಣದೊಂದಿಗೆ ಕಂಗೊಳಿಸುವಂತೆ ಮಾಡುವ ಸಂಕಲ್ಪ ಹೊಂದಿದ್ದೇವೆ ಎಂದು ಜೋಶಿ ತಿಳಿಸಿದ್ದಾರೆ.
ಯಾರೆಲ್ಲ ಈ ಅಭಿಯಾನದಲ್ಲಿ ಭಾಗವಹಿಸಬಹುದು?
ಶಿಕ್ಷಕರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲೆಯ ಹಳೆಯ ವಿಧ್ಯಾರ್ಥಿಗಳು, ಸ್ವ ಸಹಾಯ ಸಂಘಗಳು, ಸೇವಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು, ದೇವಸ್ಥಾನ ಕಮಿಟಿಗಳು, ಭಜನಾ ಸಂಘಗಳು ಹಾಗೂ ಯಾವುದೇ ಆಸಕ್ತ ತಂಡಗಳು ಈ ಬಣ್ಣದರ್ಪಣೆ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ.