ಐಪಿಎಸ್ ಅಧಿಕಾರಿಗಳ ಶೀತಲ ಸಮರ ಅಂತ್ಯ; ಕೃಷ್ಣಕಾಂತ ಧಾರವಾಡ ನೂತನ ಎಸ್ಪಿ
ಧಾರವಾಡ, ಅಕ್ಟೋಬರ್ 21 : ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ನಲ್ಲಿ ನಡೆಯುತ್ತಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳ ನಡುವಿನ ಶೀತಲ ಸಮರ ಅಂತ್ಯಗೊಂಡಿದೆ. ಧಾರವಾಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಿ. ಕೃಷ್ಣಕಾಂತ ಅಧಿಕಾರ ಸ್ವೀಕರಿಸಿದರು.
ಬುಧವಾರ ಧಾರವಾಡದ ನೂತನ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಅವರಿಗೆ ನಿರ್ಗಮಿತ ಎಸ್ಪಿ ವರ್ತಿಕಾ ಕಟಿಯಾರ ಅವರು ಅಧಿಕಾರ ಹಸ್ತಾಂತರ ಮಾಡಿದರು. ಈ ಮೂಲಕ ಗೃಹ ಸಚಿವರಿಗೆ ತಲೆನೋವಾಗಿದ್ದ ಪ್ರಕರಣ ಇತ್ಯರ್ಥವಾದಂತೆ ಆಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರದ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಐಪಿಎಸ್ ಅಧಿಕಾರಿ ಪಿ. ಕೃಷ್ಣಕಾಂತ ಅವರು ಧಾರವಾಡದ ಎಸ್ಪಿಯಾಗಿ ಮಂಗಳವಾರ ನೇಮಕವಾಗಿದ್ದರು. ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಶೀತಲ ಸಮರ ಬೆಂಗಳೂರಿಗೂ ತಲುಪಿತ್ತು.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್, ಪಿ. ಕೃಷ್ಣಕಾಂತ ನಡುವೆ ಹಲವಾರು ಗೊಂದಲಗಳು ಏರ್ಪಟ್ಟಿದ್ದವು. ಈ ಕುರಿತು ಪಿ. ಕೃಷ್ಣಕಾಂತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಪಕ್ಕದ ಜಿಲ್ಲೆಯಲ್ಲಿನ ಪೊಲೀಸರ ಸಮಸ್ಯೆ ಬಗೆಹರಿಸುವುದು ದೊಡ್ಡ ತಲೆನೋವಾಗಿತ್ತು. ಅಂತಿಮವಾಗಿ ಮಂಗಳವಾರ ಪಿ. ಕೃಷ್ಣಕಾಂತ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಆರ್. ದಿಲೀಪ್ ಇಲಾಖೆಯ ವಿಚಾರ, ಅಕ್ರಮ ಚಟುವಟಿಕೆ, ಕೋವಿಡ್ ಮಾರ್ಗಸೂಚಿ ಪಾಲನೆ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಸಲು ಅವಕಾಶ ನೀಡುವುದಿಲ್ಲ ಎಂಬುದು ಪಿ. ಕೃಷ್ಣಕಾಂತ ಅವರ ಆರೋಪವಾಗಿತ್ತು.
ಕೃಷ್ಣಕಾಂತ ಪರಿಚಯ : ಧಾರವಾಡದ ನೂತನ ಎಸ್ಪಿ ಪಿ. ಕೃಷ್ಣಕಾಂತ 2016ನೇ ಬ್ಯಾಜ್ನ ಕರ್ನಾಟಕ ಕೆಡರ್ ಐಪಿಎಸ್ ಅಧಿಕಾರಿ. ಉಡುಪಿ ಜಿಲ್ಲೆಯವರಾದ ಪಿ.ಕೃಷ್ಣಕಾಂತ ಚಿಕ್ಕಮಗಳೂರಲ್ಲಿ ಪ್ರೊಬೇಷನರಿ ಪೂರೈಸಿ, ಉಡುಪಿ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಸಿಐಡಿ ಕಚೇರಿಯಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದಾರೆ.
ಫೆಬ್ರವರಿ 16, 2020ರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮಿಷನರೇಟ್ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.












Click it and Unblock the Notifications