ಕುಂದಗೋಳ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು, ಬಾಲಕಿಯ ರಕ್ಷಣೆ
ಧಾರವಾಡ, ಮೇ 29: ಬಾಲ್ಯ ವಿವಾಹದ ಬಗ್ಗೆ ಸೂಕ್ತ ಅರಿವಿಲ್ಲದೇ ಅಪ್ರಾಪ್ತೆಯನ್ನು ಮದುವೆ ಮಾಡಿ ಕೊಡುತ್ತಿದ್ದ ಕುಟುಂಬಕ್ಕೆ ಅಧಿಕಾರಿಗಳು ತಿಳಿ ಹೇಳಿ ಮದುವೆ ನಿಲ್ಲಿಸಿದ ಘಟನೆ ಕುಂದಗೋಳ ತಾಲೂಕಿನ ರಟಗೇರಿ ಗ್ರಾಮದಲ್ಲಿ ಇಂದು ನಡೆದಿದೆ.
ಕುಂದಗೋಳ ತಾಲೂಕಿನ ರಟಗೇರಿ ಗ್ರಾಮದ ಕುಟುಂಬವೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯೋರ್ವಳನ್ನು ಇಂದು ಮದುವೆ ನಿಶ್ಚಿಯಿಸಿ ವಿವಾಹ ಮಾಡಿಕೊಡಲು ಕುಟುಂಬಸ್ಥರು ನಿರ್ಧರಿಸಿದ್ದರು.

ಈ ಬಗ್ಗೆ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಾಲಕಿಯ ಮನೆಗೆ ಧಾವಿಸಿ ಮದುವೆಯನ್ನು ತಡೆದು ಕುಟುಂಬಸ್ಥರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು, ಬಾಲ್ಯ ವಿವಾಹ ಕೈಗೊಂಡಲ್ಲಿ ಆಗಬಹುದಾದ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಅದಲ್ಲದೇ ಮುಂದಿನ ದಿನಗಳಲ್ಲಿ ಸಹ ಬಾಲ್ಯ ವಿವಾಹ ಮಾಡಿದಂತೆ ಅಥವಾ ಬಾಲ್ಯ ವಿವಾಹ ಕೈಗೊಂಡರೇ ಕನಿಷ್ಠ ಒಂದು ವರ್ಷದವರೆಗೆ ಜೈಲು ಹಾಗೂ 1 ರಿಂದ 2 ಲಕ್ಷ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ಸಹ ನೀಡಿದ್ದಾರೆ.

ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಯೋಜನಾಧಿಕಾರಿಗಳು, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಾಲಕಿಯನ್ನು ಬಾಲ್ಯ ವಿವಾಹದಿಂದ ರಕ್ಷಿಸಿ ಹುಬ್ಬಳ್ಳಿಯ ಘಂಟಿಕೇರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲಿಸಿದ್ದಾರೆ.
ರುದ್ರಭೂಮಿಗಾಗಿ ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ
ಧಾರವಾಡ: ದಲಿತರ ಶವ ಸಂಸ್ಕರಕ್ಕಾಗಿ ಸೂಕ್ತ ರುದ್ರಭೂಮಿ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದ್ದು, ದಲಿತರಿಗಾಗಿಯೇ ಪ್ರತ್ಯೇಕ ರುದ್ರಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ದಲಿತ ಮುಖಂಡರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.
ಹಿರೇಹರಕುಣಿ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಈ ಕುಟುಂಬದಲ್ಲಿ ಯಾರಾದರೂ ತೀರಿಕೊಂಡರೆ ಶವ ಸಂಸ್ಕಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಅಂತ್ಯಕ್ರಿಯೆಗೆ ಬಳಕೆ ಮಾಡಲಾಗುತ್ತಿದ್ದ ಭೂಮಿಯನ್ನು ಮಾಲೀಕರು ಈಗ ಬಿಟ್ಟುಕೊಡುತ್ತಿಲ್ಲ. ಇದರಿಂದ ದಲಿತರಿಗೆ ಇದೀಗ ರುದ್ರಭೂಮಿಯೇ ಇಲ್ಲದಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ರುದ್ರಭೂಮಿ ಮಂಜೂರಿ ಮಾಡಿಸಿಕೊಡಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.












Click it and Unblock the Notifications