ಆಕ್ಸಿಜನ್, ಬೆಡ್; ಧಾರವಾಡದ ಜಿಲ್ಲೆಯ ಪರಿಸ್ಥಿತಿ ಹೇಗಿದೆ?
ಧಾರವಾಡ, ಮೇ 04; "ಜಿಲ್ಲೆಯಲ್ಲಿ ಕಳೆದ ಸಾಲಿನ ಕೋವಿಡ್ ಅಲೆಗಿಂತ ಪ್ರಸ್ತುತದಲ್ಲಿ ಕೋವಿಡ್ ಸೋಂಕು ಹೆಚ್ಚು ಉಲ್ಬಣವಾಗಿದ್ದು, ಪ್ರತಿದಿನ 40 ಟನ್ ಆಕ್ಸಿಜನ್ ಬಳಕೆಯಾಗುತ್ತಿದೆ. ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟರ್, ಐಸಿಯು ಬೆಡ್ಗಳ ಕೊರತೆ ಇಲ್ಲ" ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ವರ್ಚುವಲ್ ಸಭೆ ನಡೆಸಿ ಜಿಲ್ಲೆಯ ಪರಿಸ್ಥಿತಿ ಕುರಿತು ಅವರು ಮಾಹಿತಿ ನೀಡಿದರು. "ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್ ಬಳ್ಳಾರಿಯಿಂದ ಪಡೆಯಲಾಗುತ್ತದೆ. ಜಿಲ್ಲೆಯಲ್ಲಿ ಆಕ್ಸಿಜನ್ ರೀಫಿಲ್ಲಿಂಗ್ ಘಟಕಗಳಿವೆ. ಅವುಗಳಿಂದ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಆಕ್ಸಿಜನ್ ಸರಬರಾಜು ಆಗುತ್ತದೆ" ಎಂದರು.
"ಧಾರವಾಡ ಜಿಲ್ಲೆಗೆ ಕಳೆದ ವರ್ಷದ ಕೋವಿಡ್ ಸಂದರ್ಭದಲ್ಲಿ 20 ಟನ್ ಆಕ್ಸಿಜನ್ ಪ್ರತಿದಿನ ಬಳಕೆಯಾಗುತ್ತಿತ್ತು. ಆದರೆ ಸೋಂಕು ಹೆಚ್ಚಾಗಿರುವುದರಿಂದ ಈ ಸಲ 40 ಟನ್ ಆಕ್ಸಿಜನ್ ಪ್ರತಿದಿನ ಬಳಕೆಯಾಗುತ್ತಿದೆ. ಇಲ್ಲಿಯವರೆಗೆ ಜಿಲ್ಲೆಗೆ ಆಕ್ಸಿಜನ್ ಕೊರತೆ ಆಗಿಲ್ಲ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಮೇ.3ರ ವರದಿಯಂತೆ 1,753 ಜನ ಕೋವಿಡ್ ಸೋಂಕಿತರು ಕಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಸುಮಾರು 742 ಜನ ಕಿಮ್ಸ್ ಆಸ್ಪತ್ರೆ ಒಂದರಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಜಿಲ್ಲೆಯಲ್ಲಿ 32 ವೆಂಟಿಲೇಟರ್ ಹಾಗೂ 757 ಬೆಡ್ಗಳು ಖಾಲಿ ಇವೆ. 371 ಜನ ಕೋವಿಡ್ ಸೋಂಕಿತರು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 180 ವೆಂಟಿಲೇಟರ್ ಇದ್ದು, ಅವುಗಳಲ್ಲಿ 148 ಬಳಕೆಯಾಗಿದ್ದು, 32 ಬಳಕೆಗೆ ಲಭ್ಯವಿವೆ.
ಆದ್ಯತೆ ಮೇಲೆ ಪೂರೈಕೆ; ರೆಮ್ಡೆಸಿವಿರ್ ಔಷಧ ನಿರಂತರವಾಗಿ ಧಾರವಾಢ ಜಿಲ್ಲೆಗೆ ಬರುತ್ತಿದ್ದು ಬಂದ ತಕ್ಷಣ ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲಾಗುತ್ತದೆ. ಕೋವಿಶೀಲ್ಡ್ ಲಸಿಕೆಯನ್ನು ಸರ್ಕಾರ ಆದ್ಯತೆ ಮೇಲೆ ಜಿಲ್ಲೆಗೆ ಪೂರೈಸುತ್ತಿದ್ದು, ಮುಂದಿನ ಕಂತಾಗಿ ಲಸಿಕೆಯು ಬುಧವಾರ ಬರುತ್ತದೆ. ಈಗಾಗಲೇ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿರುವವರು ಆರು ವಾರದಿಂದ ಎಂಟು ವಾರದೊಳಗೆ ಲಸಿಕೆ ಪಡೆಯಬಹುದಾಗಿದೆ.
ಲಸಿಕೆ ಪಡೆಯಲು ದಿನಗಳ ವ್ಯತ್ಯಾಸ ಅಥವಾ ಸ್ವಲ್ಪಮಟ್ಟಿನ ವಿಳಂಬವಾದರೆ ಗಾಬರಿಯಾಗುವ ಅಗತ್ಯವಿಲ್ಲ. ಎಲ್ಲರಿಗೂ ಸಕಾಲಕ್ಕೆ ಲಸಿಕೆಯನ್ನು ನೀಡಲು ಜಿಲ್ಲಾಡಳಿತ ಕ್ರಮಗಳನ್ನು ಕೈಗೊಂಡಿದೆ.












Click it and Unblock the Notifications