ಉತ್ತರ ಕರ್ನಾಟಕದ ಹಳ್ಳಿ ದತ್ತು ಪಡೆಯಲಿದ್ದಾರೆ ನೀನಾಸಂ ಸತೀಶ್
ಧಾರವಾಡ, ಸೆಪ್ಟೆಂಬರ್ 02 : 'ಉತ್ತರ ಕರ್ನಾಟಕದ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುವುದಾಗಿ' ನಟ ನೀನಾಸಂ ಸತೀಶ್ ಹೇಳಿದ್ದಾರೆ.
ಶನಿವಾರ ಧಾರವಾಡದಲ್ಲಿ ಅವರು 'ಅಯೋಗ್ಯ' ಚಿತ್ರದ ಪ್ರಚಾರ ನಡೆಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳು ಇದುವರೆಗೂ ಅಭಿವೃದ್ಧಿ ಕಂಡಿಲ್ಲ' ಎಂದರು.
'ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ. ಯಾವುದಾದರೂ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ' ಎಂದು ಹೇಳಿದರು.

'ಮುಂಬರುವ ದಿನಗಳಲ್ಲಿ ಹಳ್ಳಿಗಳ ಪರಿಶೀಲನೆ ನಡೆಸಿ, ಅಲ್ಲಿಗೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸಲು ಸಿದ್ಧನಾಗಿದ್ದೇನೆ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಉದ್ದೇಶವಿದೆ' ಎಂದರು.
'ಗ್ರಾಮಗಳು ಅಭಿವೃದ್ಧಿಯಾಗಬೇಕಿದೆ. ಅಗತ್ಯಬಿದ್ದರೆ ಹಣ ಸಂಗ್ರಹಿಸಲು ಜೋಳಿಗೆ ಹಿಡಿಯಲು ನಾನು ಸಿದ್ಧನಿದ್ದೇನೆ' ಎಂದು ನಟ ನೀನಾಸಂ ಸತೀಶ್ ತಿಳಿಸಿದರು.
ನೀನಾಸಂ ಸತೀಶ್ ಈಗಾಗಲೇ ಮಂಡ್ಯ ಜಿಲ್ಲೆಯ ಹುಲ್ಲೇಗಾರ ಗ್ರಾಮವನ್ನು ದತ್ತು ಪಡೆದಿದ್ದಾರೆ. ಅಲ್ಲಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಉತ್ತರ ಕರ್ನಾಟಕದ ಹಿಂದುಳಿದ ಗ್ರಾಮವನ್ನು ದತ್ತು ಪಡೆಯಲು ಮುಂದಾಗಿದ್ದಾರೆ.












Click it and Unblock the Notifications