ನವಲಗುಂದ ಬಂದ್: ತೆರೆಯದ ದುಕಾನು, ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ನವಲಗುಂದ, ಜನವರಿ 23: ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ದವರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು, ಹೋರಾಟಗಾರರ ಮೇಲೆ ಹಾಕಿದ್ದ ಮೊಕದ್ದಮೆ ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಧಾರವಾಡ ಜಿಲ್ಲೆಯ ನವಲಗುಂದ ಬಂದ್ ಗೆ ಸೋಮವಾರ ಕರೆ ನೀಡಲಾಗಿದೆ.
ರೈತರ ಬೇಡಿಕೆಗಳ ಈಡೇರಿಕೆಗಾಗಿ ವ್ಯಾಪಾರಸ್ಥರು ಕೂಡ ಬೆಂಬಲ ಸೂಚಿಸಿ, ವ್ಯಾಪಾರ-ವಹಿವಾಟು ಬಂದ್ ಮಾಡಿದ್ದಾರೆ. ಈ ಹಿಂದೆ ಮಹದಾಯಿ ಹೋರಾಟದ ವೇಳೆ ಗಲಭೆ ಪ್ರಕರಣದಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಗಿದೆ.[ಕಂಬಳ, ಕಾವೇರಿ, ಮಹದಾಯಿ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಒತ್ತಾಯ]
ಮುಂಜಾಗ್ರತಾ ಕ್ರಮವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರು ಕಚೇರಿ, ನ್ಯಾಯಾಲಯ, ಪುರಸಬೆ ಕಚೇರಿ, ಬ್ಯಾಂಕ್ ಗಳಿಗೆ ಭದ್ರತೆ ಒದಗಿಸಲಾಗಿದೆ. ಪಟ್ಟಣದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ನಾಲ್ಕು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ.
ಮಹದಾಯಿ ಗಲಭೆ ಪ್ರಕರಣದಲ್ಲಿನ ಬಹುತೇಕ ರೈತರು ಪೊಲೀಸರಿಗೆ ಹೆದರಿ ಗ್ರಾಮ ತೊರೆದಿದ್ದಾರೆ. ಪರೀಕ್ಷೆಗಳು ಇರುವುದರಿಂದ ಎಂದಿನಂತೆ ಶಾಲಾ- ಕಾಲೇಜುಗಳು ನಡೆದಿವೆ. ಬಸ್ ಸಂಚಾರಕ್ಕೂ ಯಾವುದೇ ಅಡೆತಡೆ ಆಗಿಲ್ಲ. ಆದರೆ ಬೇರೆ ಊರಿನಿಂದ ಬರುವ ವಾಹನಗಳ ಪೈಕಿ ಸಂಶಯಾಸ್ಪದ ಎನಿಸುವಂಥದ್ದನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ.[ಮಹದಾಯಿ ಬಗ್ಗೆ ನವಲಗುಂದ ಶಾಸಕ ಕೋನರಡ್ಡಿ ಲೇಖನ]
"ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಘೋಷಣೆಯೊಂದಿಗೆ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ಆದರೆ ಹೋರಾಟಗಾರರು ಜೈಲ್ ಭರೋ ಹಾಗೂ ಗಡೀಪಾರು ಚಳವಳಿ ನಡೆಸಲು ನಿರ್ಧರಿಸಿದ್ದಾರೆ. ಹೋರಾಟಗಾರರಿಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.