ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಸಚಿವ ಸಂತೋಷ್ ಲಾಡ್
ಧಾರವಾಡ, ಅಕ್ಟೋಬರ್ 03 : 'ನನ್ನ ಬಗ್ಗೆ ಟೀಕೆ ಮಾಡುವವರನ್ನು ನಾನು ಟೀಕಿಸಲಾರೆ. ಟೀಕೆ ಮಾಡುವವರು ಮಾಡುತ್ತ ಹೋಗಲಿ, ನಾನೇನೂ ಮಾತನಾಡುವುದಿಲ್ಲ. ನನ್ನ ಬಗ್ಗೆ ಟೀಕೆ ಮಾಡುವವರು ನನಗಿಂತ ಮೊದಲು ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದನ್ನು ತೋರಿಸಲಿ' ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಮಂಗಳವಾರ ಧಾರವಾಡದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಸಂತೋಷ್ ಲಾಡ್, 'ನಾನು ಬಳ್ಳಾರಿ ಉಸ್ತುವಾರಿ ಸಚಿವ ಆಗಿರುವ ಕಾರಣಕ್ಕೆ ನಾನು ನನ್ನ ಕಲಘಟಗಿ ಕ್ಷೇತ್ರದಲ್ಲಿ ಜನರಿಗೆ ಸಿಗುವುದಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೆನೆ .ಹಾಗಂತ ಮಾತ್ರಕ್ಕೆ ನನ್ನ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲಾ' ಎಂದರು.

'ನನ್ನ ಬಗ್ಗೆ ಟೀಕೆ ಮಾಡುವವರಿಗೆ , ನಾನು ನನ್ನ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ಉತ್ತರ ನೀಡುತ್ತವೆ. ಇನ್ನು ಇಲ್ಲಿನ ಬಿಜೆಪಿ ನಾಯಕರು ಕಲಘಟಗಿ ಕ್ಷೇತ್ರದ ಶಾಸಕರು ಕಾಣೆ ಆಗಿದ್ದಾರೆ, ಅವರು ತಮ್ಮ ಕ್ಷೇತ್ರದ ಜನರನ್ನು ಮರೆತಿದ್ದಾರೆ ಎನ್ನುವ ಆರೋಪಗಳನ್ನು ಮಾಡುತಿದ್ದಾರೆ' ಎಂದು ದೂರಿದರು.
'ಇಂದು ಬಿಜೆಪಿ ನಾಯಕರಿಗೆ ಸಂತೋಷ್ ಲಾಡ್ ಉತ್ತರ ನೀಡಿದ್ದಾರೆ. ಅಲ್ಲದೆ ಹಲವು ದಶಕಗಳ ಕಾಲ ಧಾರವಾಡ ಜಿಲ್ಲೆ ಆಳಿದ ನಾಯಕರು ಏನು ಮಾಡಿದ್ದಾರೆ? ತೋರಿಸಲಿ' ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸವಾಲು ಹಾಕಿದರು.
'ನಾನು ನನ್ನ ಅಭಿಪ್ರಾಯವನ್ನು ಜನರ ಮುಂದೆ ಇಡುತ್ತೇನೆ. ಕ್ಷೇತ್ರದ ಜನರು ನನ್ನನ್ನ ಉಳಿಸಬೇಕೊ? ಬೇಡವೊ? ನಿರ್ಧಾರ ಮಾಡ್ತಾರೆ. ನನ್ನ ಕ್ಷೇತ್ರದಲ್ಲಿ ಇನ್ನೂ ಅಭಿವೃದ್ಧಿ ಕೆಲಸ ಮಾಡುವ ಹಂಬಲ ನನಗಿದೆ. ನನ್ನ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಡಲು ಹಣ ಕೊರತೆ ಇದೆ. ಆದರೆ, ನನಗೆ ಕಾರ್ಖಾನೆ ತೆರೆಯಲು ಜನರ ಒತ್ತಾಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ತರೆಯುವ ಬಗ್ಗೆ ಚಿಂತನೆ ಮಾಡುವೆ' ಎಂದರು.












Click it and Unblock the Notifications