ಕಾಂಗ್ರೆಸ್ ಗೆದ್ದ ಮೇಲೆ ಮತ್ತೆ ಮಸೀದಿಗಳ ಮೇಲಿನ ಮೈಕ್ಗಳ ಸೌಂಡ್ ಹೆಚ್ಚಾಗಿದೆ: ಅರವಿಂದ ಬೆಲ್ಲದ್
ಧಾರವಾಡ, ಜೂನ್ 10: ಆಮಿಷಗಳನ್ನು ಒಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಮಸೀದಿಗಳ ಮೇಲಿನ ಮೈಕ್ ಸೌಂಡ್ಗಳು ಮತ್ತೆ ಹೆಚ್ಚಾಗಿವೆ ಎಂದು ಶಾಸಕ ಅರವಿಂದ ಬೆಲ್ಲದ್ ಧಾರವಾದಲ್ಲಿ ವ್ಯಂಗ್ಯವಾಡಿದರು.
ಧಾರವಾಡದ ರಪಾಟಿ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದ ತಿಂಗಳ ಅವಧಿಯಲ್ಲೇ ಕಳ್ಳತನ, ಧರೋಡೆ, ಕೊಲೆಯಂತಹ ಘಟನೆಗಳು ನಡೆಯುತ್ತಿವೆ. ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಏನೇನು ನಡೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಅಮೃತ ದೇಸಾಯಿ ಅವರು ನಮ್ಮ ಪ್ರಕಾರ ಕೇವಲ 9 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಒಂದು ಬೂತಿಗೆ 40 ಮತಗಳು ಹೆಚ್ಚಿಗೆ ಬಂದಿದ್ದರೆ ಅವರು ಗೆಲ್ಲುತ್ತಿದ್ದರು. ಗ್ರಾಮೀಣ ಕ್ಷೇತ್ರದಲ್ಲಿ ಕೆಲಸದ ಬಗ್ಗೆ ಯಾರೂ ದೂರು ಹೇಳುತ್ತಿರಲಿಲ್ಲ. ಆದರೆ, ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ದರು ಎಂದರು.
ಚುನಾವಣೆ ಸಂದರ್ಭದಲ್ಲಿ ನಮ್ಮ ಮುಖಂಡರು ಸರಿಯಾಗಿ ಅಲ್ಲಿ ಕೆಲಸ ಮಾಡಲಿಲ್ಲ. ಕೆಲಸ ಮಾಡಬೇಕಾದ ಮುಖಂಡರು ಮನೆಯಲ್ಲಿ ಕುಳಿತುಕೊಂಡರು. ಒಂದು ವೇಳೆ ಅವರೂ ಸರಿಯಾಗಿ ಕೆಲಸ ಮಾಡಿದ್ದರೆ ಧಾರವಾಡ ಗ್ರಾಮೀಣದಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತಿತ್ತು ಎಂದರು.
ಅಮೃತ ದೇಸಾಯಿ ಅವರು ಮೊದಲ ಬಾರಿ ಸೋತಿಲ್ಲ. ಸೋತರೂ ಮುಂದೆ ಹೇಗೆ ಗೆಲ್ಲಬೇಕು ಎಂಬುದು ಅವರಿಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎಂಬ ಹುರುಪು ಅವರಲ್ಲಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ನಮ್ಮದೂ ತಪ್ಪು ಇದೆ. ಕೆಲ ಸುಳ್ಳು ಗ್ಯಾರಂಟಿಗಳಿಂದ ಕಾಂಗ್ರೆಸ್ ಗೆದ್ದಿದೆ. ಜನರ ದಾರಿ ತಪ್ಪಿಸಿ ಕಾಂಗ್ರೆಸ್ ಮತ ಪಡೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಮುಂದೆ ಬರಲಿರುವ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ವಾತಾವರಣ ಬದಲಾಗಲಿದೆ. ಮತ್ತೆ ಈ ಭಾಗದಿಂದ ಪ್ರಲ್ಹಾದ್ ಜೋಶಿ ಅವರು ಗೆಲುವು ಸಾಧಿಸುವುದು ನಿಶ್ಚಿತ ಎಂದರು.
ನಮ್ಮ ಪಕ್ಷದಲ್ಲಿ ಮುನಿಸಿಕೊಳ್ಳುವ ಸ್ವಭಾವ ಬಹಳಷ್ಟಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲುವಿಗೆ ನಾವು ಶ್ರಮಿಸಬೇಕು. ಮುನಿಸು, ಮನಸ್ತಾಪಗಳನ್ನು ಬದಿಗಿಟ್ಟು ನಾವು ಮುಂದೆ ಸಾಗಬೇಕಿದೆ. ಮುಂಬರುವ ಚುನಾವಣೆವರೆಗೂ ಅಮೃತ ದೇಸಾಯಿ ಅವರು ನಿಮ್ಮೊಂದಿಗಿದ್ದು ಕೆಲಸ ಮಾಡುತ್ತಾರೆ. ಹಿಂದಿಗಿಂತಲೂ ಹೆಚ್ಚು ಸಮಯವನ್ನು ಕ್ಷೇತ್ರದಲ್ಲಿ ಅವರು ಕಳೆಯಲಿ ಎಂದರು.
ಧಾರವಾಡ ಜಿಲ್ಲೆಗೆ ಉಸ್ತುವಾರಿ ಸಚಿವರ ನೇಮಕ
ಮತ್ತೊಂದೆಡೆ ರಾಜ್ಯ ಸರ್ಕಾರ ಶುಕ್ರವಾರ (ಜೂನ್ 09) ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಹಾಗೆಯೆ ಧಾರವಾಡ ಜಿಲ್ಲೆಗೆ ಕಲಘಟಗಿ ಮತ ಕ್ಷೇತ್ರದಿಂದ ಆಯ್ಕೆಯಾದ ಸಂತೋಷ್ ಲಾಡ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ.
ಸಂತೋಷ ಲಾಡ್ ಅವರಿಗೆ ಕಾರ್ಮಿಕ ಸಚಿವ ಖಾತೆ ನೀಡಿದ್ದ ಸರ್ಕಾರ ಇದೀಗ ಅವರನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಯೂ ನೇಮಕ ಮಾಡಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳಕರ ಹಾಗೂ ಸಂತೋಷ ಲಾಡ್ ಮಧ್ಯೆ ಧಾರವಾಡ ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಸರ್ಕಾರ ಧಾರವಾಡ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಂತೋಷ ಲಾಡ್ ಹೆಗಲಿಗೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.












Click it and Unblock the Notifications