ಭಾರತ್ ಜೋಡೋ ಪಾದಯಾತ್ರೆ: ಬರಿಗಾಲಿನಲ್ಲಿ 554 ಕಿ.ಮೀ ಕ್ರಮಿಸಿದ ಧಾರವಾಡದ ವ್ಯಕ್ತಿ
ಹುಬ್ಬಳ್ಳಿ, ನವೆಂಬರ್ 2: ಭಾರತ್ ಜೋಡೋ ಯಾತ್ರೆ ರಾಷ್ಟ್ರೀಯ ಕಾಂಗ್ರೆಸ್ ಆರಂಭಿಸಿದ ಸಾಮೂಹಿಕ ಚಳುವಳಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಮತ್ತು ಸಾರ್ವಜನಿಕರನ್ನು ಸಜ್ಜುಗೊಳಿಸಿ ಪರ್ಯಾಯ ದ್ವೀಪದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ 3,570 ಕಿಲೋಮೀಟರ್ಗಳಷ್ಟು ವ್ಯಾಪಿಸಿರುವ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದವರೆಗೆ ಕಾಲ್ನಡಿಗೆಯಲ್ಲಿ ನಡೆಯಲು ಆಂದೋಲನವನ್ನು ರೂಪಿಸಿದ್ದಾರೆ. 150 ದಿನಗಳಿಗಿಂತ ಹೆಚ್ಚು ಕಾಲ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷವು 23 ಆಗಸ್ಟ್ 2022 ರಂದು ಎಐಸಿಸಿ ಪ್ರಧಾನ ಕಛೇರಿಯಲ್ಲಿ ಭಾರತ್ ಜೋಡೋ ಯಾತ್ರೆಗಾಗಿ ಲೋಗೋ, ಟ್ಯಾಗ್ಲೈನ್ ಮತ್ತು ವೆಬ್ಸೈಟ್ ಅನ್ನು ಪ್ರಾರಂಭಿಸಿತು. ಮಾರ್ಚ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಭಾರತ ಜೋಡೋ ಯಾತ್ರೆ 3,570 ಕಿಲೋಮೀಟರ್ ಉದ್ದದ, 150-ದಿನಗಳ ನಿಲುಗಡೆಯಿಲ್ಲದ ಮೆರವಣಿಗೆಯಾಗಿದೆ. ಇದು ದೇಶದಾದ್ಯಂತ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ.
Breaking; ರೌಡಿಗಳ ಜೊತೆ ಬಿಜೆಪಿ ಬಾಂಧವ್ಯ ಬಿಚ್ಚಿಟ್ಟ ಕಾಂಗ್ರೆಸ್
ಈ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಾಳತ್ವದಲ್ಲಿ ಭರ್ಜರಿಯಾಗಿ ಚಾಲನೆ ಪಡೆದಿದೆ. ದೇಶದ ಕೈ ನಾಯಕರು ಮುಖಂಡರು ಅಷ್ಟೇ ಅಲ್ಲದೆ ರಾಜ್ಯದ ಪ್ರಮುಖರು ಪಾಲ್ಗೊಂಡಿದ್ದಾರೆ. ಆದರೆ ಇವರೆಲ್ಲರ ನಡುವೆ ಎಲ್ಲರ ಗಮನ ಸೆಳೆದಿರುವುದು ಮಾತ್ರ ಧಾರವಾಡ ಜಿಲ್ಲೆಯ ವ್ಯಕ್ತಿ.
ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶವನ್ನು ಒಗ್ಗೂಡಿಸಲು ನಾವು ಈ ಚಳುವಳಿಯನ್ನು ಪ್ರಾರಂಭಿಸಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ . ಸೆಪ್ಟೆಂಬರ್ 7, 2022ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದರು.
ಈ ಭಾರತ್ ಜೋಡೋ ಯಾತ್ರೆಯಲ್ಲಿ ಸಾಮಾಜಿಕ ಹೋರಾಟಗಾರರು, ಪ್ರಮುಖ ಮುಖಂಡರು ಭಾಗಿಯಾಗುತ್ತಿದ್ದಾರೆ. ಇವರೆಲ್ಲರ ನಡುವೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹನಮಂತಪ್ಪ ಲಕ್ಷ್ಮೇಶ್ವರ ಎನ್ನುವವರು ಕಾಂಗ್ರೆಸ್ನ ಅನೇಕ ಪ್ರಮುಖ ಮುಖಂಡರು ಹಾಗೂ ನಾಯಕರ ನಡುವೆ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಬರಿಗಾಲಲ್ಲಿ ಹೆಜ್ಜೆ ಹಾಕುವ ಮೂಲಕ ಹನಮಂತಪ್ಪ ಲಕ್ಷ್ಮೇಶ್ವರ ಎಲ್ಲರ ಗಮನ ಸೆಳೆದಿದ್ದಾರೆ. ಸಂಶಿ ಗ್ರಾಮ ಪಂಚಾಯತಿ ಸದಸ್ಯ ಆಗಿರುವ ಹನಮಂತಪ್ಪ ಲಕ್ಷ್ಮೇಶ್ವರ, ಚಪ್ಪಲಿ ಧರಿಸದೆ 554 ಕಿಲೋ ಮೀಟರ್ ಭಾರತ್ ಜೋಡೋ ಪಾದಯಾತ್ರೆ ಮಾಡಿದ್ದಾರೆ. ಗುಂಡ್ಲುಪೇಟೆಯಿಂದ ಆಂಧ್ರಪ್ರದೇಶ, ತೆಲಂಗಾಣದವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಹನಮಂತಪ್ಪ, 554 ಕಿಲೋ ಮೀಟರ್ ಚಪ್ಪಲಿ ಧರಿಸದೆ ನಡೆದು ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹನಮಂತಪ್ಪ ಲಕ್ಷ್ಮೇಶ್ವರ, "ದೇಶದ ಒಳಿತಿಗಾಗಿ ನಡೆಯುತ್ತಿರುವ ಈ ಪಾದಯಾತ್ರೆಯಲ್ಲಿ ನಾನು ಭಾಗವಹಿಸಿದ್ದು ನನಗೆ ಸಂತಸ ನೀಡುತ್ತಿದೆ. ಬರಿಗಾಲಿನಲ್ಲಿ ಹೆಜ್ಜೆ ಹಾಕುತ್ತಿದ್ದು ನನ್ನಿಂದ ದೇಶದ ಒಗ್ಗೂಡಿಕೆಗೆ ಅಳಿಲು ಸೇವೆ' ಎಂದಿದ್ದಾರೆ.