ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ಪತ್ರ ಚಳವಳಿ
ಹುಬ್ಬಳ್ಳಿ, ನವೆಂಬರ್ 23 : ಉತ್ತರ ಕರ್ನಾಟಕ ಭಾಗದಲ್ಲಿ ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಚಳವಳಿ ಆರಂಭಿಸಲಾಗಿದೆ.
ಕಳಸಾ-ಬಂಡೂರಿ ಹೋರಾಟಗಾರರ ಒಕ್ಕೂಟ ಏರ್ಪಡಿಸಿದ್ದ ಪತ್ರ ಚಳವಳಿ ಹೋರಾಟಕ್ಕೆ ಶನಿವಾರ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಪತ್ರ ಬರೆಯುವ ಮೂಲಕ ಚಾಲನೆ ನೀಡಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪತ್ರ ಚಳವಳಿಗೆ ಬೆಂಬಲ ನೀಡಿದ್ದಾರೆ. [ಏನಿದು ಕಳಸಾ-ಬಂಡೂರಿ ಯೋಜನೆ?]
ಈ ಸಂದರ್ಭದಲ್ಲಿ ಮಾತನಾಡಿದ ವಿನಯ ಕುಲಕರ್ಣಿ ಅವರು, 'ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿದ ಬಳಿಕ ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು, ಜನಪ್ರತಿನಿಧಿಗಳ ನಿಯೋಗದೊಂದಿಗೆ ಗೋವಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಾಗಿ' ತಿಳಿಸಿದರು. [ಕಳಸಾ-ಬಂಡೂರಿ : ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ]
ಮಹಾದಾಯಿ ನದಿ ನೀರನ್ನು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಕಳಸಾ ಬಂಡೂರಿ ಯೋಜನೆಯಾಗಿದೆ. ಇದಕ್ಕೆ ಗೋವಾ ಸರ್ಕಾರ ಅಡ್ಡಿಪಡಿಸುತ್ತಿದ್ದು, ಇದನ್ನು ವಿರೋಧಿಸಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ..... [ಕಳಸಾ ಬಂಡೂರಿಗೆ ಒಟ್ಟಾದ ಕನ್ನಡ ಸಿನಿ ತಾರೆಯರು]
ಕಳಸಾ-ಬಂಡೂರಿ ಮತ್ತೊಂದು ಸುತ್ತಿನ ಹೋರಾಟ ಆರಂಭ
ಕಳಸಾ-ಬಂಡೂರಿ ಹೋರಾಟಗಾರರ ಒಕ್ಕೂಟ ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಲು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯವು ಚಳವಳಿ ಆರಂಭಿಸಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರು ಪತ್ರ ಬರೆಯುವ ಚಳವಳಿಗೆ ಚಾಲನೆ ನೀಡಿದ್ದಾರೆ.
7.45 ಟಿಎಂಸಿ ನೀರಿಗೆ ಗೋವಾ ಕ್ಯಾತೆ
ಚಳವಳಿಗೆ ಚಾಲನೆ ನೀಡಿ ಮಾತನಾಡಿದ ವಿನಯ ಕುಲರ್ಣಿ ಅವರು, 'ಸುಮಾರು 40 ವರ್ಷಗಳಿಂದ ನಡೆಯುತ್ತಿರುವ ಈ ವಿವಾದ ಶೀಘ್ರ ಇತ್ಯರ್ಥಪಡಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. 250 ಕ್ಕೂ ಹೆಚ್ಚು ಟಿಎಂಸಿ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಆದರೆ, ಕೇವಲ 7.45 ಟಿಎಂಸಿ ನೀರು ಬಿಡಲು ಗೋವಾ ಕ್ಯಾತೆ ತೆಗೆದಿದ್ದು ಹೋರಾಟಕ್ಕೆ ಕಾರಣವಾಗಿದೆ' ಎಂದರು.
ಪತ್ರ ಚಳವಳಿಗೆ ವಿದ್ಯಾರ್ಥಿಗಳ ಸಾಥ್
ಕಳಸಾ-ಬಂಡೂರಿ ಹೋರಾಟದ ಪತ್ರ ಚಳವಳಿಗೆ ವಿದ್ಯಾರ್ಥಿ ವೃಂದ ಬೆಂಬಲ ನೀಡಿದೆ. ಚಳವಳಿಯಲ್ಲಿ ನಗರದ ಕನಕದಾಸ, ವಿವೇಕಾನಂದ ಶಿಕ್ಷಣ ಸಂಸ್ಥೆ ಮತ್ತು ಸಿದ್ಧೇಶ್ವರ ಅಭಿವೃದ್ಧಿ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.
ಬೆಂಗಳೂರಲ್ಲಿ ಪ್ರತಿಭಟನೆ
ನವೆಂಬರ್ 24ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಮಹದಾಯಿ-ಕಳಸಾ ಬಂಡೂರಿ ಕೇಂದ್ರ ಸಮನ್ವಯ ಸಮಿತಿ ನಿರ್ಧರಿಸಿದೆ. ಸೋಮವಾರ ಪ್ರತಿಭಟನಾಕಾರರು ಹುಬ್ಬಳ್ಳಿಯಿಂದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಬೆಳೆಸಲಿದ್ದಾರೆ.
ಸರ್ಕಾರ ಹೇಳುವುದೇನು?
ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಮಹದಾಯಿ ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ ಈ ಕುರಿತು ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರ ಜೊತೆ ಚರ್ಚೆ ನಡೆಸಿದೆ. ಮುಂದೆ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಮಾಹಿತಿ ಪಡೆದಿದೆ.