ಕುಂದಗೋಳ ಉಪ ಚುನಾವಣೆ : ಪಕ್ಷಗಳ ಬಲಾಬಲ
ಧಾರವಾಡ, ಮೇ 07 : ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರವನ್ನು ನಡೆಸುತ್ತಿವೆ. ಮೇ 19ರಂದು ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಸುಮಾ ಶಿವಳ್ಳಿ ಅವರು ಕಣದಲ್ಲಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಅನುಕಂಪದ ಆಧಾರದ ಮೇಲೆ ಜಯಗಳಿಸುವ ಲೆಕ್ಕಾಚಾರದಲ್ಲಿದ್ದಾರೆ.
ಕುಂದಗೋಳ ಉಪ ಚುನಾವಣೆ : ಅನುಕಂಪದ ನಿರೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್
2018ರಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ನ ಸಿ.ಎಸ್.ಶಿವಳ್ಳಿ ಅವರು ಜಯಗಳಿಸಿದ್ದರು. ಮಾರ್ಚ್ನಲ್ಲಿ ಅವರು ನಿಧನಹೊಂದಿದ್ದರಿಂದ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದ್ದು, ಜೆಡಿಎಸ್ ಸಹ ಅವರಿಗೆ ಬೆಂಬಲ ನೀಡಿದೆ.
ಚಿಂಚೋಳಿ, ಕುಂದಗೋಳ ಉಪ ಚುನಾವಣೆಯತ್ತ ಎಲ್ಲರ ಚಿತ್ತ
ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಅವರು 634 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಅವರು ಗೆಲ್ಲುವ ವಿಶ್ವಾಸದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಇಲ್ಲಿವೆ....
ಧಾರವಾಡ : ಕುಂದಗೋಳ ವಿಧಾನಸಭಾ ಕ್ಷೇತ್ರದ ಪರಿಚಯ
ಜಾತಿ ಲೆಕ್ಕಾಚಾರ
ಕುಂದಗೋಳ ಕ್ಷೇತ್ರದಲ್ಲಿ ಪಂಚಮಸಾಲಿ ಲಿಂಗಾಯತರು ನಿರ್ಣಾಯಕರು ಸುಮಾರು 50 ಸಾವಿರ ಮತಗಳಿವೆ. ಮುಸ್ಲಿಂ 35 ಸಾವಿರ, ಕುರುಬ 25 ಸಾವಿರ, ಮಾದಿಗ/ಛಲವಾದಿ 25 ಸಾವಿರ, ಮರಾಠ 5 ಸಾವಿರ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ 1,89,444 ಜನರು ಮತದಾನ ಮಾಡುವ ಹಕ್ಕನ್ನು ಪಡೆದಿದ್ದಾರೆ.
8 ಅಭ್ಯರ್ಥಿಗಳು ಕಣದಲ್ಲಿ
ಎಸ್.ಐ.ಚಿಕ್ಕನಗೌಡರ್, ಕುಸುಮಾ ಶಿವಳ್ಳಿ ಸೇರಿದಂತೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಸ್.ಐ.ಚಿಕ್ಕನಗೌಡರ್ ಅವರು 2008ರಲ್ಲಿ ಮೊದಲ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ಬಳಿಕ ಎರಡು ಚುನಾವಣೆಯಲ್ಲಿ ಸೋತಿದ್ದರು.
2018ರಲ್ಲಿ ಕೇವಲ 634 ಮತಗಳ ಅಂತರದಿಂದ ಅವರು ಸೋಲು ಕಂಡಿದ್ದರು. ಕುಸುಮಾ ಶಿವಳ್ಳಿ ಅವರು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ.
ಕುಸುಮಾ ಶಿವಳ್ಳಿ ಪ್ಲಸ್ ಪಾಯಿಂಟ್
ಕುಸುಮಾ ಶಿವಳ್ಳಿ ಅವರು ಪತಿ ಸಿ.ಎಸ್.ಶಿವಳ್ಳಿ ಅವರ ಸಾವಿನ ಅನುಕಂಪದ ಆಧಾರದ ಮೇಲೆ ಮತಗಳಲ್ಲಿ ಗೆದ್ದು ಬರುವ ನಿರೀಕ್ಷೆ ಇದೆ. ಕುಂದಗೋಳ ಕ್ಷೇತ್ರಕ್ಕೆ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಉಸ್ತುವಾರಿಯಾಗಿದ್ದಾರೆ. ಇದು ಮೈತ್ರಿಕೂಟದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಕುಟುಂಬ ರಾಜಕಾರಣದ ಆರೋಪ, ಟಿಕೆಟ್ ಸಿಗದೆ ಬಂಡಾಯ ಎದ್ದಿದ್ದ ಕೆಲವು ನಾಯಕರು, ಮೈತ್ರಿ ಸರ್ಕಾರದ ಶೀತಲ ಸಮರ ಅವರ ಗೆಲುವಿಗೆ ಹಿನ್ನಡೆ ಉಂಟು ಮಾಡಬಹುದು ಎಂಬುದು ಲೆಕ್ಕಾಚಾರವಾಗಿದೆ.
ಎಸ್.ಐ.ಚಿಕ್ಕನಗೌಡ
ಕಳೆದ ಚುನಾವಣೆಯ 634 ಮತಗಳ ಸೋಲಿನ ಅನುಕಂಪದಲ್ಲಿ ಬಿಜೆಪಿಯ ಎಸ್.ಐ.ಚಿಕ್ಕನಗೌಡ ಅವರು ಗೆದ್ದು ಬರುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಆದ್ದರಿಂದ, ಮೋದಿ ಅಲೆಯಲ್ಲಿ ಗೆದ್ದು ಬರುವ ಉತ್ಸಾಹದಲ್ಲಿದ್ದಾರೆ.
ಕುಸುಮಾ ಶಿವಳ್ಳಿ ಅವರ ಪರವಾಗಿ ಇರುವ ಅನುಕಂಪದ ಅಲೆ, ಕಾಂಗ್ರೆಸ್-ಜೆಡಿಎಸ್ ಸ್ಥಳೀಯ ನಾಯಕರು ಒಗ್ಗಟ್ಟಾಗಿರುವುದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಮುಂತಾದ ನಾಯಕರು ಪ್ರಚಾರದಲ್ಲಿ ತೊಡಗಿರುವುದು ಗೆಲುವಿಗೆ ಹಿನ್ನಡೆ ಉಂಟು ಮಾಡುವ ನಿರೀಕ್ಷೆ ಇದೆ.