ಸಾಹಿತ್ಯ ಸಮ್ಮೇಳನಕ್ಕೆ ತಡವಾಗಿ ಬಂದ ಕುಮಾರಸ್ವಾಮಿ: ಆಕ್ರೋಶ
ಧಾರವಾಡ, ಜನವರಿ 04: ಕನ್ನಡ ಸಾಹಿತ್ಯ ಪರಿಷತ್, ಧಾರವಾಡದಲ್ಲಿ ಆಯೋಜಿಸಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಇಂದು ಆರಂಭಗೊಂಡಿದೆ. ಆದರೆ ಸಮ್ಮೇಳನದ ಉದ್ಘಾಟನೆಗೆ ಸಿಎಂ ಕುಮಾರಸ್ವಾಮಿ ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬೆಳಿಗ್ಗೆ 11 ಗಂಟೆಗೆ ಇದ್ದ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಬರೋಬ್ಬರಿ ಮೂರು ಗಂಟೆ ತಡವಾಗಿ ಪ್ರಾರಂಭವಾಯಿತು. ಕುಮಾರಸ್ವಾಮಿ ಅವರು ತಡವಾಗಿ ಬಂದದ್ದೇ ಇದಕ್ಕೆ ಕಾರಣ ಎಂದು ಗಣ್ಯರು ಕೇಲವರು ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಅವರು 11 ಗಂಟೆಗೆ ಬರುತ್ತಾರೆಂದು ಬೇಗನೇ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಗಿಸಲಾಯಿತು. ಆದರೆ ಕುಮಾರಸ್ವಾಮಿ ಅವರು ಸಮಯಕ್ಕೆ ಸರಿಯಾಗಿ ಬರಲಿಲ್ಲ, ಬದಲಾಗಿ ಬಹಳ ತಡವಾಗಿ ಕಾರ್ಯಕ್ರಮಕ್ಕೆ ಬಂದರು.

ಗಣ್ಯರ ಅಸಮಾಧಾನ
ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ, ಕಾಂಗ್ರೆಸ್ ಸಚಿವ ಆರ್.ವಿ.ದೇಶಪಾಂಡೆ ಇನ್ನೂ ಹಲವು ಕವಿಗಳು, ಗಣ್ಯರು ಸಯಕ್ಕೆ ಸರಿಯಾಗಿ ಹಾಜರಿದ್ದರು. ಆದರೆ ಸಿಎಂ ಬರುವುದು ತಡವಾಗಿದ್ದಕ್ಕೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಹ್ಲಾದ್ ಜೋಷಿ ಅಸಮಾಧಾನ
ಇದೇ ವಿಷಯವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರಹ್ಲಾದ್ ಜೋಷಿ ಅವರು, ಸಾಹಿತ್ಯ ಸಮ್ಮೇಳನದಂತಹಾ ಕಾರ್ಯಕ್ರಮಕ್ಕೆ ಸಿಎಂ ತಡವಾಗಿ ಬರುತ್ತಿರುವುದು ಬೇಸರ ತರಿಸಿದೆ. ಹಿರಿಯ ಕವಿಗಳನ್ನು ಅವರು ಹೀಗೆ ಕಾಯಿಸಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಹಿತ್ಯ ಸಮ್ಮೇಳನದೆಡೆ ಅವರ ಅಸಡ್ಡೆಯನ್ನು ಇದು ತೋರುತ್ತದೆ ಎಂದು ಅವರು ಹೇಳಿದರು.

ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ
ಕುಮಾರಸ್ವಾಮಿ ಅವರು ಇಂದು ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಣೆಗೆ ತೆರಳಿದ್ದರು, ಅಲ್ಲದೆ ಕೆಲವು ವೈಯಕ್ತಿಕ ಕಾರ್ಯಕ್ರಮಗಳಲ್ಲಿಯೂ ಭಾಗಿದ ಆಗಿದ್ದರು ಹಾಗಾಗಿ ಸಮ್ಮೇಳನಕ್ಕೆ ತಡವಾಗಿ ಆಗಮಿಸಿದರು ಎನ್ನಲಾಗಿದೆ.

ಉದ್ಘಾಟನೆ ಮಾಡಿದ ಗಣ್ಯರು
ಕುಮಾರಸ್ವಾಮಿ, ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ, ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಸಚಿವ ಆರ್.ವಿ.ದೇಶಪಾಂಡೆ, ಪೂರ್ವ ಸಮ್ಮೇಳನಾಧ್ಯಕ್ಷ ಚಂಪಾ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಹಾಗೂ ಇನ್ನಿತರ ಗಣ್ಯರು ಹಾಗೂ ಕವಿಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.












Click it and Unblock the Notifications