ಹುಬ್ಬಳ್ಳಿ: ರಸ್ತೆ ತಗ್ಗಿಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್
ಹುಬ್ಬಳ್ಳಿ, ಜೂನ್, 23: ನಗರದ ತಾರಿಹಾಳ ಬೈಪಾಸ್ ಬಳಿ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಗುರುವಾರ ಬೆಳಗ್ಗೆ ಉರುಳಿ ಬಿದ್ದು ಐವರು ಪ್ರಯಾಣಿಕರಿಗೆ ಗಾಯಗಳಾಗಿವೆ.
ಬೆಂಗಳೂರಿನಿಂದ ಬೆಳಗಾವಿ ಕಡೆಗೆ ಹೊರಟಿದ್ದ ವೋಲ್ವೋ ಬಸ್ ಗೆ ಬೆಂಗಳೂರು ಕಡೆ ಹೊರಟಿದ್ದ ಲಾರಿ ಡಿಕ್ಕಿಯಾಗಿದ್ದರಿಂದ ಬಸ್ ರಸ್ತೆ ಬದಿಯ ತಗ್ಗಿಗೆ ಉರುಳಿ ಬಿದ್ದಿದೆ.[ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ]

ಬಸ್ಸಿನಲ್ಲಿ 18 ಜನರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಕೆಲವರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ. ಗಂಭೀರ ಗಾಯಗೊಂಡವರನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಪುಟ್ಟ ಗಾಯಗೊಂಡವರನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೇರೆ ಬಸ್ ವ್ಯವಸ್ಥೆ ಮಾಡಿ ಕಳುಹಿಸಿದೆ.
ಅಪಘಾತ ಯಾಕಾಯಿತು?
ಬೆಳಗಿನ ಜಾವ ಜಿಟಿಜಿಟಿ ಮಳೆಯಾಗುತ್ತಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇದೂ ಅಲ್ಲದೇ ಹುಬ್ಬಳ್ಳಿ ಗಬ್ಬೂರನಿಂದ ಧಾರವಾಡ ಅಗ್ರಿ ಯೂನಿವರ್ಸಿಟಿಯವರೆಗೆ ದ್ವಿಪಥ ರಸ್ತೆ ಇದೆ. ಇದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.[ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ]
ಬೆಂಗಳೂರಿನ ಚತುಷ್ಪಥ ರಸ್ತೆಯಲ್ಲಿ ಅತೀ ವೇಗವಾಗಿ ಸಂಚರಿಸುವ ವಾಹನಗಳು ಹುಬ್ಬಳ್ಳಿಯ ಬೈಪಾಸ್ ನಿಂದ ಅದೇ ವೇಗದಲ್ಲಿ ಸಾಗುತ್ತವೆ. ಆದರೆ ದ್ವಿಪಥ ರಸ್ತೆಯಾಗಿದ್ದರಿಂದ ವಾಹನದ ನಿಯಂತ್ರಣ ಕಳೆದುಕೊಂಡು ಪದೇ ಪದೇ ಅಪಘಾತ ಸಂಭವಿಸುತ್ತಿವೆ. ಬೆಳಗಾವಿಯಿಂದ ಧಾರವಾಡ ಬೈಪಾಸ್ ವರೆಗೂ ಕೂಡ ಚತುಷ್ಪಥ ರಸ್ತೆಯಿದೆ. ಅಲ್ಲಿಂದ ಬರುವವರು ಕೂಡ ವೇಗದ ಮನೋಸ್ಥಿತಿಯಲ್ಲಿಯೇ ವಾಹನ ಚಲಾಯಿಸುತ್ತಾರೆ. ಆದರೆ ದ್ವಿಪಥ ರಸ್ತೆಯಲ್ಲಿ ಡಿವೈಡರ್ ಇಲ್ಲ. ಇದೇ ಅಪಘಾತಕ್ಕೆ ಕಾರಣವಾಗುತ್ತಿದೆ.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]
ರಸ್ತೆ ಸುಧಾರಣೆ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಹಿಂದಿನ ಸರಕಾರದವರು ನಂದಿ ಕಂಪನಿಗೆ 25 ವರ್ಷಗಳವರೆಗೆ ಗುತ್ತಿಗೆ ನೀಡಿದ್ದಾರೆ. ಅವರ ಗುತ್ತಿಗೆ ಮುಗಿಯುವವರೆಗೂ ರಸ್ತೆಯನ್ನು ವಿಸ್ತರಿಸಲು ಕಾನೂನು ತೊಡಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳುತ್ತಾರೆ.












Click it and Unblock the Notifications