ಕೆಎಸ್ಆರ್ಟಿಸಿ ನೌಕರರಿಗೆ ಸಿಗುತ್ತಾ ಭರ್ಜರಿ ಗುಡ್ನ್ಯೂಸ್? Karnataka Budget 2025
ಹುಬ್ಬಳ್ಳಿ, ಮಾರ್ಚ್ 04: ಕರ್ನಾಟಕ ಸಾರಿಗೆ ನೌಕರರ ಸಮಸ್ಯೆಗಳು ಪರಿಹಾರವಾಗಿಲ್ಲ. ವೇತನ ಹೆಚ್ಚಳ ಬಾಕಿ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳು ಈಡೇರಿಕೆಗೆ ಕಾಯುತ್ತಿರುವ ಹೊತ್ತಿನಲ್ಲೇ ಕರ್ನಾಟಕ ಬಜೆಟ್ 2025 ಎದುರಾಗಿದೆ. ಹೀಗಾಗಿ ಇದರ ಮೇಲೆ ಸಾರಿಗೆ ನೌಕರರಿಗೆ ಸಾಕಷ್ಟು ವಿಶ್ವಾಸ ಹೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನವಿಗೆ ಸ್ಪಂದಿಸಬಹುದು, ಮಹತ್ವದ ಘೋಷಣೆ ಮಾಡಬಹುದೆಂದು ಕಾಯುತ್ತಿದ್ದಾರೆ.
ಧಾರವಾಡ KSRTC ನೌಕರರ ಲೀಗ್ನ ಸದಸ್ಯರು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮುನ್ನ ಸಾರ್ವಜನಿಕ ಸಾರಿಗೆ ನೌಕರರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಈ ಬಗ್ಗೆ ಶೀಘ್ರವೇ ಸ್ಪಂದಿಸಬೇಕು ಎಂದು ಕೋರಿದ್ದಾರೆ.

ಕರ್ನಾಟಕ ಬಜೆಟ್ ದೃಷ್ಟಿ ಇಟ್ಟುಕೊಂಡು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲೀಗ್ನ ಗೌರವಾಧ್ಯಕ್ಷ ಪಿ.ಎಚ್. ನೀರಲಕೇರಿ ಅವರು, ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯದ ಅಯವ್ಯಯದಲ್ಲಿ ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಯ ಘೋಷಣೆ ಆಗಲಿದೆ. ಕೊಟ್ಟ ಭರವಸೆಯನ್ನು ಈಡೇರಿಸಲು ಬಜೆಟ್ ನಲ್ಲಿ ನಿರ್ಧಾರ ಪ್ರಕಟಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಸಾರ್ವಜನಿಕ ಸಾರಿಗೆ ನೌಕರರ ಬೇಡಿಕೆಗಳು ಏನು?
ಕರ್ನಾಟಕ ಸರ್ಕಾರ, ನಮ್ಮನ್ನು ಸರ್ಕಾರ ಸರ್ಕಾರಿ ನೌಕರರಂತೆ ಪರಿಗಣಿಸಿ, ಅವರಿಗೆ ನೀಡುವ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ನಮಗೂ ವಿಸ್ತರಣೆ ಮಾಡಬೇಕು. ಇದು ಪ್ರಮುಖ ಬೇಡಿಕೆ ಆಗಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ನಿವೃತ್ತಿ ಪಡೆದ 22,000 ಕ್ಕೂ ಅಧಿಕ ಪಿಂಚಣಿದಾರರು ಇನ್ನೂ ಪಿಂಚಣಿ ಪಡೆದಿಲ್ಲ. ನಿವೃತ್ತಿ ಪಡೆದ ಒಂದೇ ತಿಂಗಳಲ್ಲಿ ಅವರ ಪಿಂಚಣಿ ಮೊತ್ತ ಖಾತೆ ಜಮೆ ಆಗಬೇಕು. ಈ ನಿಟ್ಟಿನಲ್ಲಿ ನಿಯಮ ಇದ್ದರೂ ಸಹಿತ ಪಾಲನೆ ಆಗುತ್ತಿಲ್ಲ. ಸರ್ಕಾರ ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆದಿವೆ. ಈಗಾಗಲೇ ನೌಕರರು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಸಹಿತ ಕೊಟ್ಟ ಭರವಸೆ ನೀಡಲು ಸರ್ಕಾರ ವಿಫಲವಾಗಿದೆ. ನೌಕರರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಮನವಿಗೆ ಒಂದು ಬಾರಿಯೂ ಸ್ಪಂದನೆ ಸಿಕ್ಕಿಲ್ಲ ಎಂದು ನೀರಲಕೇರಿ ಅವರು ತಿಳಿಸಿದರು.
ಬಜೆಟ್ನಲ್ಲಿ 10,000 ಕೋಟಿ ಮೀಸಲಿಡಿ
ರಾಜ್ಯ ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭತಿ ಮಾಡಲು ಕ್ರಮ ಕೈಗೊಳ್ಳಬೇಕು. ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ರಾಜ್ಯ ಬಜೆಟ್ನಲ್ಲಿ ಕನಿಷ್ಠ ₹10,000 ಕೋಟಿ ಮೀಸಲಿಡಬೇಕು. ಎಲ್ಲರಿಗೂ ಸಮಾನ ವೇತನ ನೀಡಬೇಕು. ನೌಕರರ ಮಧ್ಯೆ ವೇತನ ತಾರತಮ್ಯ ಮಾಡದಂತೆ ಶೇಕಡಾ ಶೇ. 50 ರಷ್ಟು ವ್ಯತ್ಯಾಸ ಸರಿಗೊಳಿಸಲು ಈ ಅನುದಾನ ಹಂಚಿಕೆ ಸಹಾಯ ಮಾಡುತ್ತದೆ. ಆದ್ದರಿಂದ ಈ ಬಾರಿಯ ಬಜೆಟ್ನಲ್ಲಿ ಸಾರಿಗೆ ನೌಕರ ಅಭಿವೃದ್ಧಿಗೆ ಆದ್ಯತೆ ಸಿಗಬೇಕು ಎಂದು ಅವರು ಕೇಳಿದರು.
ರಾಜ್ಯ ಸರ್ಕಾರ, ಸರ್ಕಾರಿ ಅಧಿಕಾರಿಗಳು ಸಾರಿಗೆ ನೌಕರರ ಕುಂದು ಕೊರತೆ ಆಲಿಸಬೇಕು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ ಎಂ. ಅವರು ನಾಲ್ಕು ವಿಭಾಗಗಳಿಗೆ ಭೇಟಿ ನೀಡುವಂತೆ ಅವರು ಆಗ್ರಹಿಸಿದರು.












Click it and Unblock the Notifications