ಕರಸೇವಕರು, ರಾಮಭಕ್ತರನ್ನು ಹುಡುಕಿ ಹುಡುಕಿ ಬಂಧನ, ಇದು ಕಾಂಗ್ರೆಸ್ ಹುನ್ನಾರ: ವಿಪಕ್ಷ ನಾಯಕ
ಹುಬ್ಬಳ್ಳಿ, ಜನವರಿ 03: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ಸಿದ್ಧತೆಯಲ್ಲಿ ತೊಡಗಬೇಕಿತ್ತು. ಆದರೆ ಉತ್ತರ ಕರ್ನಾಟಕದ ಅವಳಿ ನಗರದಲ್ಲಿ ಪ್ರತಿಭಟನೆ ಮೂಲಕ ಪರಸ್ಪರ ಎದುರಾಗಿವೆ.
ಹೌದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಿಪಕ್ಷದ ನಾಯಕರು ಒಂದೇ ದಿನ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ವಿರೋಧಿಸಿ ಬಿಜೆಪಿ ಇಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಶಹರ ಠಾಣೆ ಎದುರು ಪ್ರತಿಪಕ್ಷ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.

ಇದೇ ವೇಳೆ ಧಾರವಾಡದಲ್ಲಿ ವಿಪಕ್ಷ ಬಿಜೆಪಿ ಮೇಲೆ ಸ್ವಪಕ್ಷ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದ್ದ 40000 ಕೋಟಿ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಧಾರವಾಡದಲ್ಲಿ ಬೀದಿಗಿಳಿದಿದ್ದರು. ಈ ಮೂಲಕ ಒಂದೇ ದಿನ ಬಿಜೆಪಿ ಕಾಂಗ್ರೆಸ್ ಮುಖಾಮುಖಿ ಆಗುವಂತಾಗಿದೆ.
ರಾಮಭಕ್ತರನ್ನು ಬಂಧಿಸುವ ಹುನ್ನಾರ
ಹುಬ್ಬಳ್ಳಿಯ ಶಹರ ಠಾಣೆ ಎದುರು ಬಿಜೆಪಿಯ ಪ್ರತಿಭಟನೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಮ ಭಕ್ತರನ್ನು ಬಂಧಿಸುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 56,000 ಪೆಂಡಿಂಗ್ ಕೇಸ್ಗಳು ಇವೆ. ಆದರೆ, ಅವೆಲ್ಲವನ್ನು ಬಿಟ್ಟು ಹುಬ್ಬಳ್ಳಿ ಕಡೆಯ ಪ್ರಕರಣಗಳನ್ನು ಮರುಪರಿಶೀಲನೆ ಮಾಡುತ್ತಿರುವುದು ಏಕೆ? ಎಂದರು. ಕರಸೇವಕರನ್ನು ಹುಡುಕಿ ಬಂಧನ ಮಾಡಿದ್ದು ನ್ಯಾಯವಾ? ರಾಮನ ಮೇಲೆ ಕಾಂಗ್ರೆಸ್ಗೆ ಕೋಪ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಚೀಟಿಂಗ್ ಕೇಸ್ ಇಲ್ಲವೇ ಎಂದು ಪ್ರಶ್ನಿಸಿದ ಆರ್. ಅಶೋಕ್, ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೇಸ್ ಹಾಕುತ್ತಿದ್ದಾರೆ. ಕೂಡಲೇ ಜೈಲಿನಿಂದ ಶ್ರೀಕಾಂತ ಪೂಜಾರಿ ಬಿಡುಗಡೆ ಮಾಡಬೇಕು. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲೆಸೆದರು.

ರಾಮ ಭಕ್ತರನ್ನು ಆಂಜನೇಯನನ್ನಾಗಿ ಮಾಡಬೇಡಿ
ವೇದಿಕೆ ಮೇಲೆ ನಿಂತು ಸಿಎಂ ಸಿದ್ದರಾಮಯ್ಯ ವಿರುದ್ಧ ದಿಕ್ಕಾರ ಕೂಗಿ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, 'ಮಾತಾ ಮಾತಾ ಭಾರತ ಮಾತಾ'ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ನಾವು ರಾಮ ಭಕ್ತರಾಗಿ ಬಂದಿದ್ದೇವೆ, ಆಂಜನೇಯ ಆಗೋಕೆ ಬಿಡಬೇಡಿ ಎಂದು ಅಶೋಕ ಅವರು ಪೊಲೀಸರಿಗೆ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
40000 ಕೋಟಿ ಹಗರಣ ತನಿಖೆಗೆ ಕಾಂಗ್ರೆಸ್ ಆಗ್ರಹ
ಕೋವಿಡ್ ಸಂದರ್ಭದಲ್ಲಿ ಹಿಂದಿನ ಸರ್ಕಾರದಿಂದ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಆಧರಿಸಿ ಧಾರವಾಡದಲ್ಲಿ ಕಾಂಗ್ರೆಸ್ ಪ್ರತಿಭಟನೆಗಿಳಿದಿದೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸುಮಾರು 40 ಸಾವಿರ ಕೋಟಿ ಅವ್ಯವಹಾರ ಆಗಿದೆ. ಇದನ್ನು ಕೂಡಲೇ ತನಿಖೆಗೆ ಒಳಪಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ಆಗಿದೆ ಎಂದು ಅದೇ ಪಕ್ಷದ ಶಾಸಕರು ಹೇಳಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡುವ ಕೆಲಸ ಮಾಡಿದೆ. ಇದನ್ನು ಸ್ವ ಪಕ್ಷದವರೇ ಬೆಳಕಿಗೆ ತರುತ್ತಿದ್ದು, ಕೂಡಲೇ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಕೈ ಕಾರ್ಯಕರ್ತರು ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.












Click it and Unblock the Notifications