ಕರ್ನಾಟಕ ಚುನಾವಣೆ; ಧಾರವಾಡದಲ್ಲಿ ಎಲ್ಲೆಲ್ಲಿ ನಾಮಪತ್ರ ಸಲ್ಲಿಸಬಹುದು?
ಧಾರವಾಡ, ಏಪ್ರಿಲ್ 12; ಕರ್ನಾಟಕದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಅಧಿಸೂಚನೆ ಏಪ್ರಿಲ್ 13ರ ಗುರುವಾರ ಪ್ರಕಟವಾಗಲಿದೆ. ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಬಹುದು.
ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಧಾರವಾಡ ಜಿಲ್ಲೆಯಲ್ಲಿ ಎಲ್ಲೆಲ್ಲಿ ನಾಮಪತ್ರ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ. ಆಯಾ ಮತ ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಹೇಳಿದರು. ಚುನಾವಣಾಧಿಕಾರಿಗಳು ಗುರುವಾರ ನಮೂನೆ-1ರಲ್ಲಿ ಚುನಾವಣಾ ಅಧಿಸೂಚನೆ ನೋಟೀಸ್ ಹೊರಡಿಸುವರು.

ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಮತಕ್ಷೇತ್ರಗಳಿವೆ. ಏಪ್ರಿಲ್ 14 ಮತ್ತು 16ರ ಸರ್ಕಾರಿ ರಜೆ ದಿನ ಹೊರತುಪಡಿಸಿ ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ. ನಾಮಪತ್ರ ಸಲ್ಲಿಸಲು ಆಗಮಿಸುವ ಅಭ್ಯರ್ಥಿಯು ತನ್ನೊಂದಿಗೆ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಬರಲು ಅವಕಾಶವಿದೆ. ಅಭ್ಯರ್ಥಿ ಸೇರಿ ಒಟ್ಟು 5 ಜನ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರಬಹುದು.
ಎಲ್ಲೆಲ್ಲಿ ನಾಮಪತ್ರ ಸ್ವೀಕಾರ; ನವಲಗುಂದದಲ್ಲಿ ತಹಶೀಲ್ದಾರ್ ಕಚೇರಿ, ಕುಂದಗೋಳದಲ್ಲಿ ತಹಶೀಲ್ದಾರ್ ಕಚೇರಿ, ಧಾರವಾಡ ವಿಧಾನಸಭಾ ಮತಕ್ಷೇತ್ರದವರು ಉಪ ವಿಭಾಗಾಧಿಕಾರಿಗಳ ಕಚೇರಿ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದವರು ತಹಶೀಲ್ದಾರ್ ಕಚೇರಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಧಾರವಾಡ ಮತ್ತು ಕಲಘಟಗಿ ವಿಧಾನಸಭಾ ಮತಕ್ಷೇತ್ರದವರು ತಹಶೀಲ್ದಾರ ಕಚೇರಿ, ಕಲಘಟಗಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಬೇಕು.
ಧಾರವಾಡ ಜಿಲ್ಲೆಯಲ್ಲಿ ಪುರುಷ 757522, ಮಹಿಳೆ 749807, ಇತರೆ 85 ಸೇರಿ ಒಟ್ಟು 1507414 ಮತದಾರರು ಇದ್ದಾರೆ. ಏಪ್ರಿಲ್ 10ರವರೆಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಅವರು ಈ ಬಾರಿಯ ಚುನಾವಣೆಯಲ್ಲಿಯೇ ಮತದಾನ ಮಾಡಲು ಅವಕಾಶವಿದೆ. ನಗರ ಪ್ರದೇಶದಲ್ಲಿ 944, ಗ್ರಾಮೀಣ ಪ್ರದೇಶದಲ್ಲಿ 692 ಸೇರಿ ಒಟ್ಟು 1636 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 30,056 ಯುವ ಮತದಾರರಿರುತ್ತಾರೆ. ವಿಕಲಚೇತನ ಮತದಾರರು 21,273, 80 ವರ್ಷ ಮೀರಿದ ಮತದಾರರು 32301. ಮತದಾನದ ದಿನದಂದು ಪಿ. ಆರ್. ಒ 2036, ಎ. ಪಿ. ಆರ್. ಒ 2036 ಹಾಗೂ ಪಿ. ಓ. 4072 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಏಪ್ರಿಲ್ 16 ರಂದು ವಿಧಾನಸಭಾ ಮತಕ್ಷೇತ್ರವಾರು ಮೊದಲ ಹಂತದ ತರಬೇತಿಯನ್ನು ಸಿಬ್ಬಂದಿಗಳಿಗೆ ನೀಡಲಾಗುತ್ತದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತದೆ.
ನಿಯಮಗಳು; ನಾಮಪತ್ರ ಸಲ್ಲಿಕೆ ಮಾಡುವ ಅಭ್ಯರ್ಥಿ 5 ಸಾವಿರ ರೂ. ವನ್ನು ಠೇವಣಿಯನ್ನಾಗಿ ಪಾವತಿಸಬೇಕು. ಚುನಾವಣಾಧಿಕಾರಿಯವರ ಕಚೇರಿಗೆ 100 ಮೀಟರ್ ಸುತ್ತ-ಮುತ್ತ ವ್ಯಾಪ್ತಿಯಲ್ಲಿ ಅಭ್ಯರ್ಥಿ ಹಾಗೂ ಅವರೊಡನೆ ಬರುವ ವ್ಯಕ್ತಿಗಳಿಗಾಗಿ ಗರಿಷ್ಠ 3 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಸದರಿ ವಾಹನಗಳ ಪರವಾನಿಗೆಯನ್ನು ಚುನಾವಣಾಧಿಕಾರಿಗಳಿಂದ ಪಡೆಯಬೇಕು. ಅಭ್ಯರ್ಥಿ ಸೇರಿ 5 ಜನರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಬಹುದು.
ಅಭ್ಯರ್ಥಿ ನಾಮಪತ್ರವನ್ನು 2ಬಿಯಲ್ಲಿ ಸಲ್ಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತಗಳನ್ನು ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿ ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ನಾಮಪತ್ರದೊಂದಿಗೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಬಗ್ಗೆ ಸಂಬಂಧಿಸಿದ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ಪಟ್ಟಿ ನೀಡಬೇಕು.
ವಿಧಾನಸಭಾ ಕ್ಷೇತ್ರದ ಮತದಾರರು ಸೂಚಕರಾಗಿ ನಾಮಪತ್ರದಲ್ಲಿ ಸಹಿ ಮಾಡಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದ ಮೂಲಕ ಸ್ಪರ್ಧಿಸಿದರೆ ಒಬ್ಬ ಸೂಚಕರು, ಅಭ್ಯರ್ಥಿಯು ನೋಂದಾಯಿತ ಮನ್ನಣೆ ಪಡೆಯದ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸಿದರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿದ್ದರೆ ಕ್ಷೇತ್ರದ 10 ಮಂದಿ ಮತದಾರರಿಂದ ನಾಮಪತ್ರಗಳಲ್ಲಿ ಸಹಿ ಪಡೆಯಬೇಕು.












Click it and Unblock the Notifications