ಎಂ.ಎಂ.ಕಲಬುರ್ಗಿ ಹತ್ಯೆ ತನಿಖೆ ನಡೆಸಲಿದೆ ಹೊಸ ತಂಡ
ಬೆಂಗಳೂರು, ಜನವರಿ 29 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಪುನಃ ಆರಂಭಿಸಲಾಗುತ್ತದೆ. 20 ಅಧಿಕಾರಿಗಳ ಸಿಐಡಿಯ ಹೊಸ ತಂಡ ಇದುವರೆಗೂ ತನಿಖೆ ನಡೆಸಿದ ತಂಡ ಸಂಗ್ರಹಿಸಿದ ಮಾಹಿತಿಯನ್ನು ಆಧಾರವಾಗಿ ಇಟ್ಟುಕೊಂಡು ಹೊಸದಾಗಿ ತನಿಖೆ ಆರಂಭಿಸಲಿದೆ.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ನಿವಾಸದಲ್ಲಿ ಅಪರಿಚಿತರು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. [ಕಲಬುರ್ಗಿ ಹತ್ಯೆ ಕೇಸ್ : ಸಿಐಡಿ ವರದಿಯಲ್ಲೇನಿದೆ?]

ಕರ್ನಾಟಕ ಸರ್ಕಾರ ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದುವರೆಗಿನ ತನಿಖೆಯಲ್ಲಿ ಆರೋಪಿಗಳ ಕುರಿತು ಸುಳಿವು ಪತ್ತೆಯಾಗಿಲ್ಲ. ಈಗ 20 ಅಧಿಕಾರಿಗಳ ಹೊಸ ತಂಡ ತನಿಖೆಯನ್ನು ಮತ್ತೊಮ್ಮೆ ಆರಂಭಿಸಲಿದೆ. ['ಕಲಬುರ್ಗಿ ಹತ್ಯೆ ತನಿಖೆ ಸಿಬಿಐಗೆ ವಹಿಸಲು ಸಿದ್ಧ']
ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಡುವೆ ಸಾಮ್ಯತೆ ಇದೆ. ಮೂರು ಹತ್ಯೆಗಳನ್ನು ಒಂದು ಗುಂಪು ಮಾಡಿರಬಹುದು ಎಂದು ಸಿಐಡಿ ಶಂಕೆ ವ್ಯಕ್ತಪಡಿಸಿದೆ. ಹಿರಿಯ ಸಿಪಿಐ ನಾಯಕ ಹಾಗೂ ಮಹಾರಾಷ್ಟ್ರ ವಿಚಾರವಾದಿ ಗೋವಿಂದ್ ಪನ್ಸಾರೆ ಮತ್ತು ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಬೋಲ್ಕರ್ ಅವರ ಹತ್ಯೆಯ ತನಿಖೆ ಇನ್ನೂ ಅಂತಿಮಗೊಂಡಿಲ್ಲ.[ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಹೇಗೆ?]
ಹೊಸದಾಗಿ ತನಿಖೆ ಆರಂಭಿಸಲಿರುವ ಸಿಐಡಿ ಅಧಿಕಾರಿಗಳ ತಂಡ ಇಷ್ಟು ದಿನ ನಡೆದ ತನಿಖೆಯ ವಿವರವನ್ನು ಸಂಗ್ರಹಣೆ ಮಾಡಲಿದ್ದು, ಅದನ್ನು ಪರಿಶೀಲಿಸಿ ತನಿಖೆ ಮುಂದುವರೆಸಲಿದೆ. ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಹಂತಕರು ಹುಬ್ಬಳ್ಳಿ ಲಾಡ್ಜ್ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ತಿಳಿದುಬಂದಿದ್ದು, ಈ ಕುರಿತು ಮತ್ತೊಮ್ಮೆ ತನಿಖೆ ನಡೆಯಲಿದೆ.












Click it and Unblock the Notifications