ಕಳಸಾ-ಬಂಡೂರಿ ಹೋರಾಟ, ಹುಬ್ಬಳ್ಳಿಯಲ್ಲಿ ಗೋವಾ ಬಸ್ಸಿಗೆ ಬೆಂಕಿ
ಧಾರವಾಡ, ಆಗಸ್ಟ್ 26 : ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಹುಬ್ಬಳ್ಳಿಯಲ್ಲಿ ಬುಧವಾರ ಬೆಳಗ್ಗೆ ಗೋವಾದ ಸರ್ಕಾರಿ ಬಸ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇಂದು ವಿವಿಧ ಸಂಘಟನೆಗಳು ಧಾರವಾಡ ಬಂದ್ಗೆ ಕರೆ ನೀಡಿವೆ.
ಬುಧವಾರ ಬೆಳಗ್ಗೆ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಗೋವಾ ರಾಜ್ಯದ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರತಿಭಟನಾಕಾರರು ಬಸ್ಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹುಬ್ಬಳ್ಳಿ-ಗೋವಾ ನಡುವೆ ಸಂಚಾರ ನಡೆಸುವ ಮತ್ತೊಂದು ಬಸ್ಸಿಗೂ ಕಲ್ಲು ತೂರಲಾಗಿದೆ. [ಸರ್ವಪಕ್ಷ ನಿಯೋಗಕ್ಕೆ ನಿರಾಸೆ ಉಂಟು ಮಾಡಿದ ಪ್ರಧಾನಿ]

ವಿವಿಧ ಸಂಘಟನೆಗಳು ಇಂದು ಧಾರವಾಡ ಬಂದ್ಗೆ ಕರೆ ನೀಡಿವೆ. ಗದಗ, ನರಗುಂದ, ನವಲಗುಂದಗಳಲ್ಲಿಯೂ ಸೋಮವಾರ ಸಂಜೆಯಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. [ಕೇಳುವವರೇ ಗತಿಯಿಲ್ಲದ ಕಳಸ ಭಂಡೂರಿ!]
ಕಳಸಾ-ಬಂಡೂರಿ ನಾಲಾ ಜೋಡಣೆ ಮತ್ತು ಮಹದಾಯಿ ನದಿ ತಿರುವು ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಸರ್ಷಪಕ್ಷ ನಿಯೋಗ ನಡೆಸಿದ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಬಂದ್ ಆಚರಿಸಲು ಪಕ್ಷಾತೀತವಾಗಿ ನಿರ್ಣಯ ಕೈಗೊಳ್ಳಲಾಗಿದೆ. [ಕಳಸಾ -ಬಂಡೂರಿ ಯೋಜನೆ : ನವಲಗುಂದ ಉದ್ವಿಗ್ನ]

ಪ್ರಮುಖ ನಿರ್ಣಯಗಳು : ಧಾರವಾಡದಲ್ಲಿ ಮಂಗಳವಾರ ಪಕ್ಷಾತೀವಾಗಿ ನಡೆದ ಸಭೆಯಲ್ಲಿ ಗೋವಾ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಸಿಎಂಗಳ ಸಭೆಯನ್ನು ಪ್ರಧಾನಿ ಕರೆಯಬೇಕು, ಸಂಪೂರ್ಣ ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಬೇಕು, ರೈಲು ಸಂಚಾರ, ವಿಮಾನ ಹಾರಾಟ, ವಾಹನ ಸಂಚಾರ ಸ್ಥಗಿತಗೊಳಿಸಬೇಕು, ಗೋವಾಕ್ಕೆ ತರಕಾರಿ, ಹಣ್ಣು-ಹಂಪಲು, ಹಾಲು ಪೂರೈಕೆ ಸ್ಥಗಿತಗೊಳಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.












Click it and Unblock the Notifications