ಹುಬ್ಬಳ್ಳಿ: ಪೊಲೀಸ್ ಬೈಕ್ ಗೆ ಬೆಂಕಿ ಹಚ್ಚಿದ 8 ಜನರ ಬಂಧನ
ಹುಬ್ಬಳ್ಳಿ, ಡಿಸೆಂಬರ್, 10: ಹೆಲ್ಮೆಟ್ ಕಡ್ಡಾಯದ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೊಲೀಸರ ಬೈಕ್ ಗೆ ಬೆಂಕಿ ಹಚ್ಚಿ ನಗರದ ಶಾಂತಿ ಕದಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಬೆಳಗಾವಿ ಗಲ್ಲಿಯ ಅಪ್ರಾಪ್ತ ನರೇಂದ್ರ ಪರಮಾರ, ನಾಗರಾಜ ಮಿಸ್ಕಿನ್, ಮೋದಿನ ಸರಾಫ್, ಪವನ ಮಿಸ್ಕಿನ್, ಗೋವಿಂದ ರಾಜಪುರೋಹಿತ, ಭರತಕುಮಾರ ಜೈನ್, ಈರಣ್ಣ ಯಲಬುರ್ಗಾ, ಜಾವೀದ ಘೋಡೆಸವಾರ ಬಂಧಿತ ಆರೋಪಿಗಳು. ಇವರನ್ನು ಡಿಸೆಂಬರ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.[ಪೊಲೀಸಪ್ಪನ ಹುಚ್ಚಾಟ, ರೊಚ್ಚಿಗೆದ್ದ ಹುಬ್ಬಳ್ಳಿಗರು]

ಡಿಸೆಂಬರ್ 1 ರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಪಘಾತ ತಡೆಯುವ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ಆದೇಶ ಹೊರಡಿಸಿದ್ದರು. ಆದ್ದರಿಂದ ಪೊಲೀಸ್ ಅಧಿಕಾರಿಗಳು ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿದು ದಂಡಿಸುತ್ತಿದ್ದರು.
ಸೋಮವಾರ ಡಿಸೆಂಬರ್ 7ರ ರಾತ್ರಿ ಫಕೀರಯ್ಯ ಹಿರೇಮಠ ಎಂಬಾತ ಹೆಲ್ಮೆಟ್ ಧರಿಸದೆ ದುರ್ಗದ ಬೈಲ್ ಬಳಿ ಬೈಕ್ ಚಲಾಯಿಸಿಕೊಂಡು ಬಂದಾಗ ಘಂಟಿಕೇರಿ ಠಾಣೆಯ ರಾತ್ರಿ ಪಾಳಿ ಸಂಚಾರಿ ಪೊಲೀಸ್ ಆತನನ್ನು ತಡೆದು ಕೊರಳ ಪಟ್ಟಿ ಹಿಡಿದು ಜಗ್ಗಿದ್ದಾರೆ. ಫಕೀರಯ್ಯ ಹಿರೇಮಠ ಬೈಕ್ ನಿಂದ ಬಿದ್ದು ಗಾಯಗೊಂಡ ಪರಿಣಾಮ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.[ಇನ್ನು ಗ್ರಾಮದಲ್ಲೂ ಹೆಲ್ಮೆಟ್ ಧರಿಸಿಯೇ ಬೈಕ್ ಓಡಿಸಿ]
ಫಕೀರಯ್ಯ ಹಿರೇಮಠನನ್ನು ಆಸ್ಪತ್ರೆಗೆ ದಾಖಲಿಸಿದ ಸಾರ್ವಜನಿಕರು ಪೊಲೀಸ್ ವಿರುದ್ಧ ಪ್ರತಿಭಟನೆ ನಡೆಸಿ ಅವರ ಬೈಕ್ ಗೆ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.












Click it and Unblock the Notifications