ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ದಂಧೆ : ರವೀಂದ್ರ ಪ್ರಸಾದ್ ವಿಚಾರಣೆ
ಹುಬ್ಬಳ್ಳಿ, ಅಕ್ಟೋಬರ್ 09 : ಹುಬ್ಬಳ್ಳಿ-ಧಾರವಾಡ ಅವಳಿ ನಗದಲ್ಲಿ ನಡೆದ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಗುರುವಾರ ಹುಬ್ಬಳ್ಳಿಯ ನಿವೃತ್ತ ಪೊಲೀಸ್ ಆಯುಕ್ತ ರವೀಂದ್ರ ಪ್ರಸಾದ್ ಅವರ ವಿಚಾರಣೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ನಿವೃತ್ತರಾಗಿರುವ ರವೀಂದ್ರ ಪ್ರಸಾದ್ ಅವರನ್ನು ಗುರುವಾರ 4 ತಾಸು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, 45 ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದಾರೆ. ದಂಧೆ ನಡೆಸುವ ಬುಕ್ಕಿಗಳಿಂದ ಪೊಲೀಸರಿಗೆ ಹಣ ಸಂದಾಯವಾಗುತ್ತಿತ್ತು. ಇದರಲ್ಲಿ ರವೀಂದ್ರ ಪ್ರಸಾದ್ ಅವರಿಗೂ ಹಣ ಹೋಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. [ಹುಬ್ಬಳ್ಳಿಯಲ್ಲಿ 28 ಬುಕ್ಕಿಗಳ ಬಂಧನ]

ಸಿಐಡಿ ವಿಚಾರಣೆಗೆ ಹಾಜರಾಗುವಂತೆ ರವೀಂದ್ರ ಪ್ರಸಾದ್ ಅವರಿಗೆ ಸಿಐಡಿ ಡಿವೈಎಸ್ಪಿ ಬಿ.ಜಿ.ರತ್ನಾಕರ್ ಅವರು ನೋಟಿಸ್ ನೀಡಿದ್ದರು. ಗುರುವಾರ ಬೆಳಗ್ಗೆ 10 ಗಂಟೆಗೆ ರವೀಂದ್ರ ಪ್ರಸಾದ್ ಅವರು ವಿಚಾರಣೆ ಹಾಜರಾದರು. ಐಜಿಪಿ ಶರತ್ಚಂದ್ರ, ಡಿವೈಎಸ್ಪಿಗಳಾದ ಕುಮಾರಸ್ವಾಮಿ ಹಾಗೂ ರತ್ನಾಕರ್ ಅವರ ತಂಡ ವಿಚಾರಣೆ ನಡೆಸಿತು. [ಕಪಿಲ್ ಮೋಹನ್ ಗೆ ಬಂಧನ ಭೀತಿ]
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ದಂಧೆ ಬಗ್ಗೆ ಖಾಸಗಿ ಸುದ್ದಿ ವಾಹಿನಿ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದು, ಈ ವೇಳೆ ಬೆಳಕಿಗೆ ಬಂದಿತ್ತು.
ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಸರ್ಕಾರ ಹಗರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಹಗರಣದ ತನಿಖೆಯನ್ನು ನಡೆಸುತ್ತಿದೆ.
ಕಪಿಲ್ ಮೋಹನ್ ಮನೆ ಮೇಲೆ ದಾಳಿ : ಕ್ರಿಕೆಟ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಸಿಐಡಿ ಅಧಿಕಾರಿಗಳು ಆಗಸ್ಟ್ 5ರಂದು ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರಿಗೆ ಸೇರಿದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ 4.37 ಕೋಟಿ ನಗದು, 2.5 ಕೆಜಿ ಚಿನ್ನಾಭರಣ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಈ ಆಸ್ತಿ ಪತ್ತೆ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು. ಈ ಆಸ್ತಿ ಪತ್ತೆ ಪ್ರಕರಣದ ವಿಚಾರಣೆಯನ್ನು ಸದ್ಯ ಲೋಕಾಯುಕ್ತರು ನಡೆಸುತ್ತಿದ್ದಾರೆ.












Click it and Unblock the Notifications