ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಮತ್ತಷ್ಟು ವಿಳಂಬ?
ಹುಬ್ಬಳ್ಳಿ, ಡಿಸೆಂಬರ್ 28 : ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ನಿಲ್ದಾಣದಲ್ಲೇ ಉಳಿದಿರುವ ಸ್ಪೈಸ್ ಜೆಟ್ ವಿಮಾನದಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ದೂರಿದೆ.
2015ರ ಮಾರ್ಚ್ 8ರಂದು ಸಂಜೆ 6.30ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಸ್ಪೈಟ್ ಜೆಟ್ ವಿಮಾನ ಲ್ಯಾಂಡ್ ಆಗುವ ವೇಳೆ ರನ್ ವೇನಿಂದ ಜಾರಿ, ಸಿಗ್ನಲ್ ದೀಪಕ್ಕೆ ಡಿಕ್ಕಿ ಹೊಡೆದು, ಮಣ್ಣಿನಲ್ಲಿ ಸಿಕ್ಕಿಕೊಂಡಿತ್ತು. [ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ]

ಈ ಅಪಘಾತ ನಡೆದು ಸುಮಾರು 9 ತಿಂಗಳು ಕಳೆದರೂ ಅಪಘಾತಕ್ಕೀಡಾದ ಸ್ಪೈಸ್ ಜೆಟ್ ವಿಮಾನವು ನಿಲ್ದಾಣದಲ್ಲಿಯೇ ಇದೆ. ಧೂಳು ತಿನ್ನುತ್ತಿರುವ ವಿಮಾನದ ಒಳಭಾಗದ ಸಲಕರಣೆಗಳನ್ನು ಸ್ಪೈಸ್ ಜೆಟ್ ಸಂಸ್ಥೆಯು ತೆಗೆದುಕೊಂಡು ಹೋಗಿದೆ. ಈಗ ಕೇವಲ ವಿಮಾನದ ಹೊರಕವಚ ಮಾತ್ರವಿದೆ.[ಹುಬ್ಬಳ್ಳಿ ನಿಲ್ದಾಣದಲ್ಲಿನ ಯಾವ ಕಾಮಗಾರಿ ನಡೆಯುತ್ತಿದೆ?]
ಇದು ರನ್ ವೇ ಪಕ್ಕದಲ್ಲಿಯೇ ಇರುವುದರಿಂದ ವಿಮಾನ ನಿಲ್ದಾಣದ ಕಾಮಗಾರಿಗೆ ತೊಂದರೆಯಾಗುತ್ತಿದೆ ಎಂದು ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈಗಾಗಲೇ ದುರಂತಕ್ಕೀಡಾದ ವಿಮಾನದ ವಿಮೆ ಕಂಪನಿಗೆ ಪಾವತಿಯಾಗಿದೆ. ಹೀಗಾಗಿ ವಿಮಾನ ನಿಲ್ದಾಣದ ನಿಲುಗಡೆ ಬಾಡಿಗೆಯನ್ನು ನೀಡಿ ಸಂಸ್ಥೆಯು ವಿಮಾನವನ್ನು ತೆಗೆದುಕೊಂಡು ಹೋಗಬೇಕೆಂದು ಪ್ರಾಧಿಕಾರ ಒತ್ತಾಯಿಸಿದೆ.
ಮಾ.8ರ ಅಪಘಾತ ನಡೆಯುವ ಒಂದು ವಾರದ ಮೊದಲು ಸ್ಪೈಸ್ ಜೆಟ್ ಹುಬ್ಬಳ್ಳಿಗೆ ಸೇವೆಯನ್ನು ಆರಂಭಿಸಿತ್ತು. ಅಪಘಾತ ನಡೆದ ಬಳಿಕ ಸೇವೆಯನ್ನು ಸ್ಥಗಿತಗೊಳಿಸಿತ್ತು. ಅಪಘಾತಕ್ಕೀಡಾದ ವಿಮಾನದಲ್ಲಿ ವಾರ್ತಾ ಸಚಿವ ಆರ್. ರೋಷನ್ ಬೇಗ್, ಧಾರವಾಡ ಹೈಕೋರ್ಟ್ ಪೀಠದ 4 ನ್ಯಾಯಮೂರ್ತಿಗಳು, ನಾಲ್ವರು ಮಕ್ಕಳು ಸೇರಿದಂತೆ 77 ಪ್ರಯಾಣಿಕರಿದ್ದರು.












Click it and Unblock the Notifications