ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ, ಬೆಳೆಗಳು ಜಲಾವೃತ
ಧಾರವಾಡ, ಅಕ್ಟೋಬರ್ 01 : ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿಗೆ ಪ್ರವಾಹ ಬಂದಿದ್ದು ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದೆ.
ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಮುಂತಾದ ಕಡೆ ಭಾರೀ ಮಳೆಯಾಗುತ್ತಿದೆ. ಬಾಗಲಕೋಟೆಯ ಹುನಗುಂದ ಸಮೀಪದ ಘಟ್ಟಿನೂರಿನಲ್ಲಿ ಮನೆಯ ಛಾವಣಿ ಕುಸಿದುಬಿದ್ದು, ಶಿವಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ.
ಯಾದಗಿರಿಯಲ್ಲಿ ಸಿಡಿಲು ಬಡಿದು ನಾಲ್ವರು ಸಾವು
ಗದಗ ಜಿಲ್ಲೆಯ ಮುಂಡರಗಿಯಲ್ಲಿ ಶನಿವಾರ ಭಾರೀ ಮಳೆ ಸುರಿದಿದೆ. ಹಿರೇಹಳ್ಳ ತುಂಬಿದ್ದು, ಹಳ್ಳದ ದಂಡೆಯಲ್ಲಿದ್ದ 15ಕ್ಕೂ ಹೆಚ್ಚು ಗುಡಿಸಲುಗಳು ಕೊಚ್ಚಿಕೊಂಡು ಹೋಗಿವೆ. ಡಂಬಳ ಗ್ರಾಮದಲ್ಲಿ ಸೂರ್ಯಕಾಂತಿ, ಹತ್ತಿ ಬೆಳೆಗೆ ಹಾನಿಯಾಗಿದೆ. ರೋಣ ತಾಲೂಕಿನ ಸಮೀಪದಲ್ಲಿ ಬೆಣ್ಣೆಹಳ್ಳ ತುಂಬಿದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಮಹಾಮಳೆಗೆ ತತ್ತರಿಸಿದ 'ಸಕ್ಕರೆ ನಗರಿ' ಮಂಡ್ಯ
ವಿಜಯಪುರ ಜಿಲ್ಲೆಯ ಡೋಣಿ ನದಿಗೆ ಪ್ರವಾಹ ಬಂದಿದ್ದು ಸಂಚಾರ ಸ್ಥಗಿತಗೊಂಡಿತ್ತು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಕೋಗಳಿಯಲ್ಲಿ ಶುಕ್ರವಾರ ತಲಾ 5.5 ಸೆಂ.ಮೀ.ಮಳೆಯಾಗಿದೆ. ಸಿರಗುಪ್ಪ ತಾಲೂಕಿನ ರಾರಾವಿ ಬಳಿ ಲಾರಿ ನದಿಗೆ ಉರುಳಿದ್ದು, ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧಾರವಾಡ, ಹುಬ್ಬಳ್ಳಿ, ಕುಂದಗೋಳದಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ಹಾನಗಲ್ನಲ್ಲಿ ಬಿರುಸಿನ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಅಂಕೋಲಾ, ಮುಂಡಗೋಡದಲ್ಲಿಯೂ ಮಳೆ ಸುರಿದಿದೆ.
ಬೆಳ್ಳಂದೂರಿನಿಂದ ಬನಶಂಕರಿ ತಲುಪಿದ ಒಂದು ಮಳೆಯ ರಾತ್ರಿ ಅನುಭವ
ಕಲಬುರಗಿ ಜಿಲ್ಲೆಯ ತೊನಸನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಹೊಲದಲ್ಲಿ ಕೂಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಅಂಬಿಕಾ ಶಿವರಾಜ ಸಡರಗಿ (42), ಬಸಮ್ಮ ತಿಮ್ಮಣ್ಣ ಸಂಗಾವಿ (45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.