ತಾಯಿಗೆ ನ್ಯಾಯ ದೊರಕಿಸಿಕೊಟ್ಟ 14ರ ಹರೆಯದ ಬಾಲಕಿ
ಧಾರವಾಡ, ಡಿಸೆಂಬರ್ 30: ಶಿಕ್ಷಣವೇ ಶಕ್ತಿ ಎಂಬ ಮಾತಿಗೆ ಪುಷ್ಠಿ ನೀಡುವಂತಹಾ ಘಟನೆ ಧಾರವಾಡದಲ್ಲಿ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬಾಕೆ ಅನ್ಯಾಯಕ್ಕೊಳಗಾಗಿದ್ದ ತನ್ನ ತಾಯಿಗೆ ನ್ಯಾಯಾಲಯದಿಂದ ತ್ವರಿತವಾಗಿ ನ್ಯಾಯ ದೊರಕುವಂತೆ ಮಾಡಿದ್ದಾಳೆ. ಇದು ಸಾಧ್ಯವಾಗಿದ್ದು ತರಗತಿಯಲ್ಲಿ ಆಕೆ ಕೇಳಿದ ಪಾಠದಿಂದ.
ಚಿಕ್ಕಬಳ್ಳಾಪುರದಲ್ಲಿ ತಾನೇ ಮೋರಿ ಸ್ವಚ್ಛಗೊಳಿಸಿದ ಬಾಲಕಿ
ನಗರದ ಪ್ರೆಸೆಂಟೇಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ರೇಖಾ ಮೈಸೂರು ತನ್ನ ತಾಯಿಗೆ ಆಗಿರುವ ಅನ್ಯಾಯದ ಕುರಿತು ನ್ಯಾಯಾಧೀಶರಿಗೆ ಪತ್ರ ಬರೆದು ದುಷ್ಕರ್ಮಿಗಳು ಮಾಡಿರುವ ಅನ್ಯಾಯವನ್ನು ಸಾಕ್ಷಿ ಸಮೇತ ಅವರ ಗಮನಕ್ಕೆ ತಂದಿದ್ದಾಳೆ.
ತಮ್ಮ ತಾಯಿಯ ಹೆಸರಿನಲ್ಲಿರುವ ಜಮೀನನ್ನು ನಕಲಿ ದಾಖಲೆ ಸೃಷ್ಠಿಸಿ ಕೆಲವರು ತಮ್ಮ ಹೆಸರಿಗೆ ಮಾಡಿಸಿಕೊಳ್ಳುವ ಹುನ್ನಾರ ಮಾಡಿದ್ದರು. ಇದನ್ನು ಅರಿತ ಬಾಲಕಿ ರೇಖಾ ಜಿಲ್ಲಾ ನ್ಯಾಯಾಧೀಶರಿಗೆ ಪತ್ರ ಬರೆದು ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಳು.
'ನಾನು ಮತ್ತು ನನ್ನ ಅಕ್ಕ ಇನ್ನೂ ಅಪ್ರಾಪ್ತರಿದ್ದೇವೆ ಆದರೆ ನಾವು ಜಮೀನು ಮಾರುವುದಕ್ಕೆ ಒಪ್ಪಿರುವುದಾಗಿ ನಕಲಿ ಸಹಿ ಮಾಡಿ ನಕಲಿ ದಾಖಲೆ ಸೃಷ್ಠಿಸಲಾಗಿದೆ ಎಂದು ರೇಖಾ ತನ್ನ ಪತ್ರದಲ್ಲಿ ಹೇಳಿದ್ದಳು.
ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ
ರೇಖಾಳ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಅವರು ಸ್ಥಳೀಯ ಪೊಲೀಸರಿಗೆ ತನಿಖೆಗೆ ಆದೇಶಿಸಿ, ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಕಾರ್ಯ ನಿರ್ವಹಿಸಿದ ಪೊಲೀಸರು ಈಗ ನಕಲಿ ದಾಖಲೆ ಸೃಷ್ಠಿಸಿದ್ದ ಅಜೀಜ್ ಸಾಬ್ ನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ.
ರೇಖಾ ಅವರ ಶಾಲೆಯಲ್ಲಿ ಇತ್ತೀಚೆಗೆ ಕಾನೂನು ಅರಿವು ಕುರಿತು ವಿಶೇಷ ತರಗತಿ ನಡೆದಿತ್ತು, ಅದನ್ನು ಗಂಭೀರವಾಗಿ ಕೇಳಿದ್ದ ರೇಖಾ ಪಾಠದಲ್ಲಿನ ಅಂಶಗಳನ್ನು ತನ್ನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಬಳಸಿಕೊಂಡಿದ್ದಾಳೆ.