ಮುಸ್ಲಿಮರ ಮೀಸಲಾತಿ; ಬಿಜೆಪಿ ಶಾಸಕರ ಹೇಳಿಕೆ ಬಗ್ಗೆ ಆಕ್ರೋಶ
ಧಾರವಾಡ, ನವೆಂಬರ್, 03: ಒಬಿಸಿ ಕೊಟಾದಿಂದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆಯುವಂತೆ ಶಾಸಕರಾದ ಅರವಿಂದ್ ಬೆಲ್ಲದ್ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಸರ್ಕಾರವನ್ನು ಆಗ್ರಹಿಸಿದ್ದರು. ಇದೀಗ ಶಾಸಕರ ನಡೆಯನ್ನು ಕಾಂಗ್ರೆಸ್ ಮುಖಂಡ ಹಾಗೂ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಧಾರವಾಡದಲ್ಲಿ ಖಂಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಶ್ರೀಗಳ ಬಗ್ಗೆ ಗೌರವ ಇದೆ. ಅವರ 2ಎ ಮೀಸಲಾತಿ ಹೋರಾಟವನ್ನು ಮುಸ್ಲಿಂ ಸಮುದಾಯ ಬೆಂಬಲಿಸಲಿದೆ. ಆದರೆ ಮುಸ್ಲಿಂ ಮೀಸಲಾತಿ ಕಬಳಿಸುವ ಉಭಯ ಶಾಸಕರ ಹೇಳಿಕೆ ಸರಿಯಲ್ಲ ಎಂದರು. ಇಂತಹ ಹೇಳಿಕೆ ಮೂಲಕ ಮುಸ್ಲಿಂ ಹಾಗೂ ಪಂಚಮಸಾಲಿ ಸಮಾಜದ ನಡುವೆ ಒಡಕು ಮೂಡಿಸುವುದು ಸಲ್ಲ. ಇಂತಹ ಹೇಳಿಕೆ ನೀಡದಂತೆ ತಿಳುವಳಿಕೆ ಹೇಳಲು ಶ್ರೀಗಳಿಗೆ ಮನವಿ ಮಾಡಿದರು.
ಧಾರವಾಡ: 50 ವರ್ಷಗಳ ಬಳಿಕ ಅಣ್ಣಿಗೇರಿ ಕೆರೆಗೆ ನೀರು, ಜನರ ಸಂತಸ
ನಾವು ಯಾರ ವಿರುದ್ಧವೂ ಇಲ್ಲ; ನಮ್ಮ ಸಮುದಾಯ ಎಂದಿಗೂ ಯಾವುದೇ ಸಮಾಜದ ಮೀಸಲಾತಿ ವಿರುದ್ಧ ಇಲ್ಲ. ಆದರೆ ಮುಸ್ಲಿಂ ಸಮಾಜದ ಮೀಸಲಾತಿ ಬಗ್ಗೆ ಅಪಸ್ವರ ಎತ್ತದಂತೆ, ಹೋರಾಟವನ್ನು ತಪ್ಪು ದಾರಿಗೆ ಎಳೆಯದಂತೆ ಹಾಗೂ ಮುಸ್ಲಿಂ ಮೀಸಲಾತಿ ಕೇಳದಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದರು.
ಯತ್ನಾಳ್ ಜೊತೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ತಮಟಗಾರ ಒತ್ತಾಯಿಸಿದರು. ತಾವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದು, ಟಿಕೆಟ್ ಸಿಗುವ ವಿಶ್ವಾಸವಿದೆ. ಹೀಗಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ವಿನಯ್ ಕುಲಕರ್ಣಿ ಅವರು ರಾಜ್ಯ ನಾಯಕರಾಗಿದ್ದಾರೆ. ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ, ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಐ.ಎ.ಜಮಾದಾರ, ಕಾರ್ಯದರ್ಶಿ ನಜೀರ ಮನಿಯಾರ, ಮಹ್ಮದ್ ಶಕೀಲ ತಮಟಗಾರ, ಬಶೀರ ಜಾಗೀರದಾರ, ಡಾ.ಎಸ್.ಎಸ್.ಸರಗಿರೋ, ಎಸ್.ಎಸ್. ಸೌದಾಗರ ಮತ್ತಿತರರು ಇದ್ದರು.
ನಮ್ಮ ಮೇಲೆ ಮತದಾರರ ಆಶೀರ್ವಾದ; ನನ್ನ ಮೇಲೆ ಮತದಾರರ ಒಲವು ಹಾಗೂ ಆಶೀರ್ವಾದವಿದೆ. ಹಾಗಾಗಿಯೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆದ್ದಿದೆ. ಈ ಫಲಿತಾಂಶ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಿದೆ. ಆ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿ, 150 ಸ್ಥಾನ ಗೆಲ್ಲಿಸಿಕೊಡುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಜಯಪುರದಲ್ಲಿ ಹೇಳಿದ್ದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನನ್ನ ಈ ಪ್ರಯತ್ನಕ್ಕೆ ನೀವು ನನಗೆ ಬೆಂಬಲಿಸಬೇಕು. ಒಂದು ವೇಳೆ ನಾನು ಅಷ್ಟು ಸ್ಥಾನ ಗೆಲ್ಲಿಸದಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ವೇದಿಕೆಯಲ್ಲಿದ್ದ ಶಾಸಕರಾದ ಪಿ. ರಾಜು ಹಾಗೂ ಅಭಯ್ ಪಾಟೀಲ ಅವರಿಗೆ ಶಾಸಕ ಯತ್ನಾಳ್ ಹೇಳಿದರು.
2023ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ; ಕರ್ನಾಟಕದಲ್ಲಿ 2023ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಒಂದು ವೇಳೆ ನಾನು ಮುಖ್ಯಮಂತ್ರಿ ಆದರೆ ಬಡವರಿಗಾಗಿ ಕೆಲಸ ಮಾಡುತ್ತೇನೆ. ನಾನು ನನ್ನ ಮನೆ ತುಂಬಿಕೊಳ್ಳುವ ಕೆಲಸ ಮಾಡುವುದಿಲ್ಲ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದಾಗಿ ಘೋಷಿಸಿದರು. ವಿಜಯಪುರದಿಂದಲೇ ಕರ್ನಾಟಕ ಇತಿಹಾಸ ನಿರ್ಮಾಣ ಆಗಲಿದೆ. ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಕುತಂತ್ರಿಗಳು ಕೇವಲ ಫೋನ್ನಲ್ಲಿ ನಾಟಕ ಮಾಡಿದ್ದಾರೆ. ನಾನು ಪ್ರತಿ ಮನೆ ಮನೆಗೂ ತಿರುಗಾಡಿ ಮತ ಯಾಚಿಸಿದ್ದೇನೆ. ಇಂದು ನಮ್ಮ ದೇಶ ಸುರಕ್ಷಿತ ಆಗಿರುವುದಕ್ಕೆ ದೇಶ ಭಕ್ತ ಪ್ರಾಮಾಣಿಕ ಪ್ರಧಾನಿ ನರೇಂದ್ರ ಮೋದಿ ಕಾರಣಕರ್ತರಾಗಿದ್ದಾರೆ. ಬಿಜೆಪಿಯಿಂದ ಆಯ್ಕೆಯಾದ ಕಾರ್ಪೋರೇಟರ್ಗಳು ಜನರ ಸೇವಕರಾಗಿ ಕೆಲಸ ಮಾಡಿ ಎಂದು ಸಲಹೆ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ ಮಾತನಾಡಿ, ವಿಜಯಪುರದಲ್ಲಿ ಕಮಲ ಅರಳಿದರೆ ಇಡೀ ರಾಜ್ಯದಲ್ಲಿ ಕಮಲ ಅರಳುತ್ತದೆ. ಅಂತಹ ಶಕ್ತಿ ವಿಜಯಪುರ ಮತದಾರರಿಗೆ ಇದೆ. ಪಾಲಿಕೆ ಚುನಾವಣೆಯಲ್ಲಿ ಗೆದ್ದವರು ಮತದಾರರನ್ನು ಮರೆಯಬೇಡಿ. ನಿಮ್ಮ ಮೇಲೆ ಜನರ ನಿರೀಕ್ಷೆ ಇದೆ. ಒಂದೇ ವರ್ಷದಲ್ಲಿ ನಿಮ್ಮನ್ನು ನಿಜವಾದ ಜನ ಸೇವಕ ಎಂದು ಕರೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.