ವಿಧಾನಸೌಧದಲ್ಲಿ ನಮಾಜ್ಗೆ ಅವಕಾಶ ಕೊಟ್ಟರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಧಾರವಾಡ, ಜುಲೈ, 14: ವಿಧಾನಸೌಧದಲ್ಲಿ ನಮಾಜ್ಗೆ ಅವಕಾಶ ಕೊಡುವ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸಂಪೂರ್ಣ ಹಿಂದೂ ವಿರೋಧಿಯಾಗಿದೆ. ಹಿಂದುತ್ವದ ಎಲ್ಲವನ್ನೂ ವಿರೋಧಿಸುತ್ತದೆ. ಗೋ ಶಾಲೆ ಮಾಡಲು ಜಾಗ ತೆಗೆದುಕೊಂಡಿದ್ದರೆ ಅದು ಆರ್ಎಸ್ಎಸ್ಗೆ ಸೇರಿದ ಸಂಸ್ಥೆ ಅಂತಾ ತಡೆ ಹಿಡಿದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ನಾಗರಕಟ್ಟೆ ಸ್ವಚ್ಛ ಮಾಡಿ ಪವಿತ್ರ ಸ್ಥಾನ ಮಾಡಿದ್ದು ಪುನೀತ್ ಕೆರೆಹಳ್ಳಿ ಅವರ ಬಳಗ. ಆದರೆ ಅವರಿಗೆ ಪೂಜೆ ಮಾಡಲು ತಡೆ ಹಾಕುತ್ತಿದ್ದಾರೆ. ಅನುಮತಿ ಪಡೆಯಿರಿ ಅಂತಾರೆ. ನಿತ್ಯ ಐದು ಸಲ ನಮಾಜ್ ಮಾಡ್ತಾರಲ್ಲವಾ? ಅದಕ್ಕೆ ಅನುಮತಿ ಇದೆಯಾ? ಹಿಂದೂ ವಿರೋಧಿ ಎನ್ನುವುದು ಕಾಂಗ್ರೆಸ್ನ ರಕ್ತದ ಕಣ ಕಣದಲ್ಲಿದೆ ಎಂದು ಹರಿಹಾಯ್ದರು.
ಜಾಗಕ್ಕೆ ತಡೆ ಹಿಡಿದಿದ್ದು ತಪ್ಪು. ಆ ತಡೆ ವಾಪಸ್ ಪಡೆಯಬೇಕು. ಕಾಂಗ್ರೆಸ್ ಅವಧಿಯಲ್ಲಿ ಯಾವ ಯಾವ ಜಮೀನು ಯಾರಿಗೆ ಕೊಟ್ಟಿದ್ದಾರೆ ಬಹಿರಂಗಪಡಿಸಿ. ಎಷ್ಟು ಮಸೀದಿ, ದರ್ಗಾ, ಮದರಸಾಗಳಿಗೆ ಇವರು ಭೂಮಿ ಕೊಟ್ಟಿಲ್ಲವಾ?. ಆದರೆ ಗೋ ಶಾಲೆ ಮಾಡಲು ಜಮೀನು ತೆಗೆದುಕೊಂಡರೆ ಅದರಲ್ಲಿ ಏನು ಲಾಭದ ವ್ಯವಹಾರ ಇದೆ ಎಂದರು.
ವಿಧಾನಸೌಧದಲ್ಲಿ ನಮಾಜ್ಗೆ ಅವಕಾಶ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವಕಾಶ ಕೊಟ್ಟರೇ ಇಡೀ ಕರ್ನಾಟಕ ಹೊತ್ತಿ ಉರಿಯುತ್ತದೆ. ವಿಧಾನಸೌಧ ಮೆಕ್ಕಾ, ಮದೀನಾ ಅಲ್ಲ, ಅದು ಪ್ರಜಾಪ್ರಭುತ್ವದ ಆಧಾರದ ಮೇಲಿನ ದೇಗುಲ. ಅಲ್ಲಿ ನಮಾಜ್ ಮಾಡಲು ಅವಕಾಶ ಕೊಟ್ಟರೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.
ಅವಕಾಶ ನೀಡಿದರೆ ಸಾವಿರಾರೂ ಜನ ನಿತ್ಯ ಹನುಮಾನ ಚಾಲೀಸಾ, ಭಜನೆ ಮಾಡುತ್ತೇವೆ. ವಿಧಾನಸೌಧದೊಳಗೆ ಭಜನೆ ಮಾಡುತ್ತೇವೆ. ಈಗ ನಮಾಜ್ಗೆ ಕೇಳುತ್ತಾರೆ. ಹಾಗೆಯೇ ಬಿಟ್ಟರೆ ನಾಳೆ ಮೈಕ್ ಹಾಕೋಕೂ ಅವಕಾಶ ಕೊಡಿ ಅಂತಾರೆ. ಕಾಂಗ್ರೆಸ್ ನಮಾಜ್ಗೆ ಅವಕಾಶ ಕೊಟ್ಟರೂ ಕೊಡಬಹುದು. ಅವರಿಗೆ ನಾಚಿಕೆಯೇ ಇಲ್ಲ. ಅವಕಾಶ ಕೊಟ್ಟರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದರು.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು
ಇನ್ನು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ 5 ಲಕ್ಷ ಸಹಿ ಅಭಿಯಾನವನ್ನು ಶ್ರೀ ರಾಮ ಸೇನೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಿದೆ. ಈ ಕಾಯ್ದೆಯಿಂದ ಸಮಾನ ಅವಕಾಶಗಳು ಜನರಿಗೆ ದೊರೆಯುತ್ತದೆ ಎಂದು ತಿಳಿಸಿದರು.
ಪ್ರತಿಯೊಂದು ಜಿಲ್ಲೆಯಲ್ಲೂ ಈ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಚಿತ್ರ ನಟರು, ರಂಗಭೂಮಿ ಕಲಾವಿದರು, ವಕೀಲರು, ವೈದ್ಯರು ಹಾಗೂ ವ್ಯಾಪಾರಸ್ಥರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ದೇಶದ ಐಕ್ಯತೆ ಮತ್ತು ಭದ್ರತೆಯ ದೃಷ್ಟಿಯಿಂದ ಏಕರೂಪ ನಾಗರಿಕ ಸಂಹಿತೆಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಮುಖಂಡರಾದ ಅಣ್ಣಪ್ಪ ದಿವಟಗಿ, ಪಾಂಡು ಯಮೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications