Rain Alert: ಧಾರವಾಡ ಜನರ ಗಮನಕ್ಕೆ: ಮುಂದಿನ 2 ದಿನ ಭಾರೀ ಗಾಳಿ-ಮಳೆ: 'ಹಳದಿ' ಎಚ್ಚರಿಕೆ
ಹುಬ್ಬಳ್ಳಿ, ಮೇ 12: ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದಲ್ಲಿ ಆಸ್ತಿ ನಷ್ಟವಾಗಿದೆ. ಇದೀಗ ಮತ್ತೆ ಧಾರವಾಡ ಜಿಲ್ಲೆಯಲ್ಲಿ ಮತ್ತೆ ಎರಡು ದಿನ ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆ ಆಗಲಿದೆ. ಹವಾಮಾನ ಇಲಾಖೆ 'ಹಳದಿ' ಎಚ್ಚರಿಕೆ ನೀಡಿರುವುದಾಗಿ ಮುನ್ಸೂಚನೆ ನೀಡಿದೆ.
ಹುಬ್ಬಳ್ಳಿಯಲ್ಲಿ ನೆನ್ನೆ ಸುರಿದ ಜೋರು ಗಾಳಿ ಸಹಿತ ಭಾರೀ ಮಳೆಯು ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ ಇನ್ನೂ ಎರಡು ದಿನ ಮುಂದುವರಿಯಲಿದೆ. ಈ ವೇಳೆ ಜಿಲ್ಲೆಯಲ್ಲಿ ಮಳೆಯು ಕನಿಷ್ಠ 6.5 ರಿಂದ 11.5 ಸೆಂಟಿ ಮೀಟರ್ ವರೆಗೆ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಈ ಕಾರಣದಿಂದ ವಿದ್ಯಾಕಾಶಿ ಧಾರವಾಡ ಜಿಲ್ಲೆಗೆ ಮುಂದಿನ ಎರಡು ದಿನ ಹಳದಿ ಎಚ್ಚರಿಕೆ ಕೊಡಲಾಗಿದೆ. ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಜೊತೆಗೆ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಮಳೆ ಸಹ ಬರುವ ಲಕ್ಷಣಗಳು ಇವೆ. ಮಳೆಯ ಕಾರಣದಿಂದ ಹೆಚ್ಚು ಬಿಸಿಲು ಕಂಡಿದ್ದ ಜಿಲ್ಲೆಯ ವ್ಯಾಪ್ತಿಯಲ್ಲಿ ತಾಪಮಾನ ಇಳಿಕೆ ಆಗಲಿದೆ. ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಲಾಗಿದೆ.
ಭಾರಿ ಮಳೆಗೆ ಹುಬ್ಬಳ್ಳಿಯಲ್ಲಿ ಅಪಾರ ಹಾನಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ಮಧ್ಯಾಹ್ನದ ನಂತರ ದಿಢೀರ್ ಬಂದ ಜೋರು ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಕಾಟನ್ ಮಾರ್ಕೆಟ್ ಕಮರ್ಷಿಯಲ್ ಕಂಪೌಂಡ್ ಗೋಡೆ ಕುಸಿದಿದೆ. ಕಿಮ್ಸ್ ಹಿಂಭಾಗ ಇರುವ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಗೋಡೆ ಕುಸಿತವಾಗಿ, ಕಾಂಪೌಂಡ್ ಒಳಗೆ ಅಪಾರ ಪ್ರಮಾಣದ ನೀರು ನುಗ್ಗಿತು. ಕಿಮ್ಸ್ ಸುತ್ತಮುತ್ತ ರಸ್ತೆಗಳು ಜಲಾವೃತವಾಗಿದ್ದವು.
ನೀರಲ್ಲಿ ಮುಳಗಿದ 24 ಬೈಕ್
ಇನ್ನೂ ಕೀಮ್ಸ್ ಹಿಂದೆ ಕಮರ್ಷಿಯಲ್ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ 24 ಬೈಕ್ ಗಳೂ ನೀರೊಳಗೆ ಮುಳುಗಿ ಹಾನಿಗೀಡಾಗಿವೆ. ಪ್ರತಿ ಭಾರಿಯು ಮಳೆ ಬಂದಾಗ ಕಾಂಪ್ಲೆಕ್ಸ್ ಗೆ ಒಳಗೆ ನೀರು ನುಗ್ಗುವ ಕುರಿತು ಪಾಲಿಕೆಗೆ ಅದೆಷ್ಟೋ ಭಾರಿ ಮನವಿ ಮಾಡಿದ್ದರು ಪ್ರಯೋಜನಾಗಿಲ್ಲ ಎನ್ನುತ್ತಾರೆ ಕಟ್ಟಡದ ಮಾಲೀಕರು ಮತ್ತು ಸ್ಥಳೀಯ ನಿವಾಸಿಗಳು.
ಹುಬ್ಬಳ್ಳಿ-ಧಾರವಾಡ ಪಾಲಿಕೆ ಮತ್ತು ಕಿಮ್ಸ್ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಈ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರು ನುಗ್ಗಿ ಉಂಟಾದ ಹಾನಿಗೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು. ಕಾಂಪೌಂಡ್ ಗಳಲ್ಲಿ ಸಂಗ್ರಹಗೊಂಡ ನೀರನ್ನು ಹೊರ ಹಾಕಲು ಹರಸಾಹಸಪಟ್ಟರು.
ತುಳಜಾ ಭವಾನಿ ದೇವಸ್ಥಾನಕ್ಕೆ ನುಗ್ಗಿದ ನೀರು
ಇನ್ನೂ ಮೂರು ಸಾವಿರ ಮಠದ ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ನಿಂತದ್ದು ಕಂಡು ಬಂತು. ಇಲ್ಲಿನ ದಾಜಿಬಾನಪೇಟೆಯಲ್ಲಿರುವ ತುಳಜಾ ಭವಾನಿ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ. ದೇವಸ್ಥಾನ ಮುಂದೆ ಓಡಾಡಲು ಜಾಗವಿಲ್ಲದಂತೆ ನೀರು ನಿಂತಿತ್ತು. ಒಳಚರಂಡಿ ಉಕ್ಕಿ ಹರಿದ ಪರಿಣಾಮ ರಸ್ತೆಯಲ್ಲಿ ಗಬ್ಬು ವಾಸನೆ, ಕೊಚ್ಚೆಯ ವಾತಾವರಣ ನಿರ್ಮಾಣವಾಗಿತ್ತು.

ದಾಜಿಬಾನಪೇಟೆಯ ನಿವಾಸಿಗಳು ಅನಿವಾರ್ಯವಾಗಿ ಇದೇ ನೀರಿನಲ್ಲಿ ಓಡಾಡಿರು. ವಾಹನ ಸಂಚಾರಕ್ಕೆ ತೊಂದರೆ ಆಯಿತು. ಶನಿವಾರ ಮಳೆ ಆಗಿದ್ದು, ಭಾನುವಾರವು ಕೆಲವೆಡೆ ಸಮಸ್ಯೆ ಇನ್ನೂ ಹಾಗಾಯೇ ಇತ್ತು.
ರಸ್ತೆ ಮೇಲೆ ನದಿಯಂತೆ ಹರಿದ ಮಳೆ-ಒಳಚದರಂಡಿ ನೀರು
ಪ್ರಮುಖ ರಸ್ತೆಗಳಲ್ಲಿ ಮಳೆ ನೀರಿನ ಜೊತೆ ಚರಂಡಿ ನೀರು ಸಾಗರದ ಅಲೆಯಂತೆ ಹರಿದು ಹೋಗಿದ್ದನ್ನು ಜನ ಕಣ್ಣಾರೆ ಕಂಡರು. ರಸ್ತೆಯ ಅಕ್ಕಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೈಕ್ಗಳು ಮುಳುಗಿದವು. ಕೆಲವು ರಸ್ತೆಗಳಲ್ಲಿ ಬೈಕ್ಗಳಿಗೆ ಈ ಭಾರಿ ಗಾಳಿ-ಮಳೆಯಿಂದ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಕೆಲವು ವಾರಗಳಿಂದ ಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಜನತೆಗೆ ಈ ಭಾರಿ ಮಳೆಯು ಸುರಿದು ಸಂತಸ ತಂದಿತು. ಜೊತೆಗೆ ಜನಜೀವನವನ್ನು ಅಸ್ತವ್ಯಸ್ತವಾಗಿ ಮಾಡಿತು. ಮಳೆಯಿಂದಾಗಿ ಹುಬ್ಬಳ್ಳಿ ನ್ಯೂ ಕಾಟನ್ ಮಾರ್ಕೆಟ್, ದುರ್ಗದಬೈಲ್, ವಿದ್ಯಾನಗರದ ರಸ್ತೆಗಳು ಜಲಾವೃತವಾಗಿದ್ದವು.
ಗಣೇಶ ಮೂರ್ತಿ-ಲಿಂಗು ಜಲಾವೃತ
ನ್ಯೂ ಕಾಟನ್ ಮಾರ್ಕೆಟ್ನ ಶ್ರೀ ವೀರಾಂಜನೇಯ ದೇವಸ್ಥಾನದ ಆವರಣದೊಳಗಿರುವ ಶ್ರೀ ಚಿತ್ರಲಿಂಗೇಶ್ವರ ಲಿಂಗು ಮತ್ತು ಗಣೇಶನ ಮೂರ್ತಿ ಸುರಿದ ಮಳೆಯಿಂದ ಜಲಾವೃತವಾದವು. ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆ ಮಾಲೀಕರು ಇಡೀ ರಾತ್ರಿ ಜಾಗರಣೆ ಮಾಡಿದರು. ಇನ್ನೂ ಕೆಲವು ಮನೆಗಳಲ್ಲಿ ಮನೆಯಿಂದ ನೀರು ಹೊರ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿ ಆಗಿದೆ.
ಹಲವೆಡೆ ಮರಗಳು ಬಿದ್ದು ಮನೆಗಳಿಗೆ ಹಾನಿ ಆದರೆ, ವಿದ್ಯುತ್ ಟಿಸಿ ಸುಟ್ಟ ಪರಿಣಾಮ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಮುಂದಿನ ಎಡು ದಿನಗಳು ಇದೇ ರೀತಿ ಮಳೆ ಬರುವ ಲಕ್ಷಣಗಳ ಇದೆ. ಆದ್ದರಿಂದ ಅವಳಿ ನಗರ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.












Click it and Unblock the Notifications