ಧಾರವಾಡ : ಸವಿರುಚಿ ಸಂಚಾರಿ ಕ್ಯಾಂಟೀನ್ಗೆ ಚಾಲನೆ
ಧಾರವಾಡ, ಜುಲೈ 06 : ಧಾರವಾಡದಲ್ಲಿ 'ಸವಿರುಚಿ ಕ್ಯಾಂಟೀನ್'ಗೆ ಚಾಲನೆ ಸಿಕ್ಕಿದೆ. 2017-18ನೇ ಸಾಲಿನ ಬಜೆಟ್ನಲ್ಲಿ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭಿಸುವ ಕುರಿತು ಘೋಷಣೆ ಮಾಡಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಸವಿರುಚಿ ಸಂಚಾರಿ ಕ್ಯಾಂಟೀನ್ ಆರಂಭಿಸಿದೆ. ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಶುಕ್ರವಾರ ಕ್ಯಾಂಟೀನ್ ಉದ್ಘಾಟಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂಚಾರಿ ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, 'ಶುಚಿ-ರುಚಿಯಾದ ಉಪಹಾರ, ಊಟವನ್ನು ಗ್ರಾಹಕರು ಇರುವಲ್ಲಿಗೆ ತೆರಳಿ ಯೋಗ್ಯ ದರದಲ್ಲಿ ಒದಗಿಸಿದರೆ, ಉತ್ತಮ ಆದಾಯಗಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ' ಎಂದು ಹೇಳಿದರು.

'ಗುಣಮಟ್ಟ ಹಾಗೂ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಜಿಲ್ಲೆಯ ಜನರಿಗೆ ಒಳ್ಳೆಯ ಆಹಾರ ಪೂರೈಸಬೇಕು' ಎಂದು ಹೇಳಿದರು. ಸವಿರುಚಿ ಕ್ಯಾಂಟೀನ್ನಲ್ಲಿ ಉಪಹಾರವನ್ನು ಸವಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2017-18ನೇ ಸಾಲಿನಲ್ಲಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳು 'ಸವಿರುಚಿ ಸಂಚಾರಿ ಕ್ಯಾಂಟೀನ್' ಯೋಜನೆ ಘೋಷಣೆ ಮಾಡಿದ್ದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 10 ಲಕ್ಷ ರೂ.ಗಳ ಬಡ್ಡಿ ರಹಿತ ಸಾಲವನ್ನು ಜಿಲ್ಲೆಯ ಮಹಿಳಾ ಒಕ್ಕೂಟಕ್ಕೆ ನೀಡಲಾಗಿದೆ.
ಈ ಹಣದಲ್ಲಿ 6 ಲಕ್ಷ ರೂ.ವೆಚ್ಚದಲ್ಲಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಿದ ವಾಹನ, ಉಳಿದ 4 ಲಕ್ಷ ರೂ.ವೆಚ್ಚದಲ್ಲಿ ಪಾಕೋಪಕರಣಗಳು, ಆಹಾರ ಸಾಮಗ್ರಿಗಳು, ಪೀಠೋಪಕರಣಗಳನ್ನು ಖರೀದಿಸಿ ವಹಿವಾಟು ನಿರ್ವಹಿಸಬೇಕು.

6 ತಿಂಗಳ ಕಾಲಾವಕಾಶದ ನಂತರ ಪ್ರತಿ ತಿಂಗಳು 12 ಸಾವಿರ ರೂ.ಗಳನ್ನು ಮರುಪಾವತಿ ಮಾಡಬೇಕು. ಕಾಮಧೇನು ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟಕ್ಕೆ ಈ ಸೌಲಭ್ಯ ಕಲ್ಪಿಸಲಾಗಿದೆ.












Click it and Unblock the Notifications