ಅನಂತಕುಮಾರ್ ಹೆಗಡೇನ ಮಂತ್ರಿ ಮಾಡಿದವರು ಕಾಡುಕತ್ತೆ: ಬಸವರಾಜ ದೇವರು
ಧಾರವಾಡ, ಜನವರಿ 22: 24 ಗಂಟೆಯೊಳಗೆ ಕೇಂದ್ರ ಸರಕಾರವು ಅನಂತಕುಮಾರ್ ಹೆಗಡೆ ರಾಜೀನಾಮೆ ಪಡೆಯಬೇಕು. ಸಂವಿಧಾನ ಬದಲಿಸಲು ಅನಂತಕುಮಾರ್ ಹೆಗಡೆ ಅಪ್ಪ ಬಂದರೂ ಆಗಲ್ಲ. ಅದಕ್ಕೆ ಮತ್ತೆ ಅಂಬೇಡ್ಕರ್ ಹುಟ್ಟಿ ಬರಬೇಕು. ಅನಂತಕುಮಾರ್ ಹೆಗಡೆ ನಾಲಾಯಕ್. - ಹೀಗೆ ಮನಸೂರು ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಂಸತ್ ನ ಮೇಲೆ ಆಗಬೇಕು ಎಂದ ಅವರು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರಿಡಬೆಕು. ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸ್ತುಗಳು ಹೊರದೇಶದಲ್ಲಿ ಇದ್ದು, ಕೂಡಲೇ ಅವುಗಳನ್ನು ವಾಪಸ್ ತರಲು ರಾಜ್ಯ ಹಾಗೂ ಕೇಂದ್ರ ಸರಕಾರ ಮುಂದಾಗಬೇಕು ಎಂದರು.
ಮತ್ತೆ ಜಾತ್ಯಾತೀತರ ಬಗ್ಗೆ ಕುಹುಕವಾಡಿದ ಅನಂತ್ಕುಮಾರ್ ಹೆಗಡೆ
ರಾಜ್ಯ ಸರಕಾರವು ರಾಯಣ್ಣ ಪ್ರಶಸ್ತಿಯನ್ನು ಮುದುಕರಿಗೆ ಕೊಟ್ಟಿದೆ. ಅದು ಯುವಕರಿಗೆ ಕೊಡಬೇಕು ಎಂದು ಆಗ್ರಹಿಸಿದ ಅವರು, ಅನಂತ ಕುಮಾರ್ ಹೆಗಡೆ ಅವಿವೇಕಿ ಎಂದು ಜರಿದರು. ಆತನ ಬಗ್ಗೆ ಮಾತನಾಡಿದರೆ ನಾಲಗೆ ಹೊಲಸಾಗುತ್ತದೆ. ಕೌಶಾಲ್ಯಾಭಿವೃದ್ಧಿ ಅನ್ನುವುದಕ್ಕಿಂತ ಕಾಡೆಮ್ಮೆ ಇದ್ದ ಹಂಗೆ. ಕಾಡು ಕತ್ತೆ. ಕಾಡು ಕೋಣ. ದನ ಇದ್ದಹಾಗೆ ಎಂದು ವಾಗ್ದಾಳಿ ನಡೆಸಿದರು.
ದಲಿತರ ಬಗ್ಗೆ ಮಾತನಾಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಬೇಕು. ಅನಂತಕುಮಾರ್ ಹೆಗಡೆಯನ್ನು ಮಂತ್ರಿ ಮಾಡಿದವರು ಕಾಡು ಕತ್ತೆ ಎಂದು ಬಸವರಾಜ ದೇವರು ಸ್ವಾಮೀಜಿ ಹೇಳಿದರು.