ಹೆಣ್ಣಿನ ಶೋಷಣೆ ಬಿಂಬಿಸುವ ಪಾಂಚಾಲಿಕಾ ಪುಸ್ತಕ
ಧಾರವಾಡ, ಜು. 28 : ಅವನಿ ರಸಿಕರ ರಂಗ ಧಾರವಾಡ ಇವರು ಪ್ರಕಟಿಸಿರುವ ಹೊರನಾಡಿನ ಕನ್ನಡತಿ ಡಾ. ವಾಣಿ ಸಂದೀಪ್ ರವರ "ಪಾಂಚಾಲಿಕಾ" ಪುಸ್ತಕದ ಲೋಕಾರ್ಪಣೆ 31 ಜುಲೈ 2014ರಂದು ಸಂಜೆ 5 ಗಂಟೆಗೆ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ನಡೆಯಲಿದ್ದು, ಪಂಡಿತ ಜಯತೀರ್ಥ ಮೇವುಂಡಿಯವರ ಸಂಗೀತ ಕಛೇರಿಯನ್ನೂ ಏರ್ಪಡಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಶಾಂತ ಇಮ್ರಾಪೂರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಮಾಜಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ಉಪಸ್ಥಿತಿಯಲ್ಲಿ ಸಾಹಿತ್ಯ ಮತ್ತು ಸಂಗೀತಗಳ ಸಮಾರಂಭ ನಡೆಯಲಿದೆ. [ಮೇವುಂಡಿ ಜಯತೀರ್ಥ ಸಂದರ್ಶನ]

ಕೃತಿ "ಪಾಂಚಾಲಿಕಾ"
ಸಮಾಜದಲ್ಲಿ ಬೆರಳೆಣಿಕೆಯಲ್ಲಿ ಕಲವು ಮಹಿಳೆಯರು ಸ್ಥಾನ ಮಾನ ಪಡೆದಿದ್ದಾರೆ. ಮಿಕ್ಕ ಮಹಿಳೆಯರ ಸ್ಥಿತಿ ದಯನೀಯ, ಶೋಚನೀಯ. ಜಗತ್ತಿನಲ್ಲಿ ಮುಂದುವರಿದ, ಮುಂದುವರಿಯದ ಯಾವುದೇ ದೇಶವಿರಲಿ ಹೆಣ್ಣಿನ ದೌರ್ಜನ್ಯ, ಶೋಷಣೆಗೆ ಯಾವುದೇ ಸೀಮೆಯ ಪರಿಧಿಯ ಭೇದಭಾವಗಳಿಲ್ಲ. ಹೆಣ್ಣಿನ ಶೋಷಣೆಯನ್ನು ಕಣ್ಣಾರೆ ಕಂಡಿರುವ ಕತೆಗಾರ್ತಿ, ಅನಾಥ-ಅಸಹಾಯಕ ಮಹಿಳೆಯರನ್ನು ಭೇಟಿಯಾದ ನೈಜ ದಾರುಣ ಘಟನೆಗಳು ಪುಸ್ತಕದ ರೂಪ ತಾಳಿವೆಯೆಂದು ಹೇಳಿದ್ದಾರೆ.
ಹಲವು ಮಹಿಳೆಯರ ಜೀವನದ ಜೀವಂತ ದಾರುಣ ಸ್ಥಿತಿಗಳನ್ನು, ಲಿಬಿಯಾ, ಗಲ್ಪ್ ದೇಶ, ಭಾರತವನ್ನೊಳಗೊಂಡ ನೈಜ ಚಿತ್ರಣಗಳು ದಿಟ್ಟತನದಿಂದ, ಸಂಕೋಚವಲ್ಲದೆ, ನಿಖರವಾಗಿ ನಿರೂಪಿಸಿದ್ದು ಬಹಳ ಅಪರೂಪವಾಗಿದೆ. ಜೊತೆಗೆ ವೈದ್ಯಕೀಯ ವಿವರಗಳನ್ನೂ ಅಧಿಕಾರ ವಾಣಿಯಿಂದ ಬರೆದಿದ್ದಾರೆ. ಒಂದೊಂದು ಕತೆಯಲ್ಲಿ ಒಂದೊಂದು ದುರಂತವಿದೆ. ಸಮಾಜದಲ್ಲಿರುವ ಕೆಲವು ಸತ್ಯಗಳನ್ನು ಬೆಳಕಿಗೆ ತಂದಿರುವ ಲೇಖಕಿಯ ಸಾಮಾಜಿಕ ಕಳಕಳಿ ಬಹಳಷ್ಟು ಚಿಂತನವನ್ನು ಅಭಿವ್ಯಕ್ತಗೊಳಿಸುತ್ತದೆ.
ಲೇಖಕರ ಕಿರು ಪರಿಚಯ
ಬಿಎಸ್ಸಿ ಪದವಿಧರೆಯಾಗಿ, ನಿಸರ್ಗ ಚಿಕಿತ್ಸಾ ವೈದ್ಯರಾಗಿ, ಮಾನವ ಶಾಸ್ತ್ರದಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿ ಪಡೆದು ಉದ್ಯೋಗಸ್ಥರಾಗಿರುವ ಡಾ.ವಾಣಿ ಸಂದೀಪ್, ತಮ್ಮ ಪತಿ ಡಾ. ಸಂದೀಪ್ ಜೊತೆಯಲ್ಲಿ ಲಿಬಿಯಾ ಮುಂತಾದ ಹಲವು ದೇಶಗಳನ್ನು ಸುತ್ತಾಡಿ ಈಗ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ.












Click it and Unblock the Notifications