ಮುತಾಲಿಕ್ ದೇಸಾಯಿಗೆ ಪ್ರಹ್ಲಾದ್ ಜೋಶಿ ಎಚ್ಚರಿಕೆ
ಧಾರವಾಡ, ನ,10: ಕರ್ನಾಟಕ ರಾಜ್ಯ ಹಿಂದೂ ಅಧಿವೇಶನದ ಹೆಸರಿನಲ್ಲಿ ರಾಜಕೀಯ ರಂಗಕ್ಕೆ ಧುಮುಕಲು ಸೂಕ್ತ ವೇದಿಕೆ ನಿರ್ಮಿಸಿಕೊಳ್ಳುತ್ತಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದೇಸಾಯಿ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಕಿಡಿಕಾರಿದ್ದಾರೆ.
ನವೆಂಬರ್ 8 ರಿಂದ ಮೂರು ದಿನಗಳ ಕಾಲ ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಿಂದೂ ಅಧಿವೇಶನ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಮೋದಿ-ಮುತಾಲಿಕ್ ಬ್ರಿಗೇಡ್ ಸ್ಥಾಪನೆಗೊಂಡಿದ್ದು, ದೇಶಕ್ಕೆ ಮೋದಿ-ರಾಜ್ಯಕ್ಕೆ ಮುತಾಲಿಕ್ ಎಂದು ಬ್ಯಾನರ್ ಬರೆದುಕೊಂಡು ಸ್ಥಳೀಯರಿಂದ 100 ರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಶ್ರೀರಾಮಸೇನೆ ಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಲಿಂಗರಾಜ ಪಾಟೀಲ ತೀವ್ರವಾಗಿ ಖಂಡಿಸಿದ್ದರು. ಆದರೆ, ತಕ್ಷಣವೆ ಪ್ರತಿಕ್ರಿಯೆ ನೀಡಿದ್ದ ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ ಅವರು ನಾವು ಹಿಂದೂ ಸಮಾವೇಶಕ್ಕೆ ಹಣ ಸಂಗ್ರಹಿಸಿದ್ದು ನಿಜ. ಸ್ಥಳೀಯರು ಸ್ವಚ್ಛೆಯಿಂದ ದಾನ ನೀಡಿದ್ದಾರೆ ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ವೃಥಾರೋಪ ಮಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ ಅವರು ಕೂಡಲೇ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡಿ, ರಾಷ್ಟ್ರೀಯ ನಾಯಕ, ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೆಸರು, ಭಾವಚಿತ್ರವನ್ನು ಶ್ರೀರಾಮಸೇನೆ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ರಾಜಕೀಯ ಉದ್ದೇಶಕ್ಕೆ ಈ ರೀತಿ ಇತರೆ ಪಕ್ಷ, ಸಂಘಟನೆಗಳು ಮೋದಿ ಹೆಸರು, ಚಿತ್ರ ಬಳಸುವುದು ನೈತಿಕತೆಯಲ್ಲ. ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಕಾನೂನು ಮೂಲಕ ಕ್ರಮ ಜರುಗಿಸಲು ಯೋಚಿಸಲಾಗಿದೆ ಎಂದಿದ್ದಾರೆ.
ಸುಮಾರು 50ಕ್ಕೂ ಅಧಿಕ ಹಿಂದೂಪರ ಸಂಘಟನೆಗಳು ಈ ಹಿಂದೂ ಅಧಿವೇಶನದಲ್ಲಿ ಪಾಲ್ಗೊಂಡಿವೆ. ಹುಬ್ಬಳ್ಳಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಅಧಿವೇಶನ ನಡೆದಿದ್ದು, ಅಧಿವೇಶನವನ್ನು ಸೇವಾಲಾಲ್ ಬಂಜಾರ ಸಮಾಜದ ಸ್ವಾಮೀಜಿಗಳು ಉದ್ಘಾಟಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಸ್ಲಿಮರ ತುಷ್ಟೀಕರಣ ನೀತಿ ಅನುಸರಿಸುತ್ತ ಬಹು ಸಂಖ್ಯಾತರನ್ನು ಕಡೆಗಣಿಸುತ್ತಿರುವುದನ್ನು ಖಂಡಿಸಿ ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಮುತಾಲಿಕ್ ಹೇಳಿದ್ದಾರೆ.
ಜೋಶಿ ಅವರ ವಿರುದ್ಧ: ಆದರೆ, ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಮೇಲೆ ರಾಜಕೀಯ ಪ್ರವೇಶಕ್ಕೆ ಸೂಕ್ತವಾದ ವೇದಿಕೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಗುಟ್ಟಾದ ವಿಷಯವೇನಲ್ಲ.
ವಿಧಾನಸಭೆ ಚುನಾವಣೆ ವೇಳೆ ಶ್ರೀರಾಮಸೇನೆ ಮುಖಂಡರಿಗೆ ಟಿಕೆಟ್ ನೀಡುವ ಭರವಸೆ ನೀಡಿ ಕೈ ಕೊಟ್ಟ ಬಿಜೆಪಿ ನಾಯಕರಿಗೆ ಪಾಠ ಕಲಿಸಲು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಟಿ ಅವರ ವಿರುದ್ಧ ಸ್ಪರ್ಧಿಸಲು ಮುತಾಲಿಕ್ ನಿರ್ಧರಿಸಿದ್ದಾರೆ.ಚಿಕ್ಕಮಗಳೂರು, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ, ಧಾರವಾಡ ಕ್ಷೇತ್ರಗಳಲ್ಲಿ ಸೇನೆಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯಿದೆ. ಸ್ಪರ್ಧೆ ವಿವರಗಳನ್ನು ನರೇಂದ್ರ ಮೋದಿ ಅವರಿಗೆ ಇ ಮೇಲ್ ಮಾಡಿರುವುದು ಕುತೂಹಲದ ಸಂಗತಿ.












Click it and Unblock the Notifications