ರೋಗಿಗಳನ್ನು ಸ್ವಂತ ವೆಚ್ಚದಲ್ಲಿ ಮನೆಗೆ ತಲುಪಿಸಿದ ಕೊರೊನಾ ಸೈನಿಕರು
ಧಾರವಾಡ, ಏಪ್ರಿಲ್ 15 : ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಕೊರೊನಾ ಸೈನಿಕರ ಪಡೆಯನ್ನು ಎಲ್ಲ ಜಿಲ್ಲೆಗಳಲ್ಲಿ ರಚಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಗುಂಪು ರಚಿಸಿಕೊಂಡು ಈ ಸೈನಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೋವಿಗೆ ಸ್ಪಂದಿಸುತ್ತಿದ್ದಾರೆ. ಸ್ವಂತ ವಾಹನದಲ್ಲಿ, ಸ್ವಂತ ಖರ್ಚಿನಲ್ಲಿ ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ.
ಧಾರವಾಡದ ಎನ್ಟಿಟಿಎಫ್ ಹತ್ತಿರದ ಓದುಗೌಡರ ಬಿಲ್ಡಿಂಗ್ನ ನಿವಾಸಿ ಮೃದಲಾ ವಿ. ಪಾಟೀಲ್ ತಮ್ಮ ಸ್ವಂತ ಹಣವನ್ನು ನೀಡಿ ಬಡ ರೋಗಿಯೊಬ್ಬರನ್ನು ಅಂಬ್ಯುಲೆನ್ಸ್ ಮೂಲಕ ಕೊಪ್ಪಳಕ್ಕೆ ತಲುಪಿಸಿದ್ದಾರೆ. ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವ ಕೊಪ್ಪಳದ ಗಾಳೆಪ್ಪ ಕಟ್ಟಿಮನಿ ಎಂಬ ಯುವಕ ಹುಬ್ಬಳ್ಳಿಯ ತತ್ವಾದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬುಧವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು. ಆದರೆ, ಅವರಿಗೆ ತಮ್ಮ ಊರಿಗೆ ಹೋಗಲು ಆರ್ಥಿಕ ಶಕ್ತಿ ಇರಲಿಲ್ಲ. ಇದರ ಮಾಹಿತಿ ಪಡೆದ ಮೃದಲಾ ಪಾಟೀಲ ಅವರು ತಕ್ಷಣ ಸ್ಪಂದಿಸಿ ಅಂಬುಲೆನ್ಸ್ ಬಾಡಿಗೆ ವ್ಯವಸ್ಥೆ ಮಾಡಿ ರೋಗಿಯನ್ನು ಮನೆಗೆ ತಲುಪಿಸಿದರು.
ಔಷಧಿ ಪೂರೈಕೆ : ಧಾರವಾಡದ ಶ್ರೇಯಾ ಆಸ್ಪತ್ರೆ ಹಿಂಭಾಗದ ಆದರ್ಶ ಅಗಡಿ ಅವರ ಕುಟುಂಬಕ್ಕೆ ಬೆಳಗಾವಿಯಲ್ಲಿ ಮಾತ್ರ ದೊರೆಯುವ ಔಷಧಿಗಳನ್ನು ಕೊರೊನಾ ಸೈನಿಕರು ತಂದುಕೊಟ್ಟಿದ್ದಾರೆ. ಬೆಳಗಾವಿಯ ಚೇತನ್ ಅವರು ಔಷಧಿ ತೆಗೆದುಕೊಂಡು ನರೇಂದ್ರ ಬೈಪಾಸ್ವರೆಗೆ ಬಂದಿದ್ದಾರೆ. ಬಳಿಕ ಧಾರವಾಡ ಕೊರೊನಾ ಸೈನಿಕ ಅಬ್ದುಲ್ ಜಬ್ಬಾರ್ ನದಾಫ್ ಅವರು ಅವುಗಳನ್ನು ಸಂಗ್ರಹಿಸಿ ಅಗಡಿಯವರ ಮನೆಗೆ ತಲುಪಿಸಿದ್ದಾರೆ.












Click it and Unblock the Notifications