ಭಂಡಾರದಲ್ಲಿ ಮಿಂದೆದ್ದ ಮನಸೂರು ಗ್ರಾಮದ ಜನತೆ, ವಿವರ ಇಲ್ಲಿದೆ
ಧಾರವಾಡ, ಮೇ, 25: ಎತ್ತ ನೋಡಿದರತ್ತ ಭಂಡಾರ ತೂರಾಟ. ಉಧೋ ಉಧೋ ಎಂದು ಕೂಗುತ್ತಿರುವ ಭಕ್ತ ಸಮೂಹ. ದೇವಿಯ ಮೂರ್ತಿಯನ್ನು ಹೊತ್ತು ಸಾಗುತ್ತಿರುವ ಭಕ್ತರು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಧಾರವಾಡ ತಾಲೂಕಿನ ಮನಸೂರು ಗ್ರಾಮ ಆಗಿದೆ.
ಮನಸೂರು ಗ್ರಾಮದಲ್ಲಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಇಂದು ಹೊನ್ನಾಟ ಆರಂಭವಾಗಿದೆ. ಕರಿಯಮ್ಮದೇವಿ ಮೂರ್ತಿಯನ್ನು ಊರ ತುಂಬಾ ಮೆರವಣಿಗೆ ಮಾಡಲಾಗುತ್ತಿದ್ದು, ಭಕ್ತರು ಪರಸ್ಪರ ಭಂಡಾರವನ್ನು ಎರಚಿ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಒಟ್ಟಾರೆ ಮನಸೂರು ಗ್ರಾಮದಲ್ಲಿ ಅದ್ಧೂರಿಯಿಂದ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಭಕ್ತರು ಉತ್ಸಾಹದಿಂದಲೇ ಜಾತ್ರೆಯನ್ನು ಆಚರಿಸುತ್ತಿದ್ದಾರೆ.
ಭಂಡಾರ ಹೊನ್ನಾಟದ ಸಂಭ್ರಮ
ಇತ್ತೀಚೆಗಷ್ಟೇ ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾಮದಲ್ಲಿ ಗ್ರಾಮದೇವಿಯ ಜಾತ್ರೆಯ ಅಂಗವಾಗಿ ಭಂಡಾರದ ಹೊನ್ನಾಟ ಹಾಗೂ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಲಾಯಿತು.
ಧಾರವಾಡ ಜಿಲ್ಲೆಯ ಕಟ್ನೂರಿನಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮದೇವಿಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಐದು ದಿನಗಳ ಕಾಲ ವಿನೂತನ ಹಾಗೂ ವಿಭಿನ್ನ ರೀತಿಯಲ್ಲಿ ಜಾತ್ರೆಯನ್ನು ಆಚರಣೆ ಮಾಡಲಾಗುತ್ತು. ಗ್ರಾಮದಲ್ಲಿ ಭಂಡಾರದ ಹೊನ್ನಾಟದಲ್ಲಿ ಯಾವುದೇ ಭೇದಭಾವ ಇಲ್ಲದೇ ಇಲ್ಲದಯೇ ಪರಸ್ಪರ ಭಂಡಾರ ಎರಚುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಗಿತ್ತು
ಮಹಿಳೆಯರು, ಮಕ್ಕಳು ಪರಸ್ಪರ ಸಂಪ್ರದಾಯಿಕ ಆಟಗಳನ್ನು ಆಡುವ ಮೂಲಕ ಮೆರವಣಿಗೆಗೆ ಹೊಸ ಮೆರಗನ್ನು ತಂದಿರುವುದು ವಿಶೇಷವಾಗಿದೆ. ಇನ್ನೂ ಯುವಕರ ಬಗ್ಗೆ ಹೇಳಬೇಕಾಗಿಯೇ ಇಲ್ಲ, ಯುವಕರು ಇಂತಹ ಹಬ್ಬಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಸಂಭ್ರಮಿಸಿರುವುದು ನೋಡುಗರ ಕಣ್ಮನ ಸೆಳೆಯುವಂತಿರುತ್ತದೆ.
ಇನ್ನು ಯಾವುದೇ ಜಾತಿ ಮತಗಳ ಭೇದ ಭಾವವಿಲ್ಲದೇ ಭಂಡಾರದ ಹೊನ್ನಾಟದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ. ಈ ಮೂಲಕ ಗ್ರಾಮದೇವಿಯ ಜಾತ್ರೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿತ್ತು. ಅಲ್ಲದೆ ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ, ಪುನಸ್ಕಾರಗಳ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿತ್ತು.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಜಾತ್ರೆ ಅಂದರೆ ನಿಜಕ್ಕೂ ಒಂದು ವಿನೂತನ ರೀತಿಯ ಮೆರಗು ಇದ್ದೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬುವಂತೆ ಕಟ್ನೂರು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾಗಿತ್ತು.
ಕುರಿಗೆ ಹುಟ್ಟುಹಬ್ಬ ಆಚರಣೆ
ಕುರಿಗೆ ಹುಟ್ಟುಹಬ್ಬ ಆಚರಣೆ ಸಾಮಾನ್ಯವಾಗಿ ಮನುಷ್ಯರು ಜನ್ಮ ದಿನಾಚರಣೆ ಮಾಡಿಕೊಳ್ಳುತ್ತಾರೆ. ಬರ್ತಡೇ, ಮದುವೆ, ಇನ್ನಿತರ ಸಂತೋಷ ಕ್ಷಣಗಳನ್ನು ಕಳೆಯಲು ಕೇಕ್ ಕತ್ತರಿಸುವುದು ರೂಡಿಯಲ್ಲಿದೆ. ಆಧುನಿಕತೆಯ ಭರಾಟೆಯಲ್ಲಿ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆಚರಣೆಗಳು ಹುಟ್ಟಿಕೊಂಡಂತೆ, ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳಿಗೆ ಸೀಮಂತ, ಹುಟ್ಟು ಹಬ್ಬ ಆಚರಣೆಗಳು ನಡೆಯುತ್ತಿದೆ. ಇದೇ ರೀತಿ ಕುರಿಗೆ ಹುಟ್ಟು ಹಬ್ಬ ಆಚರಿಸುರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಕಿಟ್ಟಪ್ಪ ಎಂಬ ಕುರಿ ಮಾಲೀಕ, ಕುರಿಗೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಎರಡನೇ ವರ್ಷದ ಕುರಿಗೆ ಹುಟ್ಟು ಹಬ್ಬ ಆಚರಿಸಿ ಎಲ್ಲರ ಗಮನ ಸೆಳೆದಿದ್ದರು. ಕಿಟ್ಟಪ್ಪ ಪ್ರೀತಿಯಿಂದ ಒಂದು ಕುರಿಮರಿ ಸಾಕಿದ್ದರು. ಕುರಿ ದೊಡ್ಡದಾದ ಬಳಿಕ ಒಂದು ಹೆಣ್ಣು ಕುರಿ ಮರಿಗೆ ಜನ್ಮ ನೀಡಿದೆ. ಕಾರಣಾಂತರಗಳಿಂದ ಜನ್ಮ ನೀಡಿದ ಕುರಿ ಸಾವನ್ನಪ್ಪಿದೆ. ಅನಾಥವಾಗಿದ್ದ ಸಣ್ಣ ಕುರಿ ಮರಿಯ ಜೊತೆಗೆ ಇನ್ನೊಂದು ಕುರಿ ಮರಿ ತಂದು ಎರಡು ಮರಿಗಳನ್ನು ಸಾಕಿದ್ದಾರೆ.
ಆದರೆ ತಬ್ಬಲಿಯಾಗಿದ್ದ ಕುರಿ ಮರಿ ದೊಡ್ಡದಾಗಿ ಬೆಳೆದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊದಲನೇ ವರ್ಷದಲ್ಲಿ ಐದು ಕೆಜಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಇದೀಗ ಎರಡನೇ ಬಾರಿಗೆ ಮೂರು ಕೆಜಿ ಕೇಕ್ ಹಾಗೂ ಕಾರ ತಂದು ಜನ್ಮದಿನಾಚರಣೆ ಕಾರ್ಯಕ್ರಮ ಮಾಡಿದ್ದರು. ಇಷ್ಟೆ ಅಲ್ಲದೇ ಕುರಿ ಮಾಲೀಕ ಗ್ರಾಮದ ಅಕ್ಕಪಕ್ಕದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಕುರಿ ಮಾಲೀಕನ ಕರೆಗೆ ಓಗೊಟ್ಟು ಸ್ನೇಹಿತರು, ಗ್ರಾಮಸ್ಥರು ಬರ್ತಡೇ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಯ ಕೋರಿ, ಗಿಫ್ಟ್ ರೂಪದಲ್ಲಿ 100, 200 ರೂಪಾಯಿ ಹಣವನ್ನು ನೀಡಿರುವುದು ವಿಶೇಷವಾಗಿತ್ತು.












Click it and Unblock the Notifications