ಸರ್ಕಾರಿ ಶಾಲೆ ಗೋಡೆ ಕೆಡವಿದ ಮೂವರ ಬಂಧನ: ಸತ್ಯ ಒಪ್ಪಿಕೊಂಡ ಆರೋಪಿಗಳು
ಧಾರವಾಡ, ಆಗಸ್ಟ್ 22: ಹುಬ್ಬಳ್ಳಿಯಲ್ಲಿ ಕಾರವಾರ ರಸ್ತೆಯ ಗಿರಣಿಚಾಳದಲ್ಲಿರುವ ಸುಮಾರು 135 ವರ್ಷಗಳ ಇತಿಹಾಸ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಗೋಡೆ ಕೆಡವಿದ ಪ್ರಕರಣವನ್ನು ಉಪನಗರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆ ಗೋಡೆ ಕೆಡವಿದರವನ್ನು ಖಾಕಿ ಬಂಧಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಲೆ ಗೋಡೆ ಕೆಡವಿದ ಪ್ರಕರಣ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಾರು ಕಲಿಯಲು ಹೋಗಿ ಶಾಲೆ ಗೋಡೆಗೆ ಡಿಕ್ಕಿ ಹೊಡೆದಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ವಿಚಾರಣೆ ವೇಳೆ ಅವರು ಬಾಯಿ ಬಿಟ್ಟಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾರವಾರ ರಸ್ತೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿ ಧ್ವಂಸಗೊಳಿಸಲಾಗಿತ್ತು. ಇದು ಸಾಕಷ್ಟು ಗೊಂದಲ-ಆತಂಕಕ್ಕೆ ಕಾರಣವಾಗಿತ್ತು. ಶಾಲೆಯಿರುವ ಬೆಲೆ ಬಾಳುವ ಭೂಮಿಯ ವಿವಾದದ ಹಿನ್ನೆಲೆಯಲ್ಲಿ ಕೃತ್ಯ ಎಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಸ್ಥಳೀಯರು ಪ್ರತಿಭಟನೆ ಮಾಡಿದ್ದರು.
ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಮೇಲೆ ಉಪನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಘಟನೆ ನಡೆದ 24 ಗಂಟೆಯಲ್ಲಿ ಪ್ರಕರಣದ ಆರೋಪಿಗಳು ಯಾರೆಂದು ಪತ್ತೆ ಮಾಡಿದ್ದು, ಗೋಡೆ ಒಡೆದವರನ್ನು ತ್ವರಿತವಾಗಿ ಬಂಧಿಸಿದ್ದಾರೆ. ಉಪನಗರ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಯಿತು.
ಪೊಲೀಸರು ದಾಜೀಬಾನಪೇಟೆ ನಿವಾಸಿಗಳಾದ ಪ್ರಶಾಂತ್, ಕಾರ್ತಿಕ್ ಹಬೀಬ್ ಹಾಗೂ ತೊರವಿಹಕ್ಕಲದ ವಿವೇಶಕ ಕಠಾರೆ ಎಂಬುವರನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಐತಿಹಾಸಿಕ ಶಾಲೆಗೆ ಕಾರು ನುಗ್ಗಿಸಿ ಕೃತ್ಯ
ಈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶತಮಾನದ ಇತಿಹಾಸ ಹೊಂದಿದೆ. ಇಲ್ಲಿ ದೊಡ್ಡ ಮೈದಾನ ಇರುವ ಕಾರಣಕ್ಕೆ ತಡರಾತ್ರಿ ಕಾರು ಚಾಲನೆ ಕಲಿಯಲು ಇವರು ತೆರಳಿದ್ದಾರೆ. ಈ ವೇಳೆ ಕಾರು ಜೋಗಾಗಿ ಬಂದು ಶಾಲೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಕಾರು ಕಲಿಯುವಾಗ ಬಂಧತ ಮೂವರ ಪೈಕಿ ಒಬ್ಬರು ಕಾರು ನುಗ್ಗಿಸಿದ್ದರಿಂದ ಈ ಘಟನೆ ನಡೆದಿದೆ ಎಂಬುದನ್ನು ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಶಾಲಾ ಪ್ರದೇಶದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಾರು ಮೈದಾನದೊಳಗೆ ಬರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಕಾರ್ಯಾಚರಣೆ ಕಾರಿನ ಜಾಡು ಹಿಡಿದು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕಾರಿನ ಗಾಜು ಪತ್ತೆ
ಇನ್ನೂ ಗೋಡೆ ಒಡೆದ ಶಾಲೆ ಕಟ್ಟಡವನ್ನು ಉಪನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದರು. ಈ ವೇಳೆ ಸ್ಥಳದಲ್ಲಿ ಕಾರಿನ ಹೆಡ್ಲೈಟ್ನ ಗಾಜಿನ ತುಣುಕುಗಳು ಹಾಗೂ ಕಾರು ಕಂಪನಿಯ ಲೋಗೋ ಬಿಡಿಭಾಗ ಬಿದ್ದಿದ್ದು ಕಂಡು ಬಂತು. ಇದು ಕಾರಿನಿಂದ ನಡೆದ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಇದೆಲ್ಲ ಬೆಳವಣಿಗೆ ನಡೆಯುವ ಹೊತ್ತಿಗಾಗಲೇ ಘಟನೆ ನಡೆದ ದಿನ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೇ, ಇದು ಶಾಲೆಯ ಜಾಗ ಕಬಳಿಸಲು ನಡೆಸಿದ ಘಟನೆಯಾಗಿದೆ ಎಂದು ಆರೋಪಿಸಿದ್ದರು.












Click it and Unblock the Notifications