ಧಾರವಾಡದಲ್ಲಿ ಕಟ್ಟಡ ಕುಸಿತ : 33 ಜನರ ರಕ್ಷಣೆ, 2 ಸಾವು
ಧಾರವಾಡ, ಮಾರ್ಚ್ 20 : ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದೆ. ಅವಶೇಷಗಳಡಿ ಸಿಲುಕಿದ್ದ 33 ಜನರನ್ನು ರಕ್ಷಣೆ ಮಾಡಲಾಗಿದೆ. ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಧಾರವಾಡದ ಹೊಸ ಬಸ್ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಕುಸಿದುಬಿದ್ದಿದೆ. ಅವಶೇಷಗಳಡಿ 70ಕ್ಕೂ ಅಧಿಕ ಜನರು ಸಿಲುಕಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಕಟ್ಟಡದ ಎರಡು ಮಹಡಿ ಪೂರ್ಣಗೊಂಡಿತ್ತು. ಅದರಲ್ಲಿ ಸುಮಾರು 60 ರಿಂದ 70 ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ಪಿಲ್ಲರ್ ಮತ್ತು ಗೋಡೆಗಳು ಸಂಪೂರ್ಣವಾಗಿ ಕುಸಿದಿದ್ದು, ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯಾಚರಣೆ ತಡ ರಾತ್ರಿಯ ತನಕವೂ ಮುಂದುವರೆಯಿತು.
ಅಗ್ನಿ ಶಾಮಕ ದಳ, ಬಿಎಸ್ಎಫ್ ಯೋಧರು, ಸ್ಥಳೀಯ ಪೊಲೀಸರು, ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 6 ಜೆಸಿಬಿ, ಮೂರು ಕ್ರೇನ್ಗಳ ಸಹಾಯದಿಂದ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಎನ್ಡಿಆರ್ಎಫ್ ತಂಡವೂ ಪುಣೆಯಿಂದ ಧಾರವಾಡಕ್ಕೆ ರಕ್ಷಣಾ ಕಾರ್ಯಾಚರಣೆಗಾಗಿ ಆಗಮಿಸಿದೆ....

ರಾತ್ರಿ ಇಡೀ ಕಾರ್ಯಾಚರಣೆ
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, 'ಕಟ್ಟಡದ ಅವಶೇಷಗಳಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಕ್ಷಣೆ ಮಾಡಿದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ಆಗಮಿಸಿದೆ. ಅವಶೇಷಗಳಡಿ ಸಿಲುಕಿರುವವರಿಗೆ ಆಮ್ಲಜನಕ ಮತ್ತು ನೀರನ್ನು ಸರಬರಾಜು ಮಾಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಟ್ವೀಟ್
ಧಾರವಾಡ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ಲಕ್ನೋದಿಂದ 25 ಎನ್ಡಿಆರ್ಎಫ್ ಸಿಬ್ಬಂದಿ, ಬೆಂಗಳೂರಿನಿಂದ 5 ಜನರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಟ್ವೀಟ್ ಮಾಡಿದ್ದಾರೆ.

10 ಆಂಬ್ಯುಲೆನ್ಸ್, ವೈದ್ಯರ ತಂಡ
ಗಾಯಾಳುಗಳನ್ನು ರಕ್ಷಣೆ ಮಾಡಿದ ಬಳಿಕ ಚಿಕಿತ್ಸೆ ನೀಡಲು 25 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 10 ಆಂಬ್ಯುಲೆನ್ಸ್ಗಳನ್ನು ಘಟನಾ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ರಜೆ ಮೇಲೆ ತೆರಳಿದ್ದ ವೈದ್ಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

ಬಾಡಿಗೆಗೆ ನೀಡಲಾಗಿತ್ತು
5 ಮಹಡಿಯ ಕಟ್ಟಡದ ಎರಡು ಮಹಡಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಅವುಗಳನ್ನು ಬಾಡಿಗೆಗೆ ನೀಡಲಾಗಿತ್ತು. ಹೋಟೆಲ್, ಎಲೆಕ್ಟ್ರಿಕಲ್ ಶಾಪ್, ಕಿರಾಣಿ ಅಂಗಡಿ, ಕಂಪ್ಯೂಟರ್ ತರಬೇತಿ ಕೇಂದ್ರ ಸೇರಿದಂತೆ ಹಲವು ಮಳಿಗೆಗಳು ಇದ್ದವು.












Click it and Unblock the Notifications