ಧಾರವಾಡ: ಗುಡಗೇರಿ ಅರ್ಬನ್ ಕೋ ಆಪ್ ಸೊಸೈಟಿಗೆ 1,70,000 ರೂಪಾಯಿ ದಂಡ
ಠೇವಣಿಯಾಗಿ ಇಟ್ಟಿದ್ದ ಹಣವನ್ನು ವರ್ಷ ಕಳೆದರೂ ವಾಪಸ್ ನೀಡದ ಆರೋಪದ ಮೇಲೆ ಧಾರವಾಡದ ಗುಡಗೇರಿ ಅರ್ಬನ್ ಕೋ ಆಪ್ ಸೊಸೈಟಿಗೆ 1,70,000 ರೂಪಾಯಿ ದಂಡ ವಿಧಿಸಲಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಧಾರವಾಡ, ಫೆಬ್ರವರಿ 14: ಬಳ್ಳಾರಿ ಜಿಲ್ಲೆ ಸಂಡೂರು ವಾಸಿಯಾದ ರವಿ ಕುಮಾರ ಕಲಾಲ ಎನ್ನುವವರು 2015ನೇ ಇಸವಿಯಲ್ಲಿ ಕುಂದಗೋಳ ತಾಲೂಕಿನ ಗುಡಗೇರಿಯಲ್ಲಿ ಕೆಲಸ ಮಾಡುವಾಗ ತಮ್ಮ ಮಗ ರಾಮಚಂದ್ರರಾವ ಅವರ ಹೆಸರಿನಲ್ಲಿ 1,64,500 ರೂಪಾಯಿ ಹಣವನ್ನು ಗುಡಗೇರಿಯ ಅರ್ಬನ್ ಕೋ ಆಪ್ರೇಟಿವ್ ಸೊಸೈಟಿಯಲ್ಲಿ ಠೇವಣಿಯಾಗಿ ಇಟ್ಟಿದ್ದರು.
ಒಂದು ವರ್ಷದ ನಂತರ ಆ ಹಣದ ಮೇಲೆ ಶೇ8.6%ರಂತೆ ಬಡ್ಡಿ ಹಾಕಿಕೊಡಲು ಸೊಸೈಟಿಯವರು ಒಪ್ಪಿದ್ದರು. 2016ರಕ್ಕೆ ಠೇವಣಿ ಅವಧಿ ಮುಗಿದಿತ್ತು. ಆದರೂ ಬಡ್ಡಿ ಸಮೇತ ಠೇವಣಿ ಹಣವನ್ನು ಎದುರುದಾರ ಸೊಸೈಟಿಯವರು ದೂರುದಾರರಿಗೆ ನೀಡಿರಲಿಲ್ಲ. ಆದ್ದರಿಂದ ತನ್ನ ಮಗನ ಭವಿಷ್ಯಕ್ಕೆ ತೊಂದರೆಯಾಗಿದೆ ಮತ್ತು ಎದುರುದಾರರಿಂದ ತಮಗೆ ಅನ್ಯಾಯವಾಗಿ, ಸೇವಾ ನ್ಯೂನ್ಯತೆ ಆಗಿದೆ ಎಂದು ಈ ಅರ್ಬನ್ ಸೊಸೈಟಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಕೋವಿಡ್-19ರ ಕಾರಣದಿಂದ ಸೊಸೈಟಿಗೆ ಆರ್ಥಿಕ ನಷ್ಟ ಉಂಟಾಗಿ ಅದರ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ದೂರುದಾರರ ಹಣಕೊಡಲು ಆಗುತ್ತಿಲ್ಲ ಅಂತಾ ಹೇಳಿ ದೂರನ್ನು ವಜಾ ಮಾಡುವಂತೆ ಅರ್ಬನ್ ಕೋ ಆಪ್ರೇಟಿವ್ ಸೊಸೈಟಿಯವರು ಆಕ್ಷೇಪಣೆ ಎತ್ತಿದ್ದರು. ಅವರ ದೂರು ಮತ್ತು ಆಕ್ಷೇಪಣೆಯನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ದೂರುದಾರರ ಠೇವಣಿ ಅವಧಿ 2016ರಲ್ಲೇ ಮುಗಿದಿದ್ದರೂ ಈವರೆಗೆ ಅವರ ಠೇವಣಿ ಹಣ ಮತ್ತು ಅದರ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಿ ಕೊಡದೇ ಎದುರುದಾರ ಸೊಸೈಟಿಯವರು ದೂರುದಾರರಿಗೆ ತೊಂದರೆ ಮಾಡಿ ಗ್ರಾಹಕ ಹಿತ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರರ ಠೇವಣಿ ಹಣ 1,64,500 ರೂಪಾಯಿ ಹಣವನ್ನು ಮತ್ತು ಅದರ ಮೇಲೆ 01/11/2015 ರಿಂದ ಈ ದೂರು ದಾಖಲಾದ 02/08/2022ರವರೆಗೆ ಶೇ8.6 ರಂತೆ ಬಡ್ಡಿ ಲೆಕ್ಕ ಮಾಡಿಕೊಡುವಂತೆ ಮತ್ತು ದೂರು ದಾಖಲಾದಾಗಿನಿಂದ ಪೂರ್ತಿ ಹಣ ಸಂದಾಯ ಮಾಡುವವರೆಗೆ ಶೇ 8 ರಂತೆ ಬಡ್ಡಿ ಆಕರಣೆ ಮಾಡಿ ಪ್ರಕರಣದ ಖರ್ಚು ಅಂತಾ 5,000 ರೂಪಾಯಿಗಳನ್ನು ನೀಡುವಂತೆ ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.












Click it and Unblock the Notifications