ಸಲಿಂಗ ಪ್ರೀತಿ: ಪ್ರಾಣ ಸ್ನೇಹಿತೆ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಯುವತಿ
ದಾವಣಗೆರೆ, ಅಕ್ಟೋಬರ್ 21 : ಯುವತಿಯರಿಬ್ಬರ ನಡುವಿನ ಜಗಳ ತಾರಕಕ್ಕೇರಿ ಯುವತಿಯನ್ನು ಸ್ನೇಹಿತೆಯೇ ಬ್ಲೇಡ್ನಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ದಾವಣಗೆರೆ ನಗರದ ಎವಿಕೆ ಕಾಲೇಜು ಬಳಿ ನಡೆದಿದೆ.
ಸ್ನೇಹಿತೆ ಮೇಲೆ ಬ್ಲೇಡ್ನಿಂದ ಹಲ್ಲೆ ನಡೆಸಿದ ಯುವತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಲಾಸ್ಯ ಬಂಧಿತ ಯುವತಿ ಎಂದು ಗುರುತಿಸಲಾಗಿದೆ.
ನಿನ್ನೆ( ಅಕ್ಟೋಬರ್ 20) ಸಂಜೆ 5.30ಕ್ಕೆ ಎವಿಕೆ ಕಾಲೇಜಿನ ಬಳಿ ಚಿಕ್ಕಮಗಳೂರು ಮೂಲದ ಯುವತಿ ಲಾಸ್ಯ ಹಾಗೂ ಆಕೆಯ ಸ್ನೇಹಿತೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿ ಲಾಸ್ಯ ತನ್ನ ಸ್ನೇಹಿತೆಯ ಜೊತೆಗೆ ನೀನು ಬೇರೊಬ್ಬರ ಜೊತೆ ಯಾಕೆ ಮಾತನಾಡುತ್ತೀಯಾ ಎಂದು ತಗಾದೆ ತೆಗೆದಿದ್ದಾಳೆ.

ಇಬ್ಬರ ನಡುವಿನ ಜಗಳ ತಾರಕ್ಕೇರಿದಿದ್ದು, ಕೊನೆಗೆ ಆರೋಪಿ ತನ್ನ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಬ್ಲೇಡ್ನಿಂದ ಕುತ್ತಿಗೆ ಗಾಯಗೊಳಿಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ಆರೋಪಿಯ ಸ್ನೇಹಿತೆ ಗಾಯಗೊಂಡಿದ್ದು, ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಕ್ತ ಚಿಕಿತ್ಸೆ ಬಳಿಕ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಆರೋಪಿ ಹಾಗೂ ಆಕೆಯ ಸ್ನೇಹಿತೆ ಕಾಲೇಜು ಆರಂಭದ ದಿನಗಳಲ್ಲಿ ಒಳ್ಳೆಯ ಗೆಳೆಯರಾಗಿದ್ದರು. ದಿನ ಕಳೆದಂತೆ ಇಬ್ಬರ ಮಧ್ಯೆದ ಸಂಬಂಧ ಗಾಡವಾಗಿದ್ದು, ಇಬ್ಬರ ಮಧ್ಯೆ ಸಲಿಂಗ ಪ್ರೀತಿ ಇರುವಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ.
ನಿನ್ನೆ( ಅಕ್ಟೋಬರ್ 20) ಘಟನೆಯ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ." ಲಾಸ್ಯ ಮತ್ತು ಆಕೆಯ ಸ್ನೇಹಿತೆ ನಡುವೆ ಪ್ರೀತಿ ಇತ್ತು. ಇವರಿಬ್ಬರು ಎವಿಕೆ ಕಾಲೇಜಿನಲ್ಲಿ ಬಿ. ಎ. ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರ ನಡುವೆ ಗಾಢವಾದ ಸ್ನೇಹ, ಪ್ರೀತಿ ಇತ್ತು. ಸಲಿಂಗ ಪ್ರೀತಿ ಇತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹಲ್ಲೆ ನಡೆಸಿದ ಲಾಸ್ಯಳನ್ನು ಬಂಧಿಸಲಾಗಿದೆ," ಎಂದರು.
ಇನ್ನು" ತನ್ನ ಸ್ನೇಹಿತೆ ಬೇರೆಯವರ ಜೊತೆ ಮಾತನಾಡುತ್ತಿದ್ದಾಳೆ ಎಂಬ ವಿಚಾರದಿಂದ ಲಾಸ್ಯ ಈ ಕೃತ್ಯ ಎಸಗಿರಬಹುದು. ಲಾಸ್ಯ ಒಂದು ವರ್ಷ ಅನುತ್ತೀರ್ಣಳಾಗಿದ್ದಳು. ಹಲ್ಲೆಗೊಳಗಾಗ ಯುವತಿ ಕತ್ತಿನ ಮೇಲೆ ಗಾಯಗಳಾಗಿವೆ. ಆಕೆ ಪರೀಕ್ಷೆ ಇದೆ. ವೈದ್ಯರ ಸಲಹೆ ಮೇರೆಗೆ ಪರೀಕ್ಷೆಗೆ ಕೂರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸಲಾಗುವುದು. ಈ ಪ್ರಕರಣದ ತನಿಖೆ ಮುಂದುವರಿದಿದೆ," ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾಹಿತಿ ನೀಡಿದರು.












Click it and Unblock the Notifications