ಹಿಜಾಬ್ ವಿಚಾರದಲ್ಲಿ ರಾಜಕೀಯ ಮಾಡುವವರನ್ನು ಪಾಕ್ಗೆ ಕಳುಹಿಸಿ
ದಾವಣಗೆರೆ, ಫೆಬ್ರವರಿ 06; "ರಾಜ್ಯದಲ್ಲಿ ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಸಂಘರ್ಷಕ್ಕೆ ಎಡೆಮಾಡಿಕೊಡಲು ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಹಿಜಾಬ್ ವಿಚಾರದಲ್ಲಿ ರಾಜಕಾರಣ ಮಾಡಿದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಪಾಕಿಸ್ತಾನಕ್ಕೆ ಕಳುಹಿಸಿಕೊಡಬೇಕು" ಎಂದು ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಪಾಕಿಸ್ತಾನದಲ್ಲಿ ಇದೇ ರೀತಿ ವರ್ತಿಸಿದರೆ ಶೂಟ್ ಮಾಡಿ ಬಿಸಾಕುತ್ತಾರೆ. ಇಲ್ಲಿನ ಅಲ್ಪಸಂಖ್ಯಾತರನ್ನು ಪಾಕಿಸ್ತಾನದವರು ನಂಬಲ್ಲ. ನಾವೇನಾದರೂ ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದೇವಾ?. ವಿದ್ಯಾರ್ಥಿಗಳ ಮನಸ್ಸಲ್ಲಿ ಸಂಘರ್ಷ ಹುಟ್ಟುಹಾಕಲು ಷಡ್ಯಂತ್ರ ರೂಪಿಸಲಾಗಿದೆ. ಇದರದಲ್ಲಿ ಉಗ್ರಗಾಮಿ ಹಾಗೂ ಭಯೋತ್ಪಾದಕ ಸಂಘಟನೆಗಳ ಕೈವಾಡ ಇದೆ" ಎಂದು ಆರೋಪಿಸಿದರು.
"ಹಿಜಾಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಜಮ್ಮು ಕಾಶ್ಮೀರದ ಮೆಹಬೂಬ್ ಮುಫ್ತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಕಾಂಗ್ರೆಸ್ನ ನಾಯಕರು ರಾಜ್ಯದಗಲ ವಿವಾದದ ಕಿಚ್ಚು ಹಚ್ಚುತ್ತಿದ್ದಾರೆ" ಎಂದು ರೇಣುಕಾಚಾರ್ಯ ಆರೋಪಿಸಿದರು.

"ನಾವು ಮುಸ್ಲಿಂ, ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಇದರಲ್ಲಿ ರಾಜಕಾರಣ ಮಾಡಿಲ್ಲ. ಹಿಜಾಬ್ ಬಗ್ಗೆ ಮಾತನಾಡಿದರೆ ಕುಂಕುಮ, ಹೂವಿನ ಬಗ್ಗೆ ಮಾತನಾಡುತ್ತೇವೆಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ನಿಮ್ಮ ತಂದೆ ಅಜೀಜ್ ಸೇಠ್ ಅವರಿದ್ದಾಗ ಕೋಮುಗಲಭೆ ನಡೆಯಿತು. ರಾಜ್ಯದ ಉದ್ದಗಲಕ್ಕೂ ಗಲಾಟೆ ಆಗಿತ್ತು. ಇದನ್ನು ಮರೆತಿದ್ದೀರಾ?" ಎಂದು ಪ್ರಶ್ನಿಸಿದರು.
"ಹಿಂದೂ ಅಭಿಮಾನಿ ವಿದ್ಯಾರ್ಥಿಗಳು ಕೇಸರಿ ಶಾಲು, ರುದ್ರಾಕ್ಷಿ ಧರಿಸಿ ಬಂದರೆ ತಪ್ಪೇನಿದೆ?. ಯು. ಟಿ. ಖಾದರ್, ಜಮೀರ್ ಅಹಮದ್ ಅಮಾಯಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ವಿದ್ಯಾರ್ಹತೆಯಿಂದ ವಂಚನೆ ಮಾಡುವ ಹುನ್ನಾರ ರೂಪಿಸಿದ್ದಾರೆ. ಸಂಘರ್ಷ ಆದರೆ ಕಾಂಗ್ರೆಸ್ಸಿಗರೇ ಕಾರಣ. ಕರ್ನಾಟಕ ತಾಲಿಬಾನ್ ಆಗಲು ಬಿಡಲ್ಲ. ವೋಟಿಗೋಸ್ಕರ ಅಲ್ಪಸಂಖ್ಯಾತ ಹೆಣ್ಣಯಮಕ್ಕಳ ಎತ್ತಿಕಟ್ಟಿದ್ದೀರಾ?" ಎಂದರು.
"ರಾಜ್ಯ ಸರ್ಕಾರ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕುರಿತಂತೆ ಆದೇಶ ಹೊರಡಿಸಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಶ್ರೀಮಂತರ ಮಕ್ಕಳು ಒಳ್ಳೆಯ ಬಟ್ಟೆ ಧರಿಸುತ್ತಾರೆ. ಬಡವರ ಮಕ್ಕಳು ಕಡಿಮೆ ದರದ ಬಟ್ಟೆ ಧರಿಸುತ್ತಾರೆ. ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಸಂಘರ್ಷಕ್ಕೆ ಅವಕಾಶ ಕೊಡದೇ, ಉತ್ತಮ ಶಿಕ್ಷಣ ಪಡೆಯಿರಿ" ಎಂದು ಕಿವಿಮಾತು ಹೇಳಿದರು.
ಸೋಮವಾರ ದೆಹಲಿಗೆ ಹೋಗುವೆ; "ಸಚಿವ ಸಂಪುಟದಲ್ಲಿ ಬೆಳಗಾವಿ, ಬೆಂಗಳೂರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. 13 ಜಿಲ್ಲೆಗಳಿಗೆ ಭೌಗೊಳಿಕವಾಗಿ ಮಾನ್ಯತೆ ಸಿಕ್ಕಿಲ್ಲ. ನಮಗೂ ಅವಕಾಶ ನೀಡಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ, ಕೇಂದ್ರ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಸೋಮವಾರ ದೆಹಲಿಗೆ ನಾನು ಹೋಗುತ್ತೇನೆ" ಎಂದ ರೇಣುಕಾಚಾರ್ಯ ತಿಳಿಸಿದರು.
"ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ವಿಸ್ತರಣೆ ಆಗುತ್ತಾ ಅಥವಾ ಪುನಾರಚನೆ ಆಗುತ್ತದೆಯೋ ಗೊತ್ತಿಲ್ಲ. ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಬೇಕು. 2023ರ ವಿಧಾನಸಭಾ ಚುನಾವಣೆಗೆ ನಾವೆಲ್ಲರೂ ಸಿದ್ಧರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಯಾರನ್ನು ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂದು ಹೇಳಲು ನನಗೆ ಅಧಿಕಾರ ಇಲ್ಲ. ಇದು ಸಿಎಂ ಅವರಿಗೆ ಬಿಟ್ಟ ವಿಚಾರ. ಪರಮಾಧಿಕಾರ ಅವರಿಗೆ ಇದ್ದು, ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ರೇಣುಕಾಚಾರ್ಯ ಹೇಳಿದರು.
"ಶಿಕ್ಷಣ, ಕೈಗಾರಿಕೆ, ವಾಣಿಜ್ಯ ಕ್ಷೇತ್ರಕ್ಕೆ ದಾವಣಗೆರೆ ಕೊಡುಗೆ ಇದೆ. ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ. ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಕೇಳಿದ್ದೆವು. ಈಗಲೂ ಆಗ್ರಹಿಸಿದ್ದೇವೆ. ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ? ಎಂಬುದನ್ನು ಕಾದು ನೋಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications