ಕಾಂಗ್ರೆಸ್ಗೆಯಾರೇ ಬಂದ್ರೂ ಸ್ವಾಗತ, ರೇಣುಕಾಚಾರ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳ್ತಿದ್ದಾರೆ: SSM ಹೀಗೆ ಹೇಳಿದ್ದೇಕೆ?
ದಾವಣಗೆರೆ, ಸೆಪ್ಟೆಂಬರ್, 18: ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಯಾರೇ ಕಾಂಗ್ರೆಸ್ಗೆ ಬಂದರೆ ಸ್ವಾಗತ. ನಾವು ಕರೆದಿದ್ದೇವೆ. ಇನ್ನೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಸ್ವಾಮಿಗೆ ಬರಲು ಹೇಳಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿರುವ ಅವರು, ಸ್ವಾಮಿ ನಮ್ಮ ಮನೆಗೆ ಬಂದಿದ್ದಾರಲಪ್ಪ. ಇನ್ನೂ ಕಾಂಗ್ರೆಸ್ ಸೇರಿಲ್ಲ. ಅವರಂತೂ ಕಾಂಗ್ರೆಸ್ನ ಎಲ್ಲರ ಸಂಪರ್ಕದಲ್ಲಿದ್ದಾರೆ. ನಮ್ಮ ಜೊತೆಗೆ ವಿಶ್ವಾಸದಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಗೆ ಅನುಕೂಲವಾಗಬೇಕು. ಹಾಗಾಗಿ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಹೇಳಿದರು.

ರೇಣುಕಾಚಾರ್ಯ ಅವರಿಗೆ ನಾವು ಕಾಂಗ್ರೆಸ್ ಸೇರಿ ಎಂದು ಒತ್ತಡ ಹಾಕಿಲ್ಲ. ರೇಣುಕಾಚಾರ್ಯ ಅವರದ್ದು ತೆರೆದ ಹೃದಯ. ಎಲ್ಲವನ್ನೂ ಹೇಳುತ್ತಿದ್ದಾರೆ. ಬಿಜೆಪಿಯವರಿಂದ ಬೇಸತ್ತು ಹೋಗಿದ್ದಾರೆ. ಒಳ್ಳೆಯದಾಗಲಿ ಎಂದು ನಾವು ನೋಡುತ್ತಿದ್ದೇವೆ. ಲೋಕಸಭೆ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆ. ಸ್ವಾಮಿ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಇನ್ನೂ ಹೇಳುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಸಂಬಂಧ ಏನೂ ಮಾತನಾಡಿಲ್ಲ. ಮಾತುಕತೆ ಕದ್ದು ಮುಚ್ಚಿ ಇಲ್ಲ. ಓಪನ್ ಆಗಿ ಹೇಳುತ್ತೇವೆ ಎಂದು ತಿಳಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ರೋಸೆದ್ದು ಹೋಗಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ, ಹನಗವಾಡಿ ವಿರೂಪಾಕ್ಷಪ್ಪ, ಹರಪನಹಳ್ಳಿಯ ಮಹಾಬಲೇಶ್ವರ ಗೌಡ್ರು ಕಾಂಗ್ರೆಸ್ನಲ್ಲಿಯೇ ಇದ್ದರು. ಮೂವರು ಬಿಜೆಪಿಗೆ ಹೋಗಿದ್ದರು. ಎಸ್.ವಿ.ರಾಚಮಂದ್ರಪ್ಪರು ಕಾಂಗ್ರೆಸ್ನಲ್ಲೇ ಇದ್ದವರು. ಹರಪನಹಳ್ಳಿಯ ಮಹಾಬಲೇಶ್ವರ ಗೌಡ್ರು ಈಗ ಮತ್ತೆ ಕಾಂಗ್ರೆಸ್ ಬಂದಿದ್ದಾರೆ ಎಂದು ಕೇಳಿದ್ದೇನೆ. ವಿರೂಪಾಕ್ಷಪ್ಪಗೆ ಮೂಕರ್ಜಿ ಸೇರಿದಂತೆ ಕೊಡಬಾರದ ಕಾಟ ಕೊಟ್ಟಿದ್ದಾರೆ. ತೊಂದರೆ ಮಾಡಿ ಅವರನ್ನು ಸಂಕಷ್ಟಕ್ಕೀಡುಮಾಡಲಾಗಿದೆ. ಸಿಕ್ಕಿ ಹಾಕಿಸಲು ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡಿದ್ದಾರಲ್ವಾ ಎಂದು ಪ್ರಶ್ನಿಸಿದರು.
ರೇಣುಕಾ ಸ್ವಾಮಿ ನಮ್ಮ ಮನೆಗೆ ಬಂದಿರುವ ವಿಚಾರ ಕುರಿತಂತೆ ಜಾಸ್ತಿ ಪ್ರಸಾರ ಮಾಡಬೇಡಿ. ಬೇರೆ ಅರ್ಥ ಹೋಗುತ್ತದೆ. ಮಾಧ್ಯಮವದರೇ ಎಲ್ಲವನ್ನೂ ಹೇಳಬೇಕು. ಫುಲ್ ಫೋರ್ಸ್ ಇದೆ ನಿಮ್ದು. ಇದ್ದಕ್ಕಿದ್ದಂತೆ ಹಲವರು ಬಂದರು. ನಾವು ಏನಾಯ್ತೋ ಏನೋ ಎಂದುಕೊಂಡೆವು. ಹೊರಗಡೆ ನೋಡಿದರೆ ರೇಣುಕಾಚಾರ್ಯ ಜೊತೆ ಮಾಧ್ಯಮದವರು ಹಾಗೂ ರೈತರು ಬಂದರು. ಸ್ವತಃ ನಾನೇ ಏನಾಯ್ತೋ ಏನೋ ಎಂದುಕೊಂಡೆ. ಆಮೇಲೆ ನೋಡ್ತೇನೆ ರೇಣುಕಾಚಾರ್ಯರ ಜೊತೆ ನೀವೆಲ್ಲರೂ ಬಂದಿದ್ದೀರಿ ಎಂದು ನಕ್ಕರು.
ರೇಣುಕಾಚಾರ್ಯ ಪಕ್ಕದಲ್ಲಿ ಕೂರಿಸಿಕೊಂಡು ನಗು ನಗುತ್ತಲೇ ಮಾತನಾಡಿದ ಮಲ್ಲಿಕಾರ್ಜುನ್ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಬೇಕಲ್ವಾ. ಒಳಗೊಳಗೆ ಏನು ಮಾತಾನಾಡಿಕೊಂಡಿದ್ದಾರೋ ಏನೋ ಗೊತ್ತಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷವು ರೇಣುಕಾಚಾರ್ಯ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುತ್ತಾ ಎಂಬ ಪ್ರಶ್ನೆಗೆ ರೇಣುಕಾಚಾರ್ಯ ಅವರೇ ನಿಮಗೆ ಹೇಳಿಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಜಗದೀಶ್ ಶೆಟ್ಟರ್ ಫೋನ್ ಮಾಡಿದ್ದು ನಿಜ
ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ನನಗೆ ಫೋನ್ ಮಾಡಿದ್ದು ನಿಜ. ಯಾಕೆ ಫೋನ್ ಮಾಡಬಾರದಾ? ವಿಶ್ವಾಸದಲ್ಲಿ ಮಾತನಾಡಿದರು. ನಾನು ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಬಾರದಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ವಾ. ನಾನು ರೈತರ ಪರ ಬಂದಿದ್ದೇನೆ. ನಮ್ಮದು ರಾಜಕೀಯ ಮೀರಿದ ವಿಶ್ವಾಸ, ಪ್ರೀತಿ ಎಂದು ರೇಣುಕಾಚಾರ್ಯ ಹೇಳಿದ್ದರು.
ಇನ್ನು ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಆಗಮಿಸಿದ್ದು ಸೌಜನ್ಯಕ್ಕೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಯಾವುದೇ ರಾಜಕಾರಣ ಚರ್ಚೆ ಮಾಡಿಲ್ಲ. ಹೊನ್ನಾಳಿ - ನ್ಯಾಮತಿ ತಾಲೂಕಿನ ಯೋಜನೆಗಳ ಅನುದಾನ ಬಂದಿಲ್ಲ. ಹಾಗಾಗಿ, ಸಚಿವರನ್ನು ಭೇಟಿ ಮಾಡಿದ್ದೇನೆ ಎಂದು ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಮಾಷೆ ಮಾಡಿದ್ದಾರೆ. ಕಾಂಗ್ರೆಸ್ಗೆ ಬನ್ನಿ ಎಂದು ಅವರೂ ಅಧಿಕೃತ ಆಹ್ವಾನ ಕೊಟ್ಟಿಲ್ಲ. ನಾನು ಬರುತ್ತೇನೆ ಎಂದೂ ಎಲ್ಲಿಯೂ ಹೇಳಿಲ್ಲ. ಮಾಧ್ಯಮದವರು ಮಾತ್ರ ಈ ರೀತಿಯ ಸುದ್ದಿ ಮಾಡುತ್ತಿದ್ದಾರೆ. ನಾನೆಲ್ಲೂ ಹೋಗಲ್ಲ. ಕೋವಿಡ್ ವೇಳೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಒಳ್ಳೆ ಕೆಲಸ ಯಾರೇ ಮಾಡಿದರೂ ಪ್ರಶಂಸಿಸುತ್ತಾರೆ ಎಂದು ಹೇಳಿದರು.
ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಜೊತೆ ಚರ್ಚೆ ಮಾಡಿದ್ದೇನೆ. ಈ ವಿಚಾರವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಜೊತೆ ಸಮಾಲೋಚನೆ ನಡೆಸಿದ್ದೇನೆ. ವೈಯಕ್ತಿಕ ಭೇಟಿ ಅಲ್ಲ. ಕ್ಷೇತ್ರದ ಜನರ ಕೆಲಸಕ್ಕಾಗಿ ಬಂದಿರುವೆ. ರಾಜಕೀಯ ಮೀರಿದ ಪ್ರೀತಿ, ವಿಶ್ವಾಸ ನಮ್ಮದು. ರಾಜಕೀಯ ಚರ್ಚೆಯಾಗಿಲ್ಲ ಎಂದರು.
ಇನ್ನು ದಾವಣಗೆರೆ ಲೋಕಸಭೆ ಚುನಾವಣೆಗೆ ನಾನು ಸಹ ಬಿಜೆಪಿ ಪ್ರಬಲ ಆಕಾಂಕ್ಷಿ. ಹಲವು ಬಾರಿ ಹೇಳಿದ್ದೇನೆ. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ನನಗೆ ಹೇಗೆ ಟಿಕೆಟ್ ಕೊಡ್ತಾರೆ. ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದರು.












Click it and Unblock the Notifications