ದಾವಣಗೆರೆ; ದುಡಾಗೆ ಜಮೀನು ಮಾರುವುದಿಲ್ಲ ಎಂದು ರೈತರ ಪಟ್ಟು
ದಾವಣಗೆರೆ, ಸೆಪ್ಟೆಂಬರ್, 06: ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಕ್ಕೆ ಅರ್ಜಿ ಕರೆದಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಮುಗಿ ಬಿದ್ದು, ಅರ್ಜಿ ಹಾಕಿದ್ದರು. ಅರ್ಜಿ ಹಾಕಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಕೂಡ ದೂಡಾ ಜಮೀನು ಖರೀದಿಸಲು ಮುಂದಾಗಿಲ್ಲ. ದೂಡಾ ಮಾಡಿದ ಯಡವಟ್ಟಿನಿಂದ ಹಳೇ ಕುಂದುವಾಡ ರೈತರು ಈಗ ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಭೂಮಿ ಕೊಡುವುದಿಲ್ಲ ಎಂದು ಆಕ್ಷೇಪಣಾ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ದಾವಣಗೆರೆಯಲ್ಲಿ ನಿವೇಶನ, ಮನೆಗಳ ದರ ದುಬಾರಿ ಆಗಿದೆ. ಜನಸಾಮಾನ್ಯರಿಗೆ ನಿವೇಶನ ಕೈಗೆಟುಕದಂತಾಗಿದೆ. ನಿವೇಶನಗಳು ಮೂವತ್ತು, ನಲವತ್ತು, ಐವತ್ತು ಹೀಗೆ ಕೊಟ್ಯಂತರ ರೂಪಾಯಿ ಬೆಳೆ ಬಾಳುತ್ತವೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದವರಿಗೆ ನಿವೇಶನ ಎಂಬುದು ಗಗನ ಕುಸುಮವಾಗಿದೆ. ದೂಡಾ ವತಿಯಿಂದ ಹಳೇ ಕುಂದುವಾಡ ಬಳಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಪ್ರತಿ ಎಕರೆಗೆ 1 ಕೋಟಿ 28 ಲಕ್ಷ ರೂಪಾಯಿ ನಿಗದಿಪಡಿಸಿತ್ತು. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ರೈತರು ಸಮ್ಮತಿ ಸೂಚಿಸಿದ್ದರು. ಈಗ ಮತ್ತೆ ನೆನೆಗುದಿಗೆ ಬೀಳುವ ಅಪಾಯ ಎದುರಾಗಿದೆ.
ಹೊಸ ಬಡಾವಣೆ ನಿರ್ಮಾಣಕ್ಕೆ ಕಳೆದ 2-3 ವರ್ಷಗಳಿಂದ ಜಮೀನು ಖರೀದಿಸುತ್ತೇವೆ ಎನ್ನುತ್ತಲೇ ಬರುತ್ತಿದೆ. ದೂಡಾ ನಿರ್ಲಕ್ಷ್ಯಕ್ಕೆ ಹಳೇ ಕುಂದುವಾಡ ರೈತರು ಬೇಸತ್ತು ಹೋಗಿದ್ದು, ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡುವುದಿಲ್ಲ ಎನ್ನುವ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಜಮೀನು ಮಾರಾಟ ಮಾಡುವುದಿಲ್ಲ ಎಂದು ನಲವತ್ತಕ್ಕೂ ಹೆಚ್ಚು ರೈತರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ರೈತರು ದೂಡಾ ಆಯುಕ್ತ ಕುಮಾರಸ್ವಾಮಿ ಹಾಗೂ ಎಸಿ, ವಿಶೇಷ ಭೂಸ್ವಾಧಿನಾಧಿಕಾರಿ ರಮಾದುರ್ಗ ಅವರಿಗೆ ಆಕ್ಷೇಪಣೆಯ ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

ಜಮೀನು ಖರೀದಿಸ್ತೇವೆಂದು ಸುಳ್ಳು ಆಶ್ವಾಸನೆ
ಪ್ರತಿಯೊಬ್ಬ ರೈತರು ಒದೊಂದು ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿ ಯಾವುದೇ ಕಾರಣಕ್ಕೂ ಜಮೀನು ನೀಡುವುದಿಲ್ಲ ಎಂದು ಅಂತಿಮ ನಿರ್ಧಾರವನ್ನು ತಿಳಿಸಿದ್ದಾರೆ. ದೂಡಾ 2018-19 ರಿಂದಲೂ ಜಮೀನು ಖರೀದಿಸುತ್ತೇವೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಲೇ ಬರುತ್ತಿದೆ. ಇತ್ತ ಇಷ್ಟವಿಲ್ಲದಿದ್ದರೂ ಭೂ ಸ್ವಾಧೀನ ಮಾಡುತ್ತಾರೆ ಎಂಬ ಭಯದಲ್ಲಿ ರೈತರು ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಆದರೆ ಇದರಿಂದ ದೂಡಾ ವೇಗವಾಗಿ ಬಡಾವಣೆ ನಿರ್ಮಾಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈಗ ಕಡಿಮೆ ಬೆಲೆಗೆ ಮಾರಾಟ ಮಾಡಿ ಬೇರೆ ಕಡೆ ದುಬಾರಿ ಬೆಲೆಗೆ ಜಮೀನು ಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕೊನೆಗೂ ಉಲ್ಟಾ ಹೊಡೆದ ದೂಡಾ
ಮೊದಲು ಜಮೀನು ನೀಡುವ ರೈತರಿಗೆ ನಿವೇಶನ ನೀಡುತ್ತೇವೆ ಎಂದು ಹೇಳಲಾಗಿತ್ತು. ನಮಗೆ ಜಮೀನು ನೀಡಲು ಒಪ್ಪಿಗೆ ಇಲ್ಲ ಎಂದು ದೂಡಾ ಆಯುಕ್ತ ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ. 2022ರ ಮೇ 31ರೊಳಗೆ ರೈತರೆಲ್ಲ ಸೇರಿ ಗಡುವು ಪತ್ರ ನೀಡಿದ್ದೆವು. ಈಗಾಗಲೇ ಆ ಗಡುವು ಮೀರಿದೆ. ಎರಡೂವರೆ ವರ್ಷಗಳಿಂದ ನಮಗೆ ಒಪ್ಪಿಗೆ ಇಲ್ಲದಿದ್ದರೂ ಖರೀದಿ ಮಾಡುತ್ತೇವೆ ಎಂದು ಹೇಳಿದ್ದರು. ಜೊತೆಗೆ ಒಂದು ವರ್ಷದಿಂದಲೂ ಪತ್ರಿಕಾ ಪ್ರಕಟಣೆ ಹೊರಡಿಸುತ್ತಲೇ ಇದ್ದಾರೆ ಎಂದು ತಿಳಿಸಿದ್ದಾರೆ.

"ಮೀನು ಖರೀದಿಯ ಮಾತುಕತೆ ನಡೆದಿಲ್ಲ"
2022ರ ಸೆಪ್ಟೆಂಬರ್ 2ರಂದು ದೂಡಾ ಹಾಗೂ ಎಸಿ ಕಚೇರಿ, ಭೂ ಸ್ವಾಧೀನಧಿಕಾರಿಗಳ ವಿಳಾಸದಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು. ಲೇ ಔಟ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರೈತರು ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದೂಡಾ ಹಾಗೂ ನಮ್ಮ ನಡುವೆ ಯಾವುದೇ ಜಮೀನು ಖರೀದಿಯ ವಹಿವಾಟು ನಡೆದಿಲ್ಲ, ನಾವು ಯಾವುದೇ ಒಪ್ಪಿಗೆ ನೀಡಿಲ್ಲ. ಆದರೂ ಸಹ ಪದೇ ಪದೇ ನಮ್ಮ ಭೂಮಿ ಸ್ವಾಧೀನ ಮಾಡುವುದಾಗಿ ನಮಗೆ ತೊಂದರೆ ಕೊಡುತ್ತಿದ್ದೀರಿ, ನಾವು ಯಾವುದೇ ಕಾರಣಕ್ಕೂ ದೂಡಾಕ್ಕೆ ಜಮೀನು ಮಾರಾಟ ಮಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

"ಜಮೀನು ಮಾರಾಟ ಮಾಡಲ್ಲ"
ದೂಡಾ ಲೇ ಔಟ್ ಪ್ರಕ್ರಿಯೆಯಿಂದ ದಯಮಾಡಿ ನಮ್ಮನ್ನು ಬಿಡುಗಡೆಗೊಳಿಸಿ. ಯಾರೋ ಕೆಲವೇ ಕೆಲವು ರೈತರು ಮಾತ್ರ ನಿಮಗೆ ಜಮೀನು ಕೊಂಡುಕೊಳ್ಳಿ ಎಂದು ಒತ್ತಡ ಹಾಕುತ್ತಿದ್ದಾರೆ. ಅವರ ಜೊತೆ ನಮ್ಮ ಜಮೀನು ಸ್ವಾಧೀನಕ್ಕೆ ಮುಂದಾದರೆ ನಿಮ್ಮ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications