ಉಕ್ಕಡಗಾತ್ರಿ ದೇವಾಲಯಕ್ಕೆ ಈಗ ಜಲದಿಗ್ಬಂಧನದ ಭೀತಿ
ದಾವಣಗೆರೆ, ಆಗಸ್ಟ್ 7: ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರೆ ಮೈತುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ದಾವಣಗೆರೆಯ ಹರಿಹರ, ಹೊನ್ನಾಳಿ ಪಟ್ಟಣದ ಪಕ್ಕದಲ್ಲಿ ತುಂಗಭದ್ರ ನದಿ ಉಕ್ಕಿ ಹರಿಯುತ್ತಿದ್ದು, ನದಿ ತಟದಲ್ಲಿರುವ ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ.
ಕಾರವಾರದಲ್ಲೂ ಬಿರುಸಾಗಿದೆ ಮಳೆ; ನೆರೆಗೆ ನೂರಾರು ಮನೆಗಳು ಜಲಾವೃತ, ಇಬ್ಬರ ಸಾವು
ಹರಿಹರದ ಶ್ರೀ ಕ್ಷೇತ್ರ ಉಕ್ಕಡಗಾತ್ರಿ ದೇವಾಲಯದ ಮುಂಭಾಗಕ್ಕೆ ನದಿ ನೀರು ಹರಿದು ಬಂದಿದ್ದು, ಸ್ನಾನದ ಕಟ್ಟೆ ಸಂಪೂರ್ಣ ಮುಳುಗಡೆಯಾಗಿದೆ. ಕಳೆದ ಬಾರಿ ನದಿ ನೀರಿನ ಪ್ರಮಾಣ ಹೆಚ್ಚಾಗಿ ದೇವಾಲಯದ ಒಳಗೆ ಹರಿದು ಬಂದಿತ್ತು. ಈ ಬಾರಿಯೂ ಜಲದಿಗ್ಬಂಧನವಾಗುವ ಎಲ್ಲಾ ಸಾಧ್ಯತೆ ಇದೆ.
ಇತ್ತ ಹೊನ್ನಾಳಿ ಪಟ್ಟಣದ ಬಾಲರಾಜ್ಘಾಟ್ ನ ಕೆಲ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲು ಜಿಲ್ಲಾಡಳಿತ ಸೂಚಿಸಿದೆ. ನದಿ ಪಾತ್ರದಲ್ಲಿದ್ದ 6 ಕುಟುಂಬಗಳನ್ನು ಪಟ್ಟಣದ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಎಚ್ಚರಿಕೆ ಕೊಟ್ಟಿದೆ.