ಮಾವಿನ ಗೊರಟೆಯಲ್ಲಿಟ್ಟಿದ್ದ ಸಿಡಿಮದ್ದು ಸ್ಪೋಟ, ಎರಡು ಹಸುಗಳು ಸಾವು
ದಾವಣಗೆರೆ, ಜೂನ್ 17: ಇದು ನಿಜಕ್ಕೂ ಕರುಣಾಜನಕ ಕಥೆ. ಕೇಳಿದರೆ ಕಣ್ಣಂಚಲ್ಲಿ ನೀರು ಬರುವುದು ಖಚಿತ. ಕಲ್ಲು ಹೃದಯವಾದರೂ ಕರಗುತ್ತೆ, ಮರುಕ ಪಡುತ್ತೆ. ಆ ಮೂಕಜೀವಿಗಳು ಅನುಭವಿಸಿದ ನೋವು, ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಪ್ರೀತಿಯಿಂದ ಸಾಕಿದ್ದ ಎರಡು ಹಸುಗಳು ಆಹಾರ ಎದುರುಗಡೆ ಇದ್ದರೂ ಸೇವಿಸಲು ಆಗದೇ ದುರಂತವಾಗಿ ಉಸಿರುಬಿಟ್ಟ ಹೃದಯ ವಿದ್ರಾವಕ ಸ್ಟೋರಿ ಇದು.
ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡ ಸಿನಿಮಾ ಬಿಡುಗಡೆಯಾದ ಬಳಿಕ ಎಲ್ಲೆಡೆ ಶ್ವಾನದ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ. ಮನೆಯಲ್ಲಿ ಸಾಕು ನಾಯಿಗಳ ಜೊತೆ ಸಿನಿಮಾ ನೋಡಬೇಕೆಂಬ ಹಂಬಲ ಶ್ವಾನಪ್ರಿಯರು ಹೊಂದಿದ್ದಾರೆ. ಆಸೆಯನ್ನೂ ಹೊರಹಾಕಿದ್ದಾರೆ. ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿ ನಡುವಿನ ಬಾಂಧವ್ಯ, ಪ್ರೀತಿ, ನಂಟು ಚಿತ್ರದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಆದರೆ ಈ ಘಟನೆಯಲ್ಲಿ ಯಾರೋ ಮಾಡಿದ ತಪ್ಪಿಗೆ ಎರಡು ಮೂಕಜೀವಿಗಳು ರೋಧಿಸಿ, ರೋದಿಸಿ ಅಸುನೀಗಿವೆ. ಈ ಘಟನೆ ನಡೆದಿರುವುದು ಹರಪನಹಳ್ಳಿ ತಾಲೂಕಿನ ಕೊಂಗನಹೊಸೂರು ಅರಣ್ಯ ಪ್ರದೇಶದಲ್ಲಿ.
ಏನಿದು ಘಟನೆ?
ಮೇಯಲು ಹೋಗಿದ್ದ ಎರಡು ಹಸುಗಳು ಸಿಡಿಮದ್ದು ಅಡಗಿಸಿದ್ದ ಮೇವನ್ನು ತಿಂದಿದ್ದರಿಂದ ಅದು ಬಾಯಲ್ಲಿದ್ದಾಗ ಸ್ಪೋಟಗೊಂಡು. ಎರಡು ದಿನ ಮೂಕ ರೋದನೆ ಅನುಭವಿಸಿದ್ದನ್ನು ಕಂಡ ಇವುಗಳ ಮಾಲೀಕರು ಮಮ್ಮಲ ಮರಗಿದ್ದಾರೆ. ಕಣ್ಣೀರು ಸುರಿಸಿದ್ದಾರೆ. ಅವು ಪಡುತ್ತಿದ್ದ ನೋವು ಕರುಳು ಕಿವುಚುವಂತೆ ಮಾಡಿದೆ. ದಷ್ಟಪುಷ್ಟವಾಗಿ ಬೆಳೆದು ಮೆನಗೆ ಆಧಾರವಾಗಿದ್ದ ಹಸುಗಳು ಮೇವು ತಿನ್ನಲು ಆಗದೇ , ಒಂದು ಕಡೆ ನೋವು, ಮತ್ತೊಂದು ಕಡೆ ಹೊಟ್ಟೆ ಹಸಿವಿನಿಂದಲೇ ನರಳಿ ಉಸಿರು ಬಿಟ್ಟಿವೆ.

ಕೊಂಗನಹೊಸೂರು ಅರಣ್ಯ ಪ್ರದೇಶದಲ್ಲಿ ಮೇಯಲು ಗ್ರಾಮದ ರೈತ ಬ್ಯಾಲಾಳ ವೀರಪ್ಪ, ಮಠದ ಶಂಕರಯ್ಯ ಅವರಿಗೆ ಸೇರಿದ ಎರಡು ಹಸುಗಳು ಹೋಗಿದ್ದವು. ಕಾಡು ಪ್ರಾಣಿಗಳ ಬೇಟೆಗೆ ಮಾವಿನ ತೊಗಟೆಯಲ್ಲಿ ದುರುಳರು ಸ್ಪೋಟಕ ವಸ್ತುಗಳನ್ನು ಇಟ್ಟಿದ್ದರು.
ಮೇಯಲು ಹೋದ ಸಂದರ್ಭದಲ್ಲಿ ಮಾವಿನ ಗೋಟನ್ನು ಹಸುಗಳು ಸೇವಿಸಿದ್ದವು. ಇದರಲ್ಲಿದ್ದ ಸ್ಫೋಟಕ ಸಿಡಿದು ಹಸುಗಳ ಬಾಯಿ ಛಿದ್ರಕೊಂಡಿದೆ. ನಂತರ ರಕ್ತಸ್ರಾವವಾಗಿ, ನೀರು, ಹುಲ್ಲು ತಿನ್ನಲಾಗದ ಕಾರಣ ಉಸಿರು ಚೆಲ್ಲಿವೆ. ಈ ಘಟನೆ ನಂತರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಯಾರು ಓಡಾಡದಂತೆ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಜನರ ಆಕ್ರೋಶ: ಇನ್ನು ಸ್ಫೋಟಕ ವಸ್ತುಗಳು ಸಿಡಿದು ಹಸುಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಸ್ಫೋಟಕ ವಸ್ತುಗಳನ್ನಿಟ್ಟ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಮೂಕಜೀವಿಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ರೈತ ಬ್ಯಾಲಾಳ ವೀರಪ್ಪ, ಮಠದ ಶಂಕ್ರಯ್ಯ ಅವರು ಸಾಕು ಬೆಳೆಸಿದ್ದ ಹಸುಗಳು ಮನೆಗೆ ಆಧಾರವಾಗಿದ್ದವು. ಮಾಲೀಕರ ಜೊತೆ ಪ್ರೀತಿಯಿಂದಲೇ ಇದ್ದವು. ಒಂದೊಂದು ಹಸು ತಲಾ ನಾಲ್ಕರಿಂದ ಐದು ಲೀಟರ್ ಹಾಲು ಕೊಡುತ್ತಿದ್ದವು. ಇವುಗಳನ್ನು ಕಳೆದುಕೊಂಡ ಮಾಲೀಕರು ಕಣ್ಣೀರು ಸುರಿಸುತ್ತಿದ್ದಾರೆ. ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಶಾಸಕ ಕರುಣಾಕರ ರೆಡ್ಡಿ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ರೈತರು ದೂರು ನೀಡಿದ್ದಾರೆ.












Click it and Unblock the Notifications