ತುಮ್ಕೋಸ್ ಅಧ್ಯಕ್ಷರ ಮೇಲೆ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ
ದಾವಣಗೆರೆ, ಫೆಬ್ರವರಿ 21: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಟ ಉತ್ಪನ್ನಗಳ ಮಾರಾಟ ಸಹಕಾರಿ ಸಂಘ (ತುಮ್ಕೋಸ್)ದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕಕ್ಕೆ ಇದೇ ತಿಂಗಳ 23ಕ್ಕೆ ಚುನಾವಣೆಗೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಶಿವಕುಮಾರ್ ರವರ ಮೇಲೆ ಈಗ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮಾಡಿರುವುದಾಗಿ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಎನ್ನುವವರು ಕೋರ್ಟ್ ಮೆಟ್ಟಿಲೇರಿದ್ದಾರೆ.
23ರಂದು ನಡೆಯುವ ಚುನಾವಣೆಯನ್ನು ತಡೆಯಬೇಕು ಎಂದು ಚನ್ನಗಿರಿ ಸಿವಿಲ್ ಕೋರ್ಟ್ ಗೆ ದೂರು ದಾಖಲಿಸಿದ್ದಾರೆ ಹರೀಶ್. ಅಲ್ಲದೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾಗ 2013 ರಿಂದ 19ರವರೆಗೆ ತುಮ್ಕೋಸ್ ಅಡಳಿತ ಮಂಡಳಿಗೆ ಹಾಗೂ ಶೇರುದಾರರಿಗೆ ಗೊತ್ತಿಲ್ಲದೆ 14 ಕೋಟಿಗಳಿಗಿಂತ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ದಾಖಲೆಗಳ ಸಹಿತ ಫೆಬ್ರವರಿ 4ರಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಚನ್ನಗಿರಿಯ ಸಿವಿಲ್ ಕೋರ್ಟ್ ಗೆ ದೂರು ದಾಖಲಿಸಿದ್ದು, 10ರಂದು ಕೋರ್ಟ್ ಡಿಸಿ ಸೇರಿದಂತೆ ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್ ಜಾರಿ ಮಾಡಿ ಚುನಾವಣೆ ನಡೆಸಬಾರದು ಎಂದು ತಿಳಿಸಿದೆ. ಆದರೆ ಇದನ್ನು ಧಿಕ್ಕರಿಸಿ ಚುನಾವಣೆ ನಡೆಸಲು ಮುಂದಾಗುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ತುಮ್ಕೋಸ್ ಅಡಳಿತ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಹರೀಶ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ತುಮ್ಕೋಸ್ ಅಧ್ಯಕ್ಷ ಶಿವಕುಮಾರ್, ಪ್ರತಿ ಬಾರಿ ಚುನಾವಣೆ ಬಂದಾಗ ಇಂತಹ ಆರೋಪಗಳು ಬರುವುದು ಸರ್ವೇ ಸಾಮಾನ್ಯ. ಆದರೆ ಇವೆಲ್ಲ ಸತ್ಯಕ್ಕೆ ದೂರವಾಗಿರುವಂಥದ್ದು. ನಮ್ಮ ಮೇಲೆ ಕೋಟ್ಯಾಂತರ ರೂಪಾಯಿ ಆರೋಪ ಮಾಡಿದವರಿಗೆ ನಾವು ಮೂರು ಬಾರಿ ನೋಟಿಸ್ ಕಳುಹಿಸಿದೆವು. ನಿಮ್ಮ ಆರೋಪಕ್ಕೆ ನಾವು ದಾಖಲೆ ಸಮೇತ ಉತ್ತರ ನೀಡುತ್ತೇವೆ ಎಂದು. ಆದರೆ ಇದುವರೆಗೂ ಯಾರೂ ಬಂದಿಲ್ಲ. ಹಾಗೂ ನೋಟಿಸ್ ಕಳುಹಿಸಿರುವುದಕ್ಕೆ ಉತ್ತರವನ್ನು ನೀಡಿಲ್ಲ. ಕಾನೂನು ಹೋರಾಟ ನಡೆಸಲು ನಾವು ಸಿದ್ಧ. ನಮ್ಮ ಸಹಕಾರಿ ಸಂಘದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದಿದ್ದಾರೆ.
ಇದೇ 23ಕ್ಕೆ ಅಡಳಿತ ಮಂಡಳಿಯ ಚುನಾವಣೆ ನಡೆಯಲಿದ್ದು, ಇದನ್ನು ನಡೆಸದಂತೆ ಆರ್ ಟಿಐ ಕಾರ್ಯಕರ್ತ ಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.












Click it and Unblock the Notifications